ಇಂದಿನಿಂದ 16ನೇ ವಿಧಾನಸಭೆ ಮೊದಲ ಅಧಿವೇಶನ: ಗ್ಯಾರಂಟಿ ಜಾರಿ ಕುರಿತು ಸರ್ಕಾರ-ಬಿಜೆಪಿ ನಡುವೆ ಭಾರೀ ವಾಗ್ಯುದ್ಧ ನಿರೀಕ್ಷೆ

ಇಂದಿನಿಂದ ವಿಧಾನಮಂಡಲ​​​ ಅಧಿವೇಶನ ಆರಂಭವಾಗಲಿದ್ದು ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್​ ಮಂಡನೆ ಮಾಡಲಿದ್ದಾರೆ.
ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನದ ಮುನ್ನಾದಿನ ಭಾನುವಾರ ವಿಧಾನಸೌಧ ನೌಕರರು ವಿಧಾನಸೌಧದ ಸಭಾಂಗಣವನ್ನು ಸ್ವಚ್ಛಗೊಳಿಸಿದರು.
ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನದ ಮುನ್ನಾದಿನ ಭಾನುವಾರ ವಿಧಾನಸೌಧ ನೌಕರರು ವಿಧಾನಸೌಧದ ಸಭಾಂಗಣವನ್ನು ಸ್ವಚ್ಛಗೊಳಿಸಿದರು.

ಬೆಂಗಳೂರು: ಇಂದಿನಿಂದ ವಿಧಾನಮಂಡಲ​​​ ಅಧಿವೇಶನ ಆರಂಭವಾಗಲಿದ್ದು ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್​ ಮಂಡನೆ ಮಾಡಲಿದ್ದಾರೆ.

16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದ್ದು ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಚಾರ, ಬಿಜೆಪಿ ಅವಧಿಯ ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಹಲವು ವಿವಾದಿತ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡುವ ವಿಚಾರ ಹಾಗೂ ಇತರೆ ಹಲವು ವಿಷಯಗಳ ಬಗ್ಗೆ​​ ಚರ್ಚೆ ನಡೆಯುವ ಸಾಧ್ಯತೆ ಇದೆ.

ಸದನದಲ್ಲಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ, ಚರ್ಚೆ ವೇಳೆ ಪ್ರತಿಪಕ್ಷ ಬಿಜೆಪಿ ಪಠ್ಯಪುಸ್ತಕಗಳಿಂದ ಕೆಲವು ಪಾಠಗಳನ್ನು ತೆಗೆದುಹಾಕಿರುವ ವಿಚಾರ ಮತ್ತು ಗೋಹತ್ಯೆ ವಿರೋಧಿ ಕಾನೂನು ವಿಚಾರವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ.
 
ಇಂದಿನಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜುಲೈ 7 ರಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಜುಲೈ 14ರಂದು ಅಧಿವೇಶನ ಮುಕ್ತಾಯವಾಗಲಿದೆ.

ಈ ನಡುವೆ ಅಧಿವೇಶನದ ವೇಳೆ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಜಾರಿಗೆ ಒತ್ತಾಯಿಸಿ ಬಿಜೆಪಿ ಪ್ರತಿತಿಭಟನೆಯನ್ನು ಹಮ್ಮಿಕೊಂಡಿದೆ.

‘ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ’ ಶೀರ್ಷಿಕೆ ಅಡಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲು ಬಿಜೆಪಿ ತೀರ್ಮಾನ ಮಾಡಿದೆ.

ಗಾಂಧಿ ಪ್ರತಿಮೆ ಬಳಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ಮಾಡಿದರೆ, ಸದನದ ಒಳಗೆ ಹೋರಾಟ ನಡೆಸಲು ಬಿಜೆಪಿ ಶಾಸಕರು ಮುಂದಾಗಿದ್ದಾರೆ. ನಾಳೆ ಫ್ರೀಡಂಪಾರ್ಕ್​ನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ನಿನ್ನೆಯಷ್ಟೇ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು, ಗ್ಯಾರಂಟಿ ಯೋಜನೆಗಳ ಜಾರಿಗೊಳಿಸದೆ ಜನರನ್ನು ವಂಚಿಸುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿದ್ಯುತ್ ದರ ಏರಿಕೆಗೆ ಸರ್ಕಾರವೇ ಕಾರಣ. ನಾವು ಸದನದ ಒಳಗೆ ಮತ್ತು ಹೊರಗೆ ಈ ಹೋರಾಟವನ್ನು ನಡೆಸಲಿದ್ದೇವೆಂದು ಹೇಳಿದರು.

ಜುಲೈ 4 ರಿಂದ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದ 10 ಕೆಜಿ ಅಕ್ಕಿ ಈಗ 5 ಕೆಜಿಗೆ ಇಳಿದಿದೆ. ಮೊದಲು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ನೀಡಿದ್ದರು. ಆದರೆ ಈಗ ಅವರು 10 ತಿಂಗಳ ಸರಾಸರಿಯನ್ನು ಪರಿಗಣಿಸುತ್ತಿದ್ದೇವೆಂದು ಹೇಳುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಪ್ರತಿ ಮಹಿಳೆಗೆ ರೂ.2,000 ನೀಡುವುದಾಗಿ ಹೇಳಿದ್ದರು. ನಂತರ ಕುಟುಂಬದ ಒಬ್ಬ ಮಹಿಳೆಗೆ ಮಾತ್ರ ಎಂದು ಹೇಳಿದರು. ಇದು ಕುಟುಂಬದಲ್ಲಿ ಜಗಳಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com