ಮೈಸೂರು: ಜೀತ ಮಾಡುತ್ತಿದ್ದ ನೇಪಾಳ ಮೂಲದ ಮಹಿಳೆ, ಇಬ್ಬರು ಮಕ್ಕಳ ರಕ್ಷಣೆ

ಕರ್ನಾಟಕದಲ್ಲಿ ಜೀತಪದ್ದತಿ ಆರೋಪವೊಂದು ಕೇಳಿಬಂದಿದ್ದು, ಜಮೀನೊಂದರಲ್ಲಿ ಬಲವಂತವಾಗಿ ಕೂಲಿಗಳಾಗಿ ದುಡಿಯುತ್ತಿದ್ದ ನೇಪಾಳ ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ನೇಪಾಳ ಮೂಲದ ಸಂತ್ರಸ್ಥ ಮಹಿಳೆ (IANS ಚಿತ್ರ)
ನೇಪಾಳ ಮೂಲದ ಸಂತ್ರಸ್ಥ ಮಹಿಳೆ (IANS ಚಿತ್ರ)
Updated on

ಮೈಸೂರು: ಕರ್ನಾಟಕದಲ್ಲಿ ಜೀತಪದ್ದತಿ ಆರೋಪವೊಂದು ಕೇಳಿಬಂದಿದ್ದು, ಜಮೀನೊಂದರಲ್ಲಿ ಬಲವಂತವಾಗಿ ಕೂಲಿಗಳಾಗಿ ದುಡಿಯುತ್ತಿದ್ದ ನೇಪಾಳ ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ಮೈಸೂರು ಜಿಲ್ಲೆಯ ಕೈಲಾಸಪುರ ಗ್ರಾಮದ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಮಕ್ಕಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ನೇಪಾಳ ಮೂಲದ ನಿರ್ಮಲಾ ಅವರು ತಮ್ಮ ಪತಿ ಗೋಪಾಲ್ ತಮ್ಮ ಇಬ್ಬರು ಮಕ್ಕಳೊಂದಿಗೆ ಈರೇಗೌಡರ ಮಾಲೀಕತ್ವದ ಜಮೀನಿನಲ್ಲಿ ಕೆಲಸಕ್ಕೆ ಬಂದಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.

ಗೌಡರು ಗೋಪಾಲ್‌ಗೆ 300 ರೂ., ನಿರ್ಮಲಾಗೆ 200 ರೂ ನಂತೆ ವೇತನ ನೀಡಿ ಬೆಳಿಗ್ಗೆ 4 ರಿಂದ ರಾತ್ರಿ 8 ರವರೆಗೆ ಕೆಲಸ ಮಾಡಲು ಸೂಚಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಈರೇಗೌಡ ದಂಪತಿಯನ್ನು ಬೇರ್ಪಡಿಸಿದ್ದಾರೆ. ಗೋಪಾಲ್ ಅವರನ್ನು ಕೊಡಗಿನಲ್ಲಿ ಇರಿಸಲಾಗಿದ್ದು, ಅವರ ಕುಟುಂಬದೊಂದಿಗೆ ಸಂವಹನ ನಡೆಸಲು ಬಿಡುತ್ತಿಲ್ಲ. ಮಾತ್ರವಲ್ಲದೇ ನಿರ್ಮಲಾ ಅವರಿಗೂ ಫೋನ್‌ನಲ್ಲಿ ಮಾತನಾಡಲು ಗೌಡರು ಅನುಮತಿ ನೀಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.

ಸಂತ್ರಸ್ತೆ ನಿರ್ಮಲಾ, ತನ್ನ ಮೇಲೆ ಅನೇಕ ಬಾರಿ ಹಲ್ಲೆ ಮಾಡಿ ಸಾಕಷ್ಟು ಬಾರಿ ತಿನ್ನಲು ಅನ್ನ-ಆಹಾರ ನೀಡಿಲ್ಲ. ಈರೇಗೌಡರು ತಮ್ಮ ಮಕ್ಕಳನ್ನು ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಜಮೀನ್ದಾರರು ತಮ್ಮ ಊರಿಗೆ ಮರಳದಂತೆ ತಮ್ಮನ್ನು ತಡೆದಿದ್ದಾರೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ತಹಸೀಲ್ದಾರ್‌ ಶ್ರೀನಿವಾಸ್‌, ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನೇತೃತ್ವದ ಜಿಲ್ಲಾಧಿಕಾರಿಗಳ ತಂಡ ಜಮೀನಿನ ಮೇಲೆ ದಾಳಿ ನಡೆಸಿ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ನಿರ್ಮಲಾ ಮತ್ತು ಅವರ ಮಕ್ಕಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವಶಕ್ಕೆ ಒಪ್ಪಿಸಲಾಗಿದ್ದು, ಆರೋಪಿ ಜಮೀನುದಾರನ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com