ಕರಾವಳಿಯಲ್ಲಿ ವರುಣಾರ್ಭಟ: ಉಡುಪಿಯಲ್ಲಿ 2 ಸಾವು, ಬೋಟ್ ಮಗುಚಿ ಕೊಚ್ಚಿ ಹೋಗುತ್ತಿದ್ದ ಯುವಕನ ಸಿನಿಮೀಯ ರಕ್ಷಣೆ

ಕರಾವಳಿ ಕರ್ನಾಟಕದಲ್ಲಿ ವರುಣಾರ್ಭಟ ಬುಧವಾರವೂ ಮುಂದುವರೆದಿದ್ದು, ಒಂದೇ ದಿನ ಉಡುಪಿಯಲ್ಲಿ 2 ಮಳೆ ಸಂಬಂಧಿತ ಸಾವುಗಳು ದಾಖಲಾಗಿವೆ.
ಕರಾವಳಿಯಲ್ಲಿ ವರುಣಾರ್ಭಟಕ್ಕೆ 2 ಬಲಿ
ಕರಾವಳಿಯಲ್ಲಿ ವರುಣಾರ್ಭಟಕ್ಕೆ 2 ಬಲಿ
Updated on

ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ವರುಣಾರ್ಭಟ ಬುಧವಾರವೂ ಮುಂದುವರೆದಿದ್ದು, ಒಂದೇ ದಿನ ಉಡುಪಿಯಲ್ಲಿ 2 ಮಳೆ ಸಂಬಂಧಿತ ಸಾವುಗಳು ದಾಖಲಾಗಿವೆ.

ಹೌದು.. ಕರಾವಳಿ ಕರ್ನಾಟಕದ ಉಡುಪಿ, ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಹೋಟೆಲ್ ಕೆಲಸ ಮಾಡುವ ದಿವಾಕರ್‌ರವರು ಕೆಲಸ ಮುಗಿಸಿ ತೆಕ್ಕಟ್ಟೆಯ ಮಲ್ಯಾಡಿ ಸಮೀಪ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಕೆರೆಗೆ ಉರುಳಿ ಮೃತಪಟ್ಟಿದ್ದಾರೆ.  ದಿವಾಕರ್‌ಗೆ ಕಾಲು ನೋವು ಇದ್ದ ಕಾರಣ ವಾಹನದಿಂದ ಇಳಿಯಲಾಗದೆ ಬೈಕ್ ಜಾರಿ ಕೆರೆಗೆ ಉರುಳಿ ಬಿದ್ದು ಮೃತಪಟ್ಟಿದ್ದಾರೆ. ತಡರಾತ್ರಿ ಘಟನಾ ಸ್ಥಳಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಆಗಮಿಸಿ ನದಿಯಿಂದ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿಯನ್ನು ದಿವಾಕರ್ ಶೆಟ್ಟಿ ಎಂದು ಗುರುತಿಸಲಾಗಿದೆ. 

ಮತ್ತೊಂದೆಡೆ ಉಡುಪಿಯಲ್ಲಿ ಕಮಲಶಿಲೆ ದೇವಳಕ್ಕೆ ಪೂಜೆಗೆ ಬಂದಿದ್ದ 75 ವರ್ಷದ ಶೇಷಾದ್ರಿ ಐತಾಳ್ ಎಂಬುವರು ಕುಬ್ಜಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಕಮಲಶಿಲೆ ದೇವಸ್ಥಾನಕ್ಕೆ ಬಂದಿದ್ದ 74 ವರ್ಷ ಪ್ರಾಯದ ಶೇಷಾದ್ರಿ ಐತಾಳ್ ನೀರು ಪಾಲಾಗಿದ್ದರು. ಬಳಿಕ ಸ್ಥಳೀಯ ಈಜು ಪಟು ಮಂಜುನಾಥ್ ನಾಯಕ್ ನೆರವಿನಿಂದ ಶವವನ್ನು ಮೇಲಕ್ಕೆತ್ತಲಾಗಿದೆ.

ಇನ್ನು ನೇತ್ರಾವತಿ ನದಿಯಲ್ಲಿ ಮೀನುಗಾರಿಕೆಗೆ ಬೋಟ್‌ನಲ್ಲಿ ಹೋಗಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ನೀರಿನ ಹರಿವು ಜಾಸ್ತಿಯಾಗಿ ಬೋಟ್‌ ಮಗುಚಿದ್ದ ಹಿನ್ನೆಲೆಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಯುವಕನನ್ನು ಸಿನಿಮೀಯವಾಗಿ ರಕ್ಷಿಸಲಾಗಿದೆ. ಸ್ಥಳೀಯ ಯುವಕರ ತಂಡವು ಸಮಯಪ್ರಜ್ಞೆ ಮೆರೆದು ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಗುಡ್ಡ ಕುಸಿತ
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮತ್ತೊಂದೆಡೆ ಮಂಗಳೂರಿನಲ್ಲೂ ವರುಣನ ಆರ್ಭಟ ತೀವ್ರಗೊಂಡಿದ್ದು, ಮಂಗಳೂರು ನಗರದ ಪಿವಿಎಸ್ ಬಳಿ ಗುಡ್ಡ ಕುಸಿದು ಬಿದ್ದಿದೆ. ಪಿವಿಎಸ್‌ನಿಂದ ಕೆ.ಎಸ್ ರಾವ್ ರಸ್ತೆಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಗುಡ್ಡ ಕುಸಿದಿದ್ದರಿಂದ ಹಳೆಯ ಕಟ್ಟಡದ ಗೋಟೆ ಕುಸಿತಗೊಂಡಿದೆ. ಸ್ಥಳಕ್ಕೆ ಟಾರ್ಪಾಲ್ ಹೊದಿಕೆ ಹಾಕಲಾಗಿದ್ದು, ಇನ್ನಷ್ಟು ಮಣ್ಣು ಕುಸಿಯದಂತೆ ಮುನ್ನೆಚ್ಚೆರಿಕೆ ಕ್ರಮಕೈಗೊಳ್ಳಲಾಗಿದೆ.

ಕಾರವಾರದಲ್ಲೂ ಭಾರಿ ಮಳೆ
ಇತ್ತ ಕಾರವಾರ ಜಿಲ್ಲೆಯಲ್ಲೂ ವರ್ಷಧಾರೆ ಮುಂದುವರೆದಿದ್ದು, ಧಾರಾಕಾರ ಮಳೆಯಿಂದಾಗಿ ಕಾರವಾರದ ಹಬ್ಬು ವಾಡದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಡಿಪೋ ಕಚೇರಿ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಗಿದೆ. ಡಿಪೋದಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದ್ದು, ದಾಖಲೆಗಳು ನೀರು ಪಾಲಾಗಿದೆ. ಮಳೆಯ ಹೊಡೆತಕ್ಕೆ ಕಾರವಾರ, ಭಟ್ಕಳ ನಗರದ ರಸ್ತೆಗಳು ಜಲಾವೃತಗೊಂಡಿದ್ದು, ನಾಗರಿಕರು ಪರದಾಡುವಂತಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com