ಪ್ರಧಾನಿ ಮೋದಿ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಎಂದುಕೊಳ್ಳಬಾರದು: ಸಿಎಂ ಬೊಮ್ಮಾಯಿ

ಮುಸ್ಲಿಂ ಸಮುದಾಯದವರ ಜತೆ ಸೌಹಾರ್ದವಾಗಿರಿ, ಎಲ್ಲರನ್ನೂ ಸಮಾನವಾಗಿ ನೋಡಿ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಎಂದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಮೈಸೂರು: ಮುಸ್ಲಿಂ ಸಮುದಾಯದವರ ಜತೆ ಸೌಹಾರ್ದವಾಗಿರಿ, ಎಲ್ಲರನ್ನೂ ಸಮಾನವಾಗಿ ನೋಡಿ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಎಂದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಆಯಾ ಕ್ಷೇತ್ರದ ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡಿದ್ದಾರೆ. ದೇಶವನ್ನು ಮುನ್ನಡೆಸುವಾಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಚುನಾವಣೆ ದೃಷ್ಟಿಯಿಂದ ಅವರನ್ನು ನೋಡಬಾರದು ಎಂಬ ಅರ್ಥದಲ್ಲಿ ಅವರು ಹೇಳಿದ್ದಾರೆಂದು ಸ್ಪಷ್ಟಪಡಿಸಿದರು.

ಮುಸ್ಲಿಂ ಸಮುದಾಯಕ್ಕೆ ಶಿಕ್ಷಣದ ಕೊರತೆ, ಬಡತನ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಸಮಾನವಾಗಿ ಕರೆದೊಯ್ಯುವಂತೆ ಪ್ರಧಾನಿ ಹೇಳಿದ್ದಾರೆ. ನಮ್ಮ ಪಕ್ಷದ ಕೆಲವು ನಾಯಕರು ಮುಸ್ಲಿಂ ಮತ ಬೇಡ ಎಂದಿರುವುದು ಅವರ ವೈಯುಕ್ತಿಕ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಹೇಳಿದ್ದಾರೆ ಎಂದು ತಿಳಿಸಿದರು.

ಬಳಿಕ ಬಿಜೆಪಿ ಟಿಕೆಟ್ ಘೋಷಣೆ ವಿಚಾರವಾಗಿ ಮಾತನಾಡಿದ, ಚುನಾವಣೆ ಗೆಲ್ಲಲು ನಮ್ಮದು ವಿಭಿನ್ನ ತಂತ್ರಗಾರಿಕೆ ಇದ್ದು, ಯಾವ ರೀತಿಯ ಕಾರ್ಯತಂತ್ರವನ್ನು ಹೆಣೆಯಲಾಗಿದೆ ಎಂಬುದನ್ನು ಕಾದು ನೋಡಿ ಎಂದರು.

ಜೆಡಿಎಸ್, ಕಾಂಗ್ರೆಸ್‌ನವರು ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿರಬಹುದು. ಅವರು ಮಾಡಿದರು ಎಂದು ನಾವೂ ಅವರನ್ನೇ ಅನುಸರಿಸಬೇಕಿಲ್ಲ. ಕಾಲ ಬಂದಾಗ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಮಂಡ್ಯದಲ್ಲಿ‌ ಉಸ್ತುವಾರಿ ಸಚಿವ ಆರ್.ಅಶೋಕ್‌ಗೆ ಗೋಬ್ಯಾಕ್ ಪೋಸ್ಟರ್ ವಿಚಾರವಾಗಿ ಪ್ರತಿಕ್ರಿಸಿ, ಉಸ್ತುವಾರಿ ನೇಮಕಕ್ಕೆ ಮಂಡ್ಯದಲ್ಲಿ ಸ್ವಪಕ್ಷದಿಂದ ಯಾವುದೇ ವಿರೋಧ ಇಲ್ಲ. ಆರ್.ಅಶೋಕ್‌ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಖುಷಿಯಿಂದ ಇದ್ದಾರೆ‌. ಯಾರೋ 10 ಜನ ಪೋಸ್ಟರ್ ಹಾಕುವುದರಿಂದ ಏನೂ ಆಗಲ್ಲ. ಇದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಈ ಬಾರಿಯೂ ಜನಪರ ಬಜೆಟ್ ನೀಡುವೆ
ಈ ನಡುವೆ ರಾಜ್ಯ ಬಜೆಟ್ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಕಳೆದ ಬಾರಿಯಂತೆ ಈ ಬಾರಿಯೂ ಜನಪರವಾದ ಬಜೆಟನ್ನು ನೀಡುತ್ತೇವೆ. ಇಡೀ ಕರ್ನಾಟಕ ಬಜೆಟ್ ಕುರಿತು ನಿರೀಕ್ಷೆ ಮಾಡುತ್ತಿದೆ. ಅದರಲ್ಲಿ ಮೈಸೂರು ಕೂಡ ಬಹಳ ಪ್ರಮುಖವಾಗಿರುವುದು ಎಂದು ಹೇಳಿದರು.

ಟಾಸ್ಕ್ ಪೋರ್ಸ್ ತಂಡ ಚಿರತೆಯನ್ನು ಮೈಸೂರಿನಲ್ಲಿ ಸೆರೆ ಹಿಡಿದಿದ್ದಾರೆ. ಹಾಸನ ಬೇರೆ ಬೇರೆ ಭಾಗದಲ್ಲಿಯೂ ಈ ಸಮಸ್ಯೆ ಇದೆ, ರಾಜ್ಯಾದ್ಯಂತ ವಿಸ್ತರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಟಾಸ್ಕ್ ಪೋರ್ಸ್ ನಿರಂತರವಾಗಿ ಇರಲಿದೆ. ಯಾವುದೋ ಒಂದು ಪ್ರಕರಣ ಹಿಡಿದ ನಂತರ ಅದನ್ನು ತೆರವುಗೊಳಿಸಲ್ಲ, ಆನೆಗೂ ಕೂಡ ಖಾಯಂ ಟಾಸ್ಕ್ ಪೋರ್ಸ್ ಮಾಡಿದ್ದೇವೆ, ಈ ಭಾಗದಲ್ಲಿ ಆನೆ, ಚಿರತೆ ಉಪಟಳ ಹೆಚ್ಚಿದೆ ಅದರಂತೆ ಚಿರತೆಗೂ ಕೂಡ ಇರಲಿದೆ. ಬೇಕಾಗಿರುವ ಮಟೀರಿಯಲ್, ವಾಹನ, ವಿಶೇಷವಾಗಿ ಅನುದಾನ ಎಲ್ಲವನ್ನೂ ಕೂಡ ಕೊಡುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಹೇಳಿದ್ದೇನೆ. ನೀವು ಹಳ್ಳಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತರಬೇತಿ ನೀಡಿ, ಗಾರ್ಡ್ ಗಳು ಎಲ್ಲೆಲ್ಲಿ ನಿಯಂತ್ರಣ ಮಾಡುತ್ತಾರೋ ಅಲ್ಲಿ ಅವರನ್ನು ಹಾಕಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೇಳಿದ್ದೇನೆ. ಮುಖ್ಯವಾಗಿ ಅರಣ್ಯದಂಚಿನಲ್ಲಿ ಇರುವಂತಹ ಜನರಿಗೆ ಧೈರ್ಯವನ್ನು ಕೊಡುವ ಅವಶ್ಯಕತೆ ಇದೆ. ಪ್ರಾಣಿಗಳ ಚಲನವಲನ, ಅವರ ವರ್ತನೆ, ಯಾವ ರೀತಿ ನಡೆದುಕೊಳ್ಳಬೇಕು, ಗುಂಪಲ್ಲಿ ಯಾವ ರೀತಿ, ವ್ಯಕ್ತಿಗತವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಮಾಹಿತಿಗಳನ್ನು ಅವರಿಗೆ ನೀಡಿ, ಸಾಯಂಕಾಲ ಅವರಿಗೆ ಹೊರಗಡೆ ತಿರುಗಾಡದಂತೆ ಹೇಳಬೇಕು ಎಂದಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com