ಬಿಜೆಪಿ ದಲಿತ, ದಮನಿತ ವರ್ಗಗಳ ವಿರೋಧಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ದಲಿತ ಮತ್ತು ದಮನಿತ ವರ್ಗಗಳ ವಿರೋಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಬಿಜೆಪಿ ದಲಿತ ಮತ್ತು ದಮನಿತ ವರ್ಗಗಳ ವಿರೋಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.

ಮೇಲ್ಮನೆಯಲ್ಲಿ ಗುರುವಾರ ಪೂರಕ ಅಂದಾಜಿನ ಮೇಲಿನ ಚರ್ಚೆ ವೇಳೆ ವಿಪಕ್ಷಗಳಿಗೆ ತಿರುಗೇಟು ನೀಡಿದ ಅವರು, ಶೋಷಿತ ವರ್ಗಗಳ ಬಗ್ಗೆ ಬಿಜೆಪಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಮಹತ್ವಾ ಕಾಂಕ್ಷಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾಯ್ದೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ ತಮಿಳುನಾಡು ಹೊರತುಪಡಿಸಿದರೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ತಂದ ಏಕೈಕ ರಾಜ್ಯ ಕರ್ನಾಟಕ. ಈ ಕಾಯ್ದೆ ತಂದಿದ್ದು 2013ರ ಇದೇ ಬೆಳಗಾವಿ ಅಧಿವೇಶನದಲ್ಲಿ, ಇದೇ ಕಾಂಗ್ರೆಸ್‌ ಮತ್ತು ಇದೇ ಸಿದ್ದರಾಮಯ್ಯ. ಇದರಿಂದ ದಲಿತರ ಅಭಿವೃದ್ಧಿಗೆ ನೀಡುವ ಅನುದಾನ ಪ್ರಮಾಣ ನಾಲ್ಕೂವರೆ ಪಟ್ಟು ಹೆಚ್ಚಳ ಆಗಿದೆ. ಇದು ಅವಕಾಶ ವಂಚಿತ ಸಮುದಾಯಗಳ ಬಗ್ಗೆ ನಮ್ಮ ಬದ್ಧತೆಗೆ ಸಾಕ್ಷಿ. ನಿಮಗೂ (ಬಿಜೆಪಿಗೆ) ಬದ್ಧತೆ ಇದ್ದರೆ, ಉದ್ದೇಶಿತ ಕಾಯ್ದೆ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ನೋಡೋಣ ಎಂದು ಸವಾಲು ಹಾಕಿದರು

ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಕಳೆದ 9 ವರ್ಷಗಳಿಂದ ಯಾಕೆ ಮೌನವಾಗಿದೆ? ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ತರುವಂತೆ ಕೇಂದ್ರದ ಮೇಲೆ ಯಾಕೆ ಒತ್ತಡ ಹಾಕುತ್ತಿಲ್ಲ? 2008-2013ರ ವರೆಗೆ ಪ. ಜಾತಿ, ಪಂಗಡಕ್ಕೆ ನೀಡಿದ ಅನುದಾನ 22 ಸಾವಿರ ಕೋಟಿ ರೂ. 2013-2018ರ ವರೆಗೆ ಅದೇ ಸಮುದಾಯಕ್ಕೆ 82 ಸಾವಿರ ಕೋಟಿ ರೂ. ನೀಡಲಾಯಿತು. 2018ರ ಬಳಿಕ ಬಂದ ಸರಕಾರವು ಆ ಅನುದಾನವನ್ನು 30 ಸಾವಿರ ಕೋ. ರೂ.ಗೆ ಇಳಿಸಿದ್ದು ಯಾಕೆ ಎಂದು ತರಾಟೆಗೆ ತೆಗೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com