ಮೈಸೂರು: ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ ಶಾಲಾ ಆವರಣದಲ್ಲಿ ಚಿರತೆ ಭೀತಿ!

ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಆವರಣದ ಬಳಿ ಇತ್ತೀಚೆಗೆ ಚಿರತೆಗಳು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಭಯ ಆವರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕೊಳ್ಳೇಗಾಲ ಸಮೀಪ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಆವರಣದ ಬಳಿ ಇತ್ತೀಚೆಗೆ ಚಿರತೆಗಳು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಭಯ ಆವರಿಸಿದೆ. ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿರುವ ಗುಂಡಾಲ್ ಅರಣ್ಯ ವ್ಯಾಪ್ತಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣವಾಗಿದ್ದು, ವನ್ಯಜೀವಿಗಳ ಓಡಾಟ ಇಲ್ಲಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದರೆ, ಇತ್ತೀಚಿಗೆ ಶಾಲೆಯ ಸಮೀಪವೇ ಚಿರತೆ ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ.

ಕಂಪನ ಪಾಳ್ಯ, ರಕ್ಷಾ ಪಾಳ್ಯ, ಕರಾಳ ಕಟ್ಟೆ, ಜಾಕಹಳ್ಳಿ, ಕುರುಬನ ಕಟ್ಟೆ, ಅರೆಪಾಳ್ಯ ಮತ್ತಿತರ ಕಡೆಗಳಲ್ಲಿ ಚಿರತೆ ಕಾಣಿಸಿಕೊಂಡಿರುವ ವರದಿಗಳು ಬಂದಿದ್ದು, ಹೊಲಕ್ಕೆ ಕೆಲಸಕ್ಕೆ ಹೋಗುವ ರೈತ ಸಮುದಾಯ ಹಾಗೂ ಮಹಿಳೆಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮ ಹಾಗೂ ಹೊಲಗದ್ದೆಗಳಲ್ಲೂ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಸುಮಾರು 450 ವಿದ್ಯಾರ್ಥಿಗಳು ಭಯಭೀತರಾಗಿ ಜೀವನ ನಡೆಸುತ್ತಿದ್ದು, ಆನೆ, ಚಿರತೆ, ಕಾಡು ಹಂದಿ, ಕಾಡೆಮ್ಮೆಯಂತಹ ಕಾಡು ಪ್ರಾಣಿಗಳು ಶಾಲಾ ಆವರಣಕ್ಕೆ ಬರದಂತೆ ಸೋಲಾರ್ ಬೇಲಿಯೊಂದಿಗೆ ಕಾಂಪೌಂಡ್ ಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ದೊಡ್ಡ ಬೆಕ್ಕನ್ನು ಬಲೆಗೆ ಬೀಳಿಸಲು ಅರಣ್ಯಾಧಿಕಾರಿಗಳು ಬೋನುಗಳನ್ನು ಹಾಕಿದ್ದರೂ, ಅದು ನೆರವಾಗಿಲ್ಲ. ಅದು ಹಳ್ಳಿಗಳ ಸುತ್ತಲೂ ತಿರುಗಾಡುತ್ತಲೇ ಇದೆ. ಅರಣ್ಯ ಇಲಾಖೆಯು 40 ಸದಸ್ಯರ ಚಿರತೆ ಕಾರ್ಯಪಡೆಯನ್ನು ಸಹ ರಚಿಸಿದ್ದು, ಗಸ್ತು ತಿರುಗುತ್ತಿದೆ. ವಿದ್ಯಾರ್ಥಿಗಳು ನಿತ್ಯವೂ ಊಟದ ಹಾಲ್ ಹಾಗೂ ಹಾಸ್ಟೆಲ್ ಕೊಠಡಿಗಳ ಮಧ್ಯೆ ಸಂಚರಿಸುತ್ತಿದ್ದು, ದೊಡ್ಡಬೆಕ್ಕಿನ ದಾಳಿಗೆ ತುತ್ತಾದರೆ ಯಾರು ಹೊಣೆಗಾರರು ಎಂಬ ಆತಂಕದಲ್ಲಿ ಪಾಲಕರು ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ.

ಚಿರತೆ ಓಡಾಟದಿಂದ ರೈತ ಕೃಷಿ ಚಟುವಟಿಕೆಗೆ ಹೊಡೆತ ಬಿದ್ದಿದೆ. ಮಹಿಳೆಯರು ಹೊಲ-ಗದ್ದೆಗಳಿಗೆ ಹೋಗುವುದನ್ನು ನಿಲ್ಲಿಸಿದ್ದು, ಭಯದಿಂದ ಹೊರಬರುವಂತೆ  ಅರಣ್ಯ ಇಲಾಖೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡ ಶೈಲೇಂದ್ರ ಆಗ್ರಹಿಸಿದ್ದಾರೆ. ಚಿರತೆಗಳನ್ನು ಹಿಡಿಯಲು ಇಲಾಖಾ ಸಿಬ್ಬಂದಿ ಮುಂದಾಗಿದ್ದು, ಬೋನುಗಳನ್ನು ಇಡಲಾಗಿದೆ ಎಂದು ಆರ್‌ಎಫ್‌ಒ ಶರತ್ ತಿಳಿಸಿದ್ದಾರೆ. ಆ ಚಿರತೆಗಳು ಗುಂಡಾಲ್ ಅರಣ್ಯ ಪ್ರದೇಶದವು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com