ಕಾಡುಗೊಲ್ಲ ಸಮುದಾಯದ ಸೂತಕ ಸಂಪ್ರದಾಯ; ಮಗು ಸಾವಿಗೆ ತಂದೆ, ತಾತನ ವಿರುದ್ಧ ಪ್ರಕರಣ ದಾಖಲು

ಕಾಡುಗೊಲ್ಲ ಸಮುದಾಯದ ಒಂದು ತಿಂಗಳ ಹೆಣ್ಣು ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸರು ಇಬ್ಬರ ವಿರುದ್ಧ ಗುರುವಾರ ರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ತುಮಕೂರು: ಕಾಡುಗೊಲ್ಲ ಸಮುದಾಯದ ಒಂದು ತಿಂಗಳ ಹೆಣ್ಣು ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸರು ಇಬ್ಬರ ವಿರುದ್ಧ ಗುರುವಾರ ರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ.

ಮಗುವಿನ ತಂದೆ ಸಿದ್ದೇಶ್ ಮತ್ತು ತಾತ ಚಿಕ್ಕಹುಲಿಗೆಪ್ಪ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳ ತಡೆ ಮತ್ತು ನಿರ್ಮೂಲನೆ ಮತ್ತು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ, 2017 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿಶು ಅಭಿವೃದ್ಧಿ ಮತ್ತು ಕಾರ್ಯಕ್ರಮ ಅಧಿಕಾರಿ ಶಶಿಧರ್ ಪಿ ಅವರ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರಾಜಶ್ರೀ ಆರ್ ಮಾಂಗ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಇಲ್ಲಿಗೆ ಸಮೀಪದ ಮಲ್ಲೇನಹಳ್ಳಿ ಗ್ರಾಮದಲ್ಲಿ ಕಾಡುಗೊಲ್ಲ ಸಂಪ್ರದಾಯದಂತೆ ಸೂತಕದ ನೆಪವೊಡ್ಡಿ ಗ್ರಾಮದ ಹೊರಗೆ ಪ್ರತ್ಯೇಕ ಟೆಂಟ್ ನಿರ್ಮಿಸಿ ಬಾಣಂತಿ ಮತ್ತು ಮಗುವನ್ನು ಬಿಡಲಾಗಿತ್ತು. ಈ ವೇಳೆ ಅನಾರೋಗ್ಯಕ್ಕೆ ತುತ್ತಾದ ಹಸುಗೂಸು ಸಾವಿಗೀಡಾಗಿದ್ದು, ಮಳೆ, ಚಳಿ, ಗಾಳಿಗೆ ಸಿಲುಕಿ ಮಗು ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.

ಬೆಳ್ಳಾವಿ ಪಿಎಚ್‌ಸಿ ವೈದ್ಯಾಧಿಕಾರಿ ಮತ್ತು ಅವರ ತಂಡ ಮಗುವನ್ನು ನವಜಾತ ಶಿಶುವಿನ ಐಸಿಯುಗೆ ಸ್ಥಳಾಂತರಿಸುವಂತೆ ಕುಟುಂಬಕ್ಕೆ ಸಲಹೆ ನೀಡಿದ್ದರೂ, ಆರೋಪಿಗಳು ತಾಯಿ ಮತ್ತು ಮಗುವನ್ನು ಟೆಂಟ್‌ನಲ್ಲಿಯೇ ಬಿಟ್ಟಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹೆಣ್ಣು ಮಗು ಭಾನುವಾರ ಮೃತಪಟ್ಟಿದೆ. ಮಗುವಿನ ಸಾವಿನ ನಂತರವೂ, ತಾಯಿಯನ್ನು ಟೆಂಟ್‌ನಲ್ಲಿಯೇ ಇರಿಸಲಾಗಿತ್ತು.

ಜಿಲ್ಲಾ ಕಾನೂನು ಕೋಶ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಸಿಟಿ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಅವರು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ತಾಯಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಇಂತಹ ಅನಿಷ್ಠ ಪದ್ಧತಿಗಳನ್ನು ಅನುಸರಿಸದಂತೆ, ಅನುಸರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಬಂಧಿಕರಿಗೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com