ಬೆಂಗಳೂರು: ಚಿತ್ರಕಲಾ ಪರಿಷತ್ ನ ಪ್ರಸಿದ್ಧ ಚಿತ್ರಸಂತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ಯಾನ್ ವಾಸ್ ಮೇಲೆ ಚಿತ್ರ ಬಿಡಿಸುವ ಮೂಲಕ ಚಿತ್ರಸಂತೆ ಉದ್ಘಾಟಿಸಿದರು. ಬಳಿಕ ತಮಗಿಷ್ಟವಾದ ಕಲಾಕೃತಿಗಳನ್ನು ಖರೀದಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಂಸದ ಪಿ. ಸಿ. ಮೋಹನ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ. ಮನದಾಳದ ಮಾತುಗಳು ಮತ್ತು ಭಾವನೆಗಳನ್ನು ಚಿತ್ರಕಲೆ ಮೂಲಕ ವ್ಯಕ್ತಪಡಿಸಲಾಗುತ್ತದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಭಾಗಗಳಲ್ಲಿಯೂ ಚಿತ್ರ ಸಂತೆ ಆಯೋಜಿಸುವಂತೆ ಸಲಹೆ ನೀಡಿದರು. ಮುಂದಿನ ವರ್ಷದಿಂದ ಒಂದು ದಿನದ ಬದಲು 2 ದಿನ ಚಿತ್ರ ಸಂತೆ ಆಯೋಜಿಸುವಂತೆ ಮುಖ್ಯಮಂತ್ರಿ ಹೇಳಿದರು.
ದೇಶ-ವಿದೇಶಗಳ ನೂರಾರು ಕಲಾವಿದರ ಕುಂಚದಿಂದ ಅರಳಿದ ಸಾವಿರಾರು ಕಲಾಕೃತಿಗಳು ಚಿತ್ರಸಂತೆಯಲ್ಲಿ ಪ್ರದರ್ಶನಗೊಂಡಿದ್ದು, ಕುಮಾರ ಕೃಪ, ಕ್ರೆಸೆಂಟ್ ರಸ್ತೆಯಲ್ಲಿ ಕಲಾ ಜಗತ್ತು ಕಂಗೊಳಿಸಿತು. 100 ರೂ.ನಿಂದ ಹಿಡಿದು ಲಕ್ಷಾಂತರ ರೂ.ಮೌಲ್ಯದ ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ಕಲಾಸಕ್ತರನ್ನು ಮನಸೂರೆಗೊಳಿಸಿತು.
Advertisement