ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ: ವೇತನ ಹೆಚ್ಚಳ, ವಿಮಾ ಸೌಲಭ್ಯ ನೀಡಲು ಸರ್ಕಾರ ನಿರ್ಧಾರ- ಎಂ.ಸಿ ಸುಧಾಕರ್

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಮನವಿಗೆ ಸ್ಪಂದಿಸಿರುವ ಸರ್ಕಾರವು ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದೆ.
ಎಂ.ಸಿ ಸುಧಾಕರ್
ಎಂ.ಸಿ ಸುಧಾಕರ್

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಮನವಿಗೆ ಸ್ಪಂದಿಸಿರುವ ಸರ್ಕಾರವು ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಅತಿಥಿ ಉಪನ್ಯಾಸಕರ ವೇತನ 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದು, ಇದೇ ವೇಳೆ ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಅತಿಥಿ ಉಪನ್ಯಾಸಕರು ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಕಾಯಂ ಅವರ ಪ್ರಮುಖ ಬೇಡಿಕೆಯಾಗಿದೆ. ಅವರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅವರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಂದಾಜು ವಾರ್ಷಿಕ 68 ಕೋಟಿ ರೂ.ಗಳ ಹೆಚ್ಚಳದ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಘೋಷಿಸಿದರು. ಪರಿಷ್ಕೃತ ವೇತನ ನಿರ್ದೇಶನವು ಜನವರಿ 1, 2024 ರಿಂದ ಅನ್ವಯವಾಗಲಿದ್ದು, ಇಲಾಖೆಗೆ ಸೂಚನೆಗಳನ್ನು ನೀಡಲಾಗಿದೆ. ಬೋಧನೆಯಲ್ಲಿ 15 ರಿಂದ 19 ಗಂಟೆಗಳ ಕಾಲ ಕೊಡುಗೆ ನೀಡುವ ಉಪನ್ಯಾಸಕರಿಗೆ ಪ್ರತಿ ತಿಂಗಳು ಒಂದು ವೇತನ ಸಹಿತ ರಜೆ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.

ಕಾಲೇಜು ಪ್ರಾಂಶುಪಾಲರು ಇತರ ರೆಗ್ಯುಲರ್ ಉಪನ್ಯಾಸಕರೊಂದಿಗೆ ಅತಿಥಿ ಅಧ್ಯಾಪಕರ ತಾರತಮ್ಯ ಪ್ರಕರಣಗಳನ್ನು ಪರಿಶೀಲಿಸಿದ್ದು, ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಡಿಸೆಂಬರ್ 12 ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ ಎಂದು ಸುಧಾಕರ್ ವಿವರಿಸಿದರು.

ಕಾಲೇಜುಗಳಲ್ಲಿ ಅತಿಥಿ ಅಧ್ಯಾಪಕರ ನೇಮಕಾತಿ ಪ್ರಕ್ರಿಯೆ ಮತ್ತು ದಾಖಲೆ ಪರಿಶೀಲನೆಯನ್ನು ಸರಳಗೊಳಿಸಲು ಕೇಂದ್ರೀಕೃತ ಡೇಟಾಬೇಸ್ ಕೂಡ ರಚಿಸಲಾಗುವುದು. 10-15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಅವರು ನಿವೃತ್ತರಾದಾಗ ರಾಜ್ಯ ಸರ್ಕಾರವು ಪ್ರತಿ ವರ್ಷ 50,000 ರೂ. ಹಣ ನೀಡಲಾಗುವುದು ಎಂದು ಹೇಳಿದ್ದಾರೆ.

ಆರೋಗ್ಯ ವಿಮೆಗಾಗಿ, ಉಪನ್ಯಾಸಕರು ಪ್ರತಿ ತಿಂಗಳು 400 ರೂಪಾಯಿಗಳನ್ನು ನೀಡಬೇಕು, ಇದರಿಂದ  ಅವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ವಿಮೆ ಹೊಂದಲು ಅನುವು ಮಾಡಿಕೊಡುತ್ತದೆ ಎಂದು ಸುಧಾಕರ್ ಹೇಳಿದರು. ಈ ಸೌಲಭ್ಯ ಕಲ್ಪಿಸಲು ವಾರ್ಷಿಕ 6.53 ಕೋಟಿ ಅನುದಾನದ ಅಗತ್ಯವಿದೆ. ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅತಿಥಿ ಅಧ್ಯಾಪಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಮೇಲಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಲ್ಲ ಅತಿಥಿ ಉಪನ್ಯಾಸಕರು ಜನವರಿ 1, 2024 ರಿಂದ ತರಗತಿಗಳಿಗೆ ಹಾಜರಾಗಲು ವಿನಂತಿಸಲಾಗಿದೆ. ಈ ನಿರ್ಧಾರವನ್ನು ಒಪ್ಪಿಕೊಳ್ಳಲು ವಿಫಲವಾದರೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಾಗಿ ಸರ್ಕಾರ ಪರ್ಯಾಯ ಕ್ರಮಗಳನ್ನು  ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಒಂದು ತಿಂಗಳಿನಿಂದ 430 ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 12,372 ಕ್ಕೂ ಹೆಚ್ಚು ಉಪನ್ಯಾಸಕರು ತಮ್ಮ ಸೇವೆಗಳನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ 37 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಇನ್‌ಕ್ರಿಮೆಂಟ್, ವೇತನ ಸಹಿತ ರಜೆ, ಆರೋಗ್ಯ ಸವಲತ್ತು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವ ಎಂಸಿ ಸುಧಾಕರ್  ಘೋಷಣೆ ಮಾಡಿದರೂ, ಅದನ್ನುಅತಿಥಿ ಅಧ್ಯಾಪಕ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಬಹಿಷ್ಕರಿಸಿದ್ದಾರೆ.  ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.  ತಮ್ಮ  ಸೇವೆಯನ್ನು ಕಾಯಂಗೊಳಿಸಬೇಕೆಂಬ ಅವರ ಬೇಡಿಕೆಗೆ ಸರಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

ನರಗುಂದ ರೈತರ ಹೋರಾಟದ ಮಾದರಿಯಲ್ಲಿ ಧರಣಿಯನ್ನು ತೀವ್ರಗೊಳಿಸುತ್ತೇವೆ. ಸಿ & ಆರ್ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಸೇವೆಗಳನ್ನು ಕ್ರಮಬದ್ಧಗೊಳಿಸುವುದು ನಮ್ಮ ಏಕೈಕ ಬೇಡಿಕೆಯಾಗಿದೆ. ಜನವರಿ 1 ರಂದು ತುಮಕೂರಿನ ಸಿದ್ದಗಂಗಾ ಮಠದಿಂದ 80 ಕಿ.ಮೀ ಪಾದಯಾತ್ರೆ ಆರಂಭಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com