ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ: ಸಿಎಂ ಬೊಮ್ಮಾಯಿ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲು ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭರವಸೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ವಿಜಯಪುರ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲು ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭರವಸೆ ನೀಡಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಿಜಯಪುರ ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಆಯೋಜಿರುವ ಎರಡು ದಿನಗಳ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ, ಪತ್ರಕರ್ತರ ಬೇಡಿಕೆಗಳ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಈ ವೇಳೆ, 'ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಳ ಮಾಡಲು ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು. ಪತ್ರಿಕೆಗಳಿಗೆ ನೀಡುವ ಸರ್ಕಾರಿ ಜಾಹೀರಾತುಗಳ ದರ ಪರಿಷ್ಕರಣೆ ಮಾಡಲಾಗುವುದು. ಪತ್ರಕರ್ತರನ್ನು ಯಶಸ್ವಿನಿ ಯೋಜನೆ ಸೇರ್ಪಡೆಗೂ ಅಗತ್ಯ ಕ್ರಮಕೈಗೊಳಲಾಗುವುದು. ಜತೆಗೆ, ನಗರ, ಪಟ್ಟಣಗಳ ವಸತಿ ಯೋಜನೆಯಲ್ಲಿ ಪತ್ರಕರ್ತರಿಗೆ ನಿವೇಶನ ಮೀಸಲಿಡಲು ಆದ್ಯತೆ ನೀಡಲಾಗುವುದು ಎಂದರು.

ಪತ್ರಕರ್ತರ ಸಮ್ಮೇಳನ ಎಂಬುದು ಆಧುನಿಕ ಚಿಂತಕರ ಸಮ್ಮೇಳನ ಇದ್ದಂತೆ. ಪತ್ರಕರ್ತರು, ರಾಜಕಾರಣಿಗಳ‌ ನಡುವೆ ಅವಿನಾಭಾವ ಸಂಬಂಧ ಇದೆ.‌ ಅದು  ಗಂಡ, ಹೆಂಡತಿ ಸಂಬಂಧ ಇದ್ದಂತೆ. ಪತ್ರಕರ್ತರು, ರಾಜಕಾರಣಿಗಳು ತಮ್ಮ ತಮ್ಮ ಗಡಿ ದಾಟಬಾರದು. ಇಬ್ಬರ ನಡುವೆ ಆರೋಗ್ಯಕರ ಸಂಬಂಧ ಇದ್ದರೆ ರಾಜ್ಯದ ಆರೋಗ್ಯ ಚೆನ್ನಾಗಿರುತ್ತದೆ. ಪತ್ರಕರ್ತರು ಪ್ರಾದೇಶಿಕವಾಗಬಾರದು, ಅಖಂಡ ಕರ್ನಾಟಕದ ಪತ್ರಕರ್ತರಾಗಬೇಕು. ಉತ್ತರ, ದಕ್ಷಿಣ ಎಂಬ ಭೇದಭಾವ ಇರಬಾರದು. ಪತ್ರಕರ್ತ ವೃತ್ತಿ ಗಟ್ಟಿಗೊಳಿಕೊಳ್ಳಲು ವಿಶ್ವಾಸಾರ್ಹತೆ ಮುಖ್ಯ.‌ಅತ್ತ ಎಲ್ಲರೂ ಗಮನಹರಿಸಬೇಕು ಎಂದರು.

ಅಂತೆಯೇ ‘ನಾಡಿನ ದೊರೆ’ ಎಂದು ನನ್ನನ್ನು ಕರೆಯಬೇಡಿ, ನನಗೆ ಕಸಿವಿಸಿಯಾಗುತ್ತದೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ವಿತ್ವದಲ್ಲಿ ಇದೆ.‌ ಇಲ್ಲಿ ಪ್ರಜೆಗಳೇ ಪ್ರಭುಗಳು.‌ ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಾವು. ಜನ ಸೇವಕನ ಕಾರ್ಯ ನಮ್ಮದು. ಹೀಗಾಗಿ ನಾಡಿನ ದೊರೆ ಎಂದು ಕರೆಯಬೇಡಿ ಎಂದು ವಿನಂತಿಸಿದರು. ವಿಧಾನ ಪರಿಷತ್‌ಗೆ ಹಿರಿಯ ಪತ್ರಕರ್ತರ ನೇಮಕ ಮಾಡಬೇಕು ಎಂಬ ಸಂಘದ ಬೇಡಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿಧಾನ ಪರಿಷತ್‌ಗೆ ನೇಮಕವಾಗಲು ನಮ್ಮಲ್ಲೇ ಪೈಪೋಟಿ ಬಹಳ ಇದೆ. ಆದರೂ, ಅವಕಾಶ ನೀಡಲು ಯೋಚಿಸಲಾಗುವುದು ಎಂದರು.

ವಿಜಯಪುರದ ಬಿಳಿ ಜೋಳದ ಸತ್ವ ಬೇರೆ ಜೋಳದಲ್ಲಿ ಇಲ್ಲ
ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳ. ಇದರಲ್ಲಿ ಇರುವ ಸತ್ವ ಬೇರೆ ಜೋಳದಲ್ಲಿ ಇಲ್ಲ. ವಿಜಯಪುರ ಜೋಳದ ರೀತಿ ಜನರೂ ಸತ್ವಯುತವಾಗಿದ್ದಾರೆ. ಜಿಲ್ಲೆಯ ಕೃಷ್ಣಾ ನದಿ ನೀರು ಐದು ಲಕ್ಷ ಹೆಕ್ಟೇರ್ ಭೂಮಿಗೂ ತಲುಪಬೇಕಿದೆ ಎಂದರು. ಆಣೆಕಟ್ಟೆ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ಸಂತ್ರಸ್ತರ ಕನಸು ನನಸಾಗುವಂತೆ ಕೆಲಸ. ನಾನು‌ ಜಲ ಸಂಪನ್ಮೂಲ ಸಚಿವನಾಗಿದ್ದಾಗ, ಕೃಷ್ಣಾ ಯೋಜನೆಯಲ್ಲಿ ಸ್ಕೀಮ್ ಎ, ಸ್ಕೀಮ್ ಬಿ ಎಂದು ಹೇಳಿ ಅನೇಕ ನೀರಾವರಿ ಯೋಜನೆಗಳಿಗೆ ಅಧಿಕಾರಿಗಳು ಅಡ್ಡಿಪಡಿಸಿದ್ದರು.‌ ಕೃಷ್ಣಾ ಎಂದರೆ ಒಂದೇ ಸ್ಕೀಮ್. ‌ಎ, ಬಿ ಎಂದು ಪರಿಗಣಿಸಬೇಡಿ ಎಂದು ಹೇಳಿ ‘ಸ್ಕೀಮ್ ಬಿ’ ಅಡಿ ಬರುವ ಒಂಬತ್ತು ಯೋಜನೆಗಳಲ್ಲಿ ನಾನು ಏಳು ಯೋಜನೆ ಪ್ರಾರಂಭಿಸಿದೆ. ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು, ‘ಯೂಟ್ಯೂಬ್ ಚಾನಲ್‌ಗಳ ಹಾವಳಿಯಿಂದ ನೈಜ ಪತ್ರಕರ್ತರು ಕಳೆದುಹೋಗುವ ಸಂದರ್ಭ ಒದಗಿ ಬಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಆಧುನಿಕ ಬದಲಾವಣೆಗೆ ಪತ್ರಕರ್ತರು ಹೊಂದಿಕೊಳ್ಳಬೇಕಿದೆ ಎಂದರು. ಸಂಘದ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ವರ್ಷಕ್ಕೊಂದು, ತಿಂಗಳಿಗೊಂದು ಪತ್ರಿಕೆ ತರುವವರು ಪತ್ರಕರ್ತರು ಎಂದು ಬೀಗುತ್ತಿದ್ದಾರೆ. ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನೈಜ ಪತ್ರಕರ್ತರು ಮರೆಯಾಗುವ ಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com