ಬೆಂಗಳೂರು: ಐವರು ಶಂಕಿತ ಉಗ್ರರ ಬಂಧನ; ಮಾಸ್ಟರ್‌ಮೈಂಡ್ ಜುನೈದ್ ಅಹ್ಮದ್ ಪತ್ತೆಗೆ ಲುಕ್​​ಔಟ್ ​ನೋಟಿಸ್​​ ಜಾರಿ

ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಪ್ರಮುಖ ಆರೋಪಿ ಜುನೈದ್ ಅಹ್ಮದ್ ಪತ್ತೆಗೆ ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಪ್ರಮುಖ ಆರೋಪಿ ಜುನೈದ್ ಅಹ್ಮದ್ ಪತ್ತೆಗೆ ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. 

2 ವರ್ಷಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಜುನೈದ್, ಬಳಿಕ ದುಬೈಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಜುನೈದ್ ಎಲ್ಲಿದ್ದಾನೆ ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ, ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. 

'ಪ್ರಾಥಮಿಕ ತನಿಖೆಯಲ್ಲಿ ಆತ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ ಎನ್ನಲಾಗಿದ್ದರೂ, ಆತ ಇನ್ನೂ ಅಲ್ಲಿಯೇ ಇದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ತನಿಖೆಯ ಭಾಗವಾಗಿ, ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಯ್ಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸಿರ್ ಪಾಷಾ ಮತ್ತು ಮೊಹಮ್ಮದ್ ಫಾಜಿಲ್ ಎಂಬ ಐವರು ಶಂಕಿತ ಭಯೋತ್ಪಾದಕರನ್ನು ಕಳೆದ ವಾರವಷ್ಟೇ (ಜು.19) ಪೊಲೀಸರು ಬಂಧಿಸಿದ್ದರು. ಅವರು ಸದ್ಯ ಪೊಲೀಸರ ವಶದಲ್ಲಿದ್ದಾರೆ. 

ಬೆಂಗಳೂರಿನ ಹೆಬ್ಬಾಳದ ಸುಲ್ತಾನಪಾಳ್ಯದ ನಿವಾಸಿ ಜುನೈದ್ ಅಹ್ಮದ್, ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದಾಗ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆ ಕಾರ್ಯಕರ್ತ ಮತ್ತು 2008ರ ಬೆಂಗಳೂರು ಸರಣಿ ಸ್ಫೋಟದ ಆರೋಪಿ ತಡಿಯಂತವಿಡೆ ನಜೀರ್‌ ಎಂಬಾತನ ಸಂಪರ್ಕಕ್ಕೆ ಬಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ವೇಳೆ ನಜೀರ್‌ ಜುನೈದ್‌ನನ್ನು ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದ್ದಾನೆ ಮತ್ತು ಜುನೈದ್ ಇತರ ಐವರು ಶಂಕಿತ ಉಗ್ರರಿಗೆ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಮಾರ್ಗದರ್ಶನ ನೀಡಿದ್ದನು ಎನ್ನಲಾಗಿದೆ.

ಈಗಾಗಲೇ ತಮ್ಮ ವಶದಲ್ಲಿರುವ ಐವರು ಶಂಕಿತ ಉಗ್ರರ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದು, ಜುನೈದ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಯತ್ನಿಸುತ್ತಿದ್ದಾರೆ. ಅಲ್ಲದೆ, ಜುನೈದ್‌ ಸದ್ಯ ಎಲ್ಲಿದ್ದಾನೆ ಎಂಬುದು ತಿಳಿಯದ ಕಾರಣ ಇಂಟರ್‌ಪೋಲ್ ಸಂಪರ್ಕಿಸಲು ಸಿಸಿಬಿಗೆ ಅಡ್ಡಿಯಾಗಿ ಬದಲಾಗಿದೆ. 

'ನಾವು ಇಂಟರ್‌ಪೋಲ್ ಅನ್ನು ಸಂಪರ್ಕಿಸುವ ಹಂತಕ್ಕೆ ತಲುಪಿಲ್ಲವಾದರೂ, ಆತ ಇರುವ ಸ್ಥಳವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ, ಆತ ನಿರ್ದಿಷ್ಟ ದೇಶದಲ್ಲಿದ್ದಾನೆಎಂಬ ಕೆಲವು ಸ್ಪಷ್ಟ ವಿವರಗಳನ್ನು ಹೊಂದಿದ್ದರೆ ಮಾತ್ರ ಆತನನ್ನು ಬಂಧಿಸಲು ಇಂಟರ್‌ಪೋಲ್ ಸಹಾಯವನ್ನು ಪಡೆಯಬಹುದು. ಅಲ್ಲಿಯವರೆಗೆ, ನಾವು ಇಂಟರ್‌ಪೋಲ್ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ' ಎಂದು ಅಧಿಕಾರಿ ಹೇಳಿದರು.

ಬಂಧಿತ ಶಂಕಿತ ಭಯೋತ್ಪಾದಕರಿಂದ ನಗರದ ಪೊಲೀಸರು ಗ್ರೆನೇಡ್‌ಗಳು ಸೇರಿದಂತೆ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅವರು ನಗರದ ಹೆಚ್ಚಿನ ಜನನಿಬಿಡ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜನೆ ರೂಪಿಸಿದ್ದರು. ಬಂಧಿತರನ್ನು ಎನ್‌ಐಎ ಅಧಿಕಾರಿಗಳು ಸಹ ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com