ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ನೀರಿನ ಮಟ್ಟ: ತಮಿಳು ನಾಡು ಜೊತೆ ಮತ್ತೆ ಸಂಘರ್ಷ ಸಾಧ್ಯತೆ

ಕಾವೇರಿ ಜಲಾನಯನ ಪ್ರದೇಶದಲ್ಲಿನ ಪ್ರಮುಖ ಜಲಾಶಯಗಳಲ್ಲಿ ನೀರು ತಗ್ಗಿರುವುದರಿಂದ,  ಮುಂಗಾರು ಮಳೆ ಆಗಮನ ಕೆಲವು ವಾರಗಳ ಕಾಲ ವಿಳಂಬವಾಗಿರುವುದರಿಂದ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು/ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿನ ಪ್ರಮುಖ ಜಲಾಶಯಗಳಲ್ಲಿ ನೀರು ತಗ್ಗಿರುವುದರಿಂದ,  ಮುಂಗಾರು ಮಳೆ ಆಗಮನ ಕೆಲವು ವಾರಗಳ ಕಾಲ ವಿಳಂಬವಾಗಿರುವುದರಿಂದ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. 

ಕಳೆದ ಐದು ವರ್ಷಗಳಲ್ಲಿ ಯಥೇಚ್ಛವಾಗಿ ಮಳೆಯಾದ ಕಾವೇರಿ ಜಲಾನಯನ ಪ್ರದೇಶವು ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೆಆರ್‌ಎಸ್ ಜಲಾಶಯಗಳ ಒಟ್ಟು ಸಂಗ್ರಹಣೆಯೊಂದಿಗೆ 114 ಟಿಎಂಸಿ ಅಡಿ ಸಾಮರ್ಥ್ಯಕ್ಕೆ ಬದಲಾಗಿ ಕೇವಲ 30.5 ಟಿಎಂಸಿ ಅಡಿಗೆ ಇಳಿದಿದೆ. 

ಇನ್ನೆರಡು ವಾರಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆ ಮಳೆಯಾಗದಿದ್ದರೆ ಹೊಸ ಕಾಂಗ್ರೆಸ್ ಸರ್ಕಾರಕ್ಕೆ ಚಿಂತೆಯಾಗಬಹುದು ಎನ್ನಲಾಗುತ್ತಿದೆ. ಬೆಂಗಳೂರು, ಮೈಸೂರು ಮತ್ತು ಇತರ ಪಟ್ಟಣಗಳಿಗೆ ಕುಡಿಯುವ ನೀರಿನ ಸರಬರಾಜಿಗೆ ಹೊಡೆತ ಬೀಳಬಹುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಕೊಡಗಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 50ಕ್ಕಿಂತ ಕಡಿಮೆ ಮಳೆಯಾಗಿದೆ. 2021 ಕ್ಕೆ ಹೋಲಿಸಿದರೆ ಶೇಕಡಾ 75ರಷ್ಟು ಕೊರತೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ನೀರಿನ ಅಭಾವ ಸೃಷ್ಟಿಸಬಹುದು.

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ಕರ್ನಾಟಕವು ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ತಮಿಳು ನಾಡು ಸೋದರ ರಾಜ್ಯವಿದ್ದಂತೆ, ನಮಗೆ ಅವರ ಜೊತೆ ಹೋರಾಡಲು ಮನಸ್ಸಿಲ್ಲ ಎಂದಿದ್ದಾರೆ. 

ಜುಲೈ 9 ರಂದು ಕೃಷ್ಣರಾಜ ಸಾಗರ (KRS) ಜಲಾಶಯದಲ್ಲಿ ಅಣೆಕಟ್ಟುಗಳ ಸುರಕ್ಷತೆಯ ಕುರಿತು ಸಭೆ ನಡೆಸಲು ಕೇಂದ್ರ, ಇತರ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಅಧಿಕಾರಿಗಳನ್ನು ಆಹ್ವಾನಿಸಿದ್ದೇನೆ ಎಂದು ಹೇಳಿದರು. 

ಕಳೆದ ವರ್ಷ ಸುಮಾರು 700 ಟಿಎಂಸಿ ಅಡಿ ನೀರು ಸಮುದ್ರ ಸೇರಿರಬಹುದು. ಈ ವರ್ಷ ತಮಿಳುನಾಡು ನಮಗೆ ನೀರು ಬಿಡುವಂತೆ ಪಟ್ಟು ಹಿಡಿದರೂ ನೀರು ಸಾಕಾಗುತ್ತಿಲ್ಲ. ನಮಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಬೆಂಗಳೂರು ಕೂಡ ಘೋರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. 

ಮಾತುಕತೆ ಮೂಲಕ ಬಗೆಹರಿಸಲು ಯತ್ನ: ಪರಿಸ್ಥಿತಿಯ ತಿಳುವಳಿಕೆಯ ಕೊರತೆಯಿಂದಾಗಿ ನ್ಯಾಯಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ಬಂದಿರಬಹುದು ಎಂದು ಶಿವಕುಮಾರ್ ಹೇಳಿದರು. ವಿವಾದ ಬಗೆಹರಿಸಲು ಕುಳಿತು ಮಾತನಾಡಬೇಕಿದೆ. ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಟ್ಯಾಂಕ್‌ಗಳಿಗೆ 500 ಟಿಎಂಸಿ ಅಡಿ ಬೆಂಗಳೂರಿನ ಸಂಸ್ಕರಿಸಿದ ಒಳಚರಂಡಿ ನೀರನ್ನು ಬಳಸುತ್ತಿರುವುದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಜುಲೈ 5ರೊಳಗೆ ನ್ಯಾಯಮಂಡಳಿ ರಚನೆಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ದೆಹಲಿಯಲ್ಲಿ ಡಿ ಕೆ ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಜ್ಞಾಪಕ ಪತ್ರವನ್ನು ಮಂಡಿಸಿದರು, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಸಾಧ್ಯತೆಯನ್ನು ಅನ್ವೇಷಿಸದೆ ನ್ಯಾಯಮಂಡಳಿ ರಚಿಸದಂತೆ ಮನವಿ ಮಾಡಿದರು. ತಮಿಳುನಾಡಿನ ದಕ್ಷಿಣ ಪೆನ್ನಾರ್ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ವಿವಾದವನ್ನು ಎತ್ತಿದೆ. ಸಚಿವಾಲಯವು ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆಯನ್ನು ನೀಡಿತ್ತು, ಅಂತಿಮವಾಗಿ ನ್ಯಾಯಮಂಡಳಿಯನ್ನು ರಚಿಸಲು ನಿರ್ದೇಶನಗಳನ್ನು ನೀಡಿತು.

ಕುಡಿಯುವ ನೀರಿನ ಬಿಕ್ಕಟ್ಟು: ಕರ್ನಾಟಕದ ಜಲಾಶಯಗಳು ಕೇವಲ ಶೇಕಡಾ 17 ರಷ್ಟು ಮಾತ್ರ ತುಂಬಿವೆ. ಪರಿಸ್ಥಿತಿಯಿಂದ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಬಹುದು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಜುಲೈ 1ಕ್ಕೆ ಪ್ರಸ್ತುತ ಸಂಗ್ರಹಣೆ 148.22 ಟಿಎಂಸಿ ಅಡಿ ಇದೆ ಎಂದು ಹೇಳಿದೆ. ಒಟ್ಟು ಸಂಗ್ರಹಣಾ ಸಾಮರ್ಥ್ಯ 865.20 ಟಿಎಂಸಿ ಅಡಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com