ಬೆಂಗಳೂರು: ಕೈಗೆಟಕುವ ದರದಲ್ಲಿ ಇಂಟರ್ನೆಟ್ ಸೌಕರ್ಯ, ಅಗ್ಗದ ಹ್ಯಾಂಡ್ಸೆಟ್ಗಳು, ಅಗ್ಗವಾಗಿರುವ ಕಂಪ್ಯೂಟರ್... ಈ ಎಲ್ಲಾ ಡಿಜಿಟಲ್ ಕ್ರಾಂತಿ ನಡೆದಿದ್ದು ಕೇವಲ ನಗರ ಪ್ರದೇಶದಲ್ಲಿ ಮಾತ್ರವೇ?...
ಕುಂದಾಪುರ ತಾಲೂಕಿನ ಅಜ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಬೇರು ಗ್ರಾಮಕ್ಕೆ ಇನ್ನೂ ನೆಟ್ ಸಂಪರ್ಕ ಸೌಲಭ್ಯವೇ ಸಿಕ್ಕಿಲ್ಲ. ಗ್ರಾಮ ಪಶ್ಚಿಮ ಘಟ್ಟಗಳ ಮಧ್ಯೆ ಇರುವುದೇ ಇದಕ್ಕೆ ಕಾರಣವೆಂದೂ ಹೇಳಲಾಗುತ್ತಿದೆ.
ಗ್ರಾಮದ ನಿವಾಸಿ ಸುರೇಂದ್ರ ಮಾತನಾಡಿ, ಫೋನ್'ನಲ್ಲಿ ಮಾತನಾಡಬೇಕೆಂದರೆ ಗ್ರಾಮದ ಜನರು ಸುಮಾರು ಎರಡು ಕಿ.ಮೀ. ದೂರ ಹೋಗಬೇಕಾಗಿದ. ಇನ್ನು ಇಂಟರ್ನೆಟ್ ಸೇವೆ ಪಡೆಯಬೇಕೆಂದರೆ ಇನ್ನೂ ದೂರ ಹೋಗಬೇಕಾಗುತ್ತಿದೆ ಎಂದು ಹೇಳಿದ್ದಾರೆ.
ಯಳಬೇರು ಗ್ರಾಮದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಅಜ್ರಿಗೆ ಹೋದರೆ ಮಾತ್ರ ಇಂಟರ್ ನೆಟ್ ಸೇವೆ ಸಿಗುತ್ತದೆ. ಉತ್ತಮ ಸಂಪರ್ಕ ಬೇಕೆಂದರೆ ಸಿದ್ದಾಪುರಕ್ಕೆ ಹೋಗಬೇಕು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಕ್ಷೇತ್ರಕ್ಕೆ ಬರುವುದರಿಂದ ಬೈಂದೂರು ಮತ್ತು ಸುತ್ತಮುತ್ತ ಪ್ರದೇಶಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಯಳಬೇರು ಗ್ರಾಮದಲ್ಲಿ ಇನ್ನೂ ಈ ಸೇವೆಗಳು ಲಭ್ಯವಾಗುವಂತೆ ಮಾಡಿಲ್ಲ. ಗ್ರಾಮಕ್ಕೆ ಬಿಎಸ್ಎನ್ಎಲ್ನ ಟವರ್ ಮಂಜೂರು ಮಾಡಲಾಗಿದೆ. ಆದರೂ ಇನ್ನೂ ಸ್ಫಾಪನೆಗೊಂಡಿಲ್ಲ ಎಂದು ತಿಳಿದುಬಂದಿದೆ.
ಯಳಬೇರುವಿನಲ್ಲಿ ಸುಮಾರು 70 ಮನೆಗಳಿವೆ. ಗ್ರಾಮದ ವಿದ್ಯಾರ್ಥಿಗಳು ಸಿದ್ದಾಪುರ, ಕುಂದಾಪುರ, ಶಂಕರನಾರಾಯಣ ಮತ್ತು ಕೋಟೇಶ್ವರ ಪಟ್ಟಣಗಳ ಶಾಲಾ-ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆಂದು ಗ್ರಾಮದ ನಿವಾಸಿಗಳು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿ.ವೈ.ರಾಘವೇಂದ್ರ ಅವರು, ಬೈಂದೂರು ತಾಲೂಕಿನಲ್ಲಿ 25 ಸ್ಥಳಗಳಿಗೆ 4ಜಿ ಟವರ್ ಮಂಜೂರಾಗಿದೆ. ಟವರ್ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಯಳಬೇರುವಿನಲ್ಲಿ ಸೂಕ್ತ ನಿವೇಶನದ ಕೊರತೆಯಿಂದ ಟವರ್ ನಿರ್ಮಿಸಲು ಸಾಧ್ಯವಾಗಿಲ್ಲ. ಸಂಪರ್ಕ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement