ಬೀದರ್: ಚಾಲಕ ತಡ ಮಾಡಿದ್ದಕ್ಕೆ ಬೇಸತ್ತ ಪ್ರಯಾಣಿಕನೊಬ್ಬ ಸ್ವತಃ ಬಸ್ ಚಲಾಯಿಸಿಕೊಂಡು ಹೋಗಿ ಡಿವೈಡರ್'ಗೆ ಡಿಕ್ಕಿ ಹೊಡೆದ ಘಟನೆಯೊಂದು ಔರಾದ್ ಬಸ್ ನಿಲ್ದಾಣದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಕರಂಜಿ ಗ್ರಾಮದ ಯಶಪ್ಪ ಸೂರ್ಯವಂಶಿ ಬಸ್ ಚಲಾಯಿಸಿದ ವ್ಯಕ್ತಿಯಾಗಿದ್ದಾನೆ. ವಾರದ ಸಂತೆಗೆ ಬಂದಿದ್ದ ಈತ ಎಲ್ಲವನ್ನೂ ಮರೆತು ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದ. ಬಳಿಕ ಊರು ನೆನಪಾಗಿ ವಾಪಸಾಗಲು ಔರಾದ್ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ.
ಬೀದರ್ ಕಡೆ ಹೊರಡಲು ಅಣಿಯಾಗಿದ್ದ ಬಸ್ ಹತ್ತಿ ಕುಳಿತಿದ್ದಾನೆ. ಎಷ್ಟು ಹೊತ್ತಾದರೂ ಬಸ್ ಹೊರಟಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಯಶಪ್ಪ, ಸಿಬ್ಬಂದಿಯನ್ನು ನಿಂದಿಸಿ, ಬಸ್ ಸ್ಟಾರ್ಟ್ ಮಾಡಿದ್ದಾನೆ. ಈ ವೇಳೆ ಗಾಬರಿಯಾದ ಬಸ್ ನಲ್ಲಿದ್ದ ಜನರು ಕೂಗಾಡಿದ್ದಾರೆ. ಬಸ್ ಸ್ವಲ್ಪ ಮುಂದೆ ಸಾಗುತ್ತಿದ್ದಂತೆಯೇ ಕ್ರೂಸರ್ ವೊಂದಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಆತಂಕಗೊಂಡ ಯಶಪ್ಪ, ಸ್ಟೀರಿಂಗ್ ಬದಿಗೆ ಎಳೆದಿದ್ದಾನೆ. ಈ ವೇಳೆ ಬಸ್ ಡಿವೈಡರ್'ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಯಶಪ್ಪನನ್ನು ಬದೆ ಎಳೆದ ಜನರು, ಪೊಲೀಸರ ವಶಕ್ಕೆ ನೀಡಿದ್ದಾರೆ.
ಅದೃಷ್ಟವಶಾತ್ ಈ ಘಟನೆಯಲ್ಲಿಯಾರಿಗೂ ಗಾಯಗಳಾಗಿಲ್ಲ. ಕ್ರೂಸರ್ ಸ್ವಲ್ಪಮಟ್ಟಿಗೆ ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಬಸ್ ಚಾಲಕ ರಾಜು ಶಬ್ಬೀರ್ ಪಠಾಣ್ ಔರಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರವಾನೆ ಅನುಮತಿ ಪಡೆಯಲು ಕಂಟ್ರೋಲ್ ರೂಮ್ಗೆ ತೆರಳಿದ್ದೆ. ಈ ಸಂದರ್ಭದಲ್ಲಿ ಬಸ್ ಚಾಲನೆ ಮಾಡಲಾಗಿದೆ. ಬಸ್ ಆನ್ ಆಗುತ್ತಿದ್ದಂತೆಯೇ ಹಿಂದೆ ಓಡಿದೆ. ಆದರೆ, ಆ ವೇಳೆಗೆ ಆರೋಪಿ ವೇಗವಾಗಿ ಬಸ್ ಚಲಾಯಿಸಿ ಜೀಪ್ ಹಾಗೂ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆಂದು ಚಾಲಕ ಶಬ್ಬೀರ್ ಅವರು ಹೇಳಿದ್ದಾರೆ.
Advertisement