ಮುಂಗಾರು ಕೊರತೆ: ರಾಜ್ಯದ ಜಲಾಶಯಗಳಲ್ಲಿ ಶೇ.17ರಷ್ಟು ನೀರು ಮಾತ್ರ ಬಾಕಿ; ಕುಡಿಯುವ ನೀರಿಗೆ ಸಮಸ್ಯೆ ಸಾಧ್ಯತೆ!

ಮುಂಗಾರು ಮಳೆ ಆಗಮನ ದಿನೇ ದಿನೇ ವಿಳಂಬವಾಗುತ್ತಿರುವ ಬೆನ್ನಲ್ಲೇ ರಾಜ್ಯದ ಹಲವು ಜಲಾಶಯಗಳು ಬತ್ತಿ ಹೋಗುತ್ತಿದ್ದು, ನೀರಿನ ಮಟ್ಟ ಕುಸಿಯುವ ಜೊತೆಗೆ ಒಳಹರಿವು ಕೂಡ ಕ್ಷೀಣಿಸತೊಡಗಿದೆ.
ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ನೀರಿನಲ್ಲಿ ಮುಳುಗಿದ್ದ ಸೂರ್ಯನಾರಾಯಣ ದೇವಸ್ಥಾನ ಮಂಡ್ಯ ಜಿಲ್ಲೆಯ ಹಿನ್ನೀರಿನಲ್ಲಿ ಮತ್ತೆ ಕಾಣಿಸಿಕೊಂಡಿದೆ. Express Photo Udayashankar S
ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ನೀರಿನಲ್ಲಿ ಮುಳುಗಿದ್ದ ಸೂರ್ಯನಾರಾಯಣ ದೇವಸ್ಥಾನ ಮಂಡ್ಯ ಜಿಲ್ಲೆಯ ಹಿನ್ನೀರಿನಲ್ಲಿ ಮತ್ತೆ ಕಾಣಿಸಿಕೊಂಡಿದೆ. Express Photo Udayashankar S

ಬೆಂಗಳೂರು: ಮುಂಗಾರು ಮಳೆ ಆಗಮನ ದಿನೇ ದಿನೇ ವಿಳಂಬವಾಗುತ್ತಿರುವ ಬೆನ್ನಲ್ಲೇ ರಾಜ್ಯದ ಹಲವು ಜಲಾಶಯಗಳು ಬತ್ತಿ ಹೋಗುತ್ತಿದ್ದು, ನೀರಿನ ಮಟ್ಟ ಕುಸಿಯುವ ಜೊತೆಗೆ ಒಳಹರಿವು ಕೂಡ ಕ್ಷೀಣಿಸತೊಡಗಿದೆ.

ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ಶೇ.17ರಷ್ಟು ಮಾತ್ರವೇ ಇದ್ದು, ಇದರಿಂದಾಗಿ ರಾಜ್ಯದಾದ್ಯಂತ ಕುಡಿಯುವ ನೀರಿಗೆ ಸಮಸ್ಯೆಗಳು ಎದುರಾಗಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ನೀಡಿರುವ ಪ್ರಕಾರ, ಕಳೆದ ವರ್ಷ ಜುಲೈ 1 ರ ಸಮಯದಲ್ಲಿ ಜಲಾಶಯಗಳಲ್ಲಿನ 293.75 ಟಿಎಂಸಿ ನೀರಿತ್ತು. ಆದರೆ, ಈ ಪ್ರಸಕ್ತ ಸಾಲಿನಲ್ಲಿ ಈ ಮಟ್ಟ 148.22 ಟಿಎಂಸಿಯಷ್ಟಿದೆ. ಒಟ್ಟು ಸಂಗ್ರಹ ಸಾಮರ್ಥ್ಯ 865.20 ಟಿಎಂಸಿ ಅಡಿ ಆಗಿದೆ ಎಂದು ತಿಳಿಸಿದೆ.

ಜುಲೈನಲ್ಲಿ ವಿಶೇಷವಾಗಿ ಜುಲೈ 3-7 ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತು.

ಪರಿಸ್ಥಿತಿ ಹೀಗೆಯೇ ಮುಂದುವರೆದಿದ್ದಾದರೆ, ಕುಡಿಯುವ ನೀರಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗುವುದಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಮತ್ತು ಕೆಎಸ್‌ಡಿಎಂಸಿ ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್ ಮತ್ತು ಮೇನಲ್ಲಿ ಮಳೆಯಾದರೆ ನೀರಿನ ಸಂಗ್ರಹವು ಜುಲೈನಲ್ಲಿ ಪ್ರಾರಂಭವಾಗುತ್ತದೆ. ವಾಸ್ತವವಾಗಿ, ಏಪ್ರಿಲ್-ಮೇ ತಿಂಗಳಲ್ಲಿ ಪರಿಸ್ಥಿತಿ ಉತ್ತಮವಾಗಿತ್ತು. ಜುಲೈ ತಿಂಗಳಿನಲ್ಲಿ ಮಳೆಯಾಗಿದ್ದೇ ಆದರೆ, ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ಪರಿಹರಿಸಲು ಸಹಾಯವಾಗುತ್ತದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

IMD ಅಂಕಿಅಂಶಗಳ ಪ್ರಕಾರ, ಒಟ್ಟಾರೆಯಾಗಿ ರಾಜ್ಯವು ಶೇ.52ರಷ್ಟು ಮಳೆಯ ಕೊರತೆಯನ್ನು ಎದುರಿಸುತ್ತಿದ್ದು, ಈ ವರೆಗೂ ರಾಜ್ಯದಲ್ಲಿ 100.1 ಮಿಮೀ ಮಳೆಯಾಗಿದೆ. ಜಲಾಶಯಗಳಲ್ಲಿನ ನೀರನ್ನು ಮುಟ್ಟದೆ ಹಾಗೆಯೇ ಬಿಟ್ಟರೆ 2-3 ವರ್ಷಗಳ ಕಾಲ ನೀರಿನ ಸಮಸ್ಯೆಗಳು ಎದುರಾಗುವುದಿಲ್ಲ. ಆದರೆ, ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಜಲಾಶಯಗಳಿಂದ ನೀರು ತೆಗೆಯುವುದು ಅತ್ಯಗತ್ಯವಾಗಿದೆ. ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಜಲಾಶಯ ನೀರಿನ ಮಟ್ಟವನ್ನು ಸಂಪೂರ್ಣವಾಗಿ ಬಳಕೆ ಮಾಡಿದ್ದೇ ಆದರೆ, ಮುಂದಿನ 30-35 ದಿನಗಳ ಕಾಲ ಮಾತ್ರ ನೀರು ಇರಲಿದೆ. ರೈತರಿಗೆ ನೀರು ಸರಬರಾಜು ಮಾಡಬೇಕಾಗಿರುವುದರಿಂದ ಹೆಚ್ಚಿನ ಒತ್ತಡವಿದೆ, ಇದು ಪ್ರಮುಖ ಆದ್ಯತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಅತಿ ಹೆಚ್ಚು ನೀರಿನ ಕೊರತೆ ಇರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ ಸರ್ಕಾರ ಮತ್ತು ಜಲಸಂಪನ್ಮೂಲ ಇಲಾಖೆ ಮಾತ್ರ ಕೊಳವೆಗಳಲ್ಲಿನ ನೀರು ಸೋರಿಕೆ ಸಮಸ್ಯೆ, ಮಳೆ ನೀರು ಕೊಯ್ಲು ಮತ್ತು ಜಲಾನಯನ ಪ್ರದೇಶಗಳಲ್ಲಿ ನೀರಿನ ಸಂಗ್ರಹಕ್ಕಾಗಿ ಹೊಂಡಗಳ ರಚನೆ ಮಾಡುವತ್ತ ಮಾತ್ರ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com