ಗೃಹ ಜ್ಯೋತಿ ಯೋಜನೆ: 200 ಯುನಿಟ್ ಒಳಗಿದ್ದರೆ ಮಾತ್ರ ಉಚಿತ ವಿದ್ಯುತ್, ಜುಲೈ 1 ರಿಂದ ಜಾರಿ

ಸತತ ಸಭೆಗಳ ನಂತರ ಕೊನೆಗೂ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ವಿದ್ಯುತ್ ಗಳನ್ನು ಷರತ್ತುಗಳ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸತತ ಸಭೆಗಳ ನಂತರ ಕೊನೆಗೂ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ವಿದ್ಯುತ್ ಗಳನ್ನು ಷರತ್ತುಗಳ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಜುಲೈ 1 ರಿಂದ ಗೃಹ ಜ್ಯೋತಿ ಜಾರಿಯಾಗಲಿದೆ. 12 ತಿಂಗಳ ಸರಾಸರಿ ವಿದ್ಯುತ್ ಬಳಕೆಗೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ಸೇರಿಸಿ ಯೋಜನೆಯ ಪ್ರಯೋಜನ ಒದಗಿಸಲಾಗುವುದು. ಈ ರೀತಿ 200 ಯೂನಿಟ್‌ಗಳವರೆಗಿನ ಬಳಕೆಗೆ ಶುಲ್ಕದ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.

ಏನಿದು ಲೆಕ್ಕಾಚಾರ, ಷರತ್ತು...? ಈ ಕುರಿತ ಮಾಹಿತಿ ಇಲ್ಲಿದೆ...
ಯೋಜನೆಯ ಲಾಭ ಪಡೆಯಲು ಇಚ್ಛಿಸುವವರು, ಜುಲೈ 1ರವರೆಗೆ ಬಳಕೆ ಮಾಡಿರುವ ವಿದ್ಯುತ್'ನ ಯಾವುದೇ ಶುಲ್ಕ ಪಾವತಿ ಬಾಕಿ ಇಟ್ಟುಕೊಳ್ಳುವಂತಿಲ್ಲ. ಈ ಬಾಕಿ ಪಾವತಿಗೆ 3 ತಿಂಗಳ ಗಡುವು ವಿಧಿಸಿ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತದೆ. ಇದನ್ನು ಸರ್ಕಾರ ಭರಿಸುವುದಿಲ್ಲ ಎಂದು ಹೇಳಲಾಗಿದೆ.

ಇದಷ್ಟೇ ಅಲ್ಲದೆ, ಯೋಜನೆಗೆ ಷರತ್ತುಗಳೂ ಕೂಡ ಇವೆ. ಗರಿಷ್ಠ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದರೂ ಫಲಾನುಭವಿಗಳು ವಿದ್ಯುತ್ ಬಳಕೆಯ ಹಿಂದಿನ 12 ತಿಂಗಳ ಸರಾಸರಿಯನ್ನು ಲೆಕ್ಕಹಾಕಿ ಅದಕ್ಕೆ ಶೇಕಡಾ 10ರಷ್ಟು ಹೆಚ್ಚುವರಿ ಯುನಿಟ್ ಗಳನ್ನು ಕೂಡಿ ಅಷ್ಟು ಬಳಕೆಯವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ.

ಉದಾಹರಣೆಗೆ ಒಂದು ಮನೆಯ ವಿದ್ಯುತ್ ಬಿಲ್'ನ 12 ತಿಂಗಳ ಸರಾಸರಿ ಬಳಕೆ 100 ಯುನಿಟ್ ಆಗಿದ್ದರೆ, ಹೆಚ್ಚುವರಿ 10 ಯುನಿಟ್ (ಶೇ.10) ಸೇರಿಸಿ ಪ್ರತಿ ತಿಂಗಳು 110 ಯುನಿಟ್ ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡಲಾಗುತ್ತದೆ.

ಅದಕ್ಕಿಂತ ಹೆಚ್ಚು ಬಳಕೆ ಮಾಡಿದರೆ ಹೆಚ್ಚುವರಿ ಬಳಕೆಗೆ ತಕ್ಕಂತೆ ಶುಲ್ಕ ಪಾವತಿಸಬೇಕು. ಉದಾಹರಣೆಗೆ 110 ಯುನಿಟ್ ಉಚಿತ ವಿದ್ಯುತ್'ಗೆ ಅರ್ಹತೆ ಹೊಂದಿರುವವರು 130 ಯುನಿಟ್ ಬಳಸಿದರೆ ಹೆಚ್ಚುವರಿ 20 ಯುನಿಟ್'ನ ಶುಲ್ಕ ತೆರಬೇಕಾಗುತ್ತದೆ. 200 ಯುನಿಟ್ ಗಳಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್ ಸೌಲಭ್ಯ ಅನ್ವಯವಾಗಲಿದೆ. ಬಾಡಿಗೆ ಮನೆಗಳ ವಿದ್ಯುತ್ ಸಂಪರ್ಕದ ಮೀಡಲ್ ಮನೆ ಮಾಲೀಕರ ಹೆಸರಿನಲ್ಲಿರುತ್ತದೆ. ಅದನ್ನು ಹೇಗೆ ಗುರುತಿಸಲಾಗುತ್ತದೆ ಎಂಬುದಕ್ಕೆ ಸ್ಪಷ್ಟನೆಗಳು ಇಲ್ಲ. ಆದರೆ, ಬಾಡಿಗೆ ಮನೆಗಳಲ್ಲಿರುವವರಿಗೂ ಗೃಹ ಜ್ಯೋತಿ ಖಚಿತ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ದೆಹಲಿ ಮಾದರಿಯನ್ನು ಅಧ್ಯಯನ ಮಾಡಿದೆ, ಆದರೆ ಅದನ್ನು ಪುನರಾವರ್ತಿಸಿಲ್ಲ. ಇದು ಕರ್ನಾಟಕಕ್ಕೆ ಹೊಸ ಮಾದರಿಯಾಗಿದೆ. ಪಂಜಾಬ್ ಕೂಡ ವಿಭಿನ್ನ ಮಾದರಿಯನ್ನು ಹೊಂದಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಬ್ಬ ಗ್ರಾಹಕನ ವಿದ್ಯುತ್ ಬಳಕೆ 200 ಯುನಿಟ್‌ಗಿಂತ ಹೆಚ್ಚಿದ್ದರೆ, ಗ್ರಾಹಕರು ಸಂಪೂರ್ಣ ಬಿಲ್ ಪಾವತಿಸಬೇಕಾಗುತ್ತದೆ. ಅಂತಹ ಗ್ರಾಹಕನು ಬಿಲ್ ಪಾವತಿಸಲು ಸಮರ್ಥನಾಗಿರುವುದರಿಂದ ಯಾವುದೇ ಪ್ರಯೋಜನದ ಅಗತ್ಯವಿರುವುದಿಲ್ಲ. ಆದ್ದರಿಂದ ಅರ್ಹರಿಗೆ ಯೋಜನೆಯ ಲಾಭ ತಲುಪಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ 2.14 ಕೋಟಿ ವಿದ್ಯುತ್ ಗ್ರಾಹಕರಿದ್ದು, ಪ್ರತಿ ಮನೆಯ ಸರಾಸರಿ ವಿದ್ಯುತ್ ಬಳಕೆ ಸರಾಸರಿ 53- 54 ಯೂನಿಟ್ ಆಗಿದೆ. ಈ ಯೋಜನೆಯು ಶೇಕಡಾ 96 ರಷ್ಟು ಗ್ರಾಹಕರಿಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರಾಸರಿ ಮಾಸಿಕ ಬಳಕೆ 200 ಯೂನಿಟ್‌ಗಳಿಗಿಂತ ಹೆಚ್ಚಿರುವ ಸುಮಾರು ನಾಲ್ಕು ಪ್ರತಿಶತದಷ್ಟು ಗ್ರಾಹಕರು ವಿದ್ಯುತ್ ಬಿಲ್ ಪಾವತಿಸುವುದನ್ನು ಮುಂದುವರಿಸುತ್ತಾರೆಂದು ಹೇಳಿದ್ದಾರೆ.

ವಿದ್ಯುತ್ ತಜ್ಞ ಎಂ ಜಿ ಪ್ರಭಾಕರ್ ಮಾತನಾಡಿ, ಇದು ಗ್ಯಾರಂಟಿ ಯೋಜನೆಯಲ್ಲ. ಘೋಷಣೆ ಮಾಡುವ ಮುನ್ನ ಕಾಂಗ್ರೆಸ್ ಪಕ್ಷ ಲೆಕ್ಕವನ್ನೇ ಹಾಕಿಲ್ಲ, ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಎಲ್ಲಾ ನಾಗರಿಕರಿಗೆ 200 ಯೂನಿಟ್ ಉಚಿತ ವಿದ್ಯುತ್ ಎಂಬುದನ್ನು ತೋರಿಸುತ್ತಿದೆ, ಸೌರಶಕ್ತಿ ಮೇಲೆ ಹೆಚ್ಚು ಅವಲಂಬಿತರಾಗಿದ್ದೇ ಆದರೆ, ಎಲ್ಲರಿಗೂ ಸರ್ಕಾರ 200 ಯುನಿಟ್ ವಿದ್ಯುತ್'ನ್ನು ಉಚಿತವಾಗಿ ನೀಡಬಹುದು. ಸೌರಶಕ್ತಿಗೆ ವಿದ್ಯುತ್ ಖರೀದಿ ಮಾಡುವ ಅಗತ್ಯವಿರುವುದಿಲ್ಲ. ಇಲ್ಲಿ ಹೂಡಿಕೆ ಮುಖ್ಯವಾಗುತ್ತದೆ. ಆದಾಯವನ್ನು 5 ವರ್ಷಗಳ ನಂತರ ನೋಡಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com