ಅಸ್ಸಾಂ ಮೂಲದ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಪೊಲೀಸ್ ಕಾರ್ಯಾಚರಣೆ

ಅಪ್ರಾಪ್ತ ಬಾಲಕಿಯನ್ನು ಟೆರೆಸ್ ಗೆ ಕರೆದೊಯ್ದ ಎಂಬ ಸುಳ್ಳು ಆರೋಪದ ಮೇರೆಗೆ ಅಸ್ಸಾಂ ಮೂಲದ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಟೆರೆಸ್ ಗೆ ಕರೆದೊಯ್ದ ಎಂಬ ಸುಳ್ಳು ಆರೋಪದ ಮೇರೆಗೆ ಅಸ್ಸಾಂ ಮೂಲದ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

ಬಾಲಕಿಯೊಬ್ಬಳು ಫುಡ್ ಡೆಲಿವರಿ ಏಜೆಂಟ್​ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಆತನನ್ನು ಕೂಡಿ ಹಾಕಿ ಥಳಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಎಂಟ್ರಿಯಾಗಿದ್ದು ಫುಡ್ ಡೆಲಿವರಿ ಏಜೆಂಟ್​ಗೆ ಸೂಕ್ತ ನ್ಯಾಯ ಒದಗಿಸುವಂತೆ ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಟ್ವೀಟ್​ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಬಾಲಕಿಯೊಬ್ಬರ ಸುಳ್ಳು ಆರೋಪಗಳಿಂದ ಅಸ್ಸಾಂ ಮೂಲದ ಫುಡ್ ಡೆಲಿವರಿ ಏಜೆಂಟ್​ ಕಿರುಕುಳ ಎದುರಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಸದ್ಯ ಥಳಿತಕ್ಕೆ ಒಳಗಾಗಿರುವ ಏಜೆಂಟ್​ಗೆ ಸೂಕ್ತವಾದ ರಕ್ಷಣೆ ಕೊಟ್ಟು, ನ್ಯಾಯ ಒದಗಿಸಬೇಕು. ಈ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು.

ಈ ಟ್ವೀಟ್ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿಗಳ ಕಚೇರಿಯು ಬೆಂಗಳೂರು ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿ ತಕ್ಷಣ ವರದಿ ನೀಡುವಂತೆ ಕೇಳಿದೆ. ಬೆಂಗಳೂರು ಪೊಲೀಸ್ ಆಯುಕ್ತರು 12 ಗಂಟೆಗಳ ಒಳಗೆ ಕರ್ನಾಟಕ ಸಿಎಂಒಗೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ Zomato ಡೆಲಿವರಿ ಏಜೆಂಟ್ ಎದುರಿಸುತ್ತಿರುವ ಕಿರುಕುಳದ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಕರ್ನಾಟಕ CM ಕಚೇರಿ ಅಸ್ಸಾಂ ಸಿಎಂ ಕಚೇರಿಗೂ ಕೂಡ ಮಾಹಿತಿ ನೀಡಿದೆ. ಜನಾಂಗೀಯ ಭಿನ್ನಾಭಿಪ್ರಾಯಗಳು ಘಟನೆಯನ್ನು ಪ್ರಚೋದಿಸಿದೆಯೇ ಎಂಬ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅದು ಹೇಳಿದೆ.

ಏನಿದು ಘಟನೆ..? 
ಇದೇ ಜೂನ್​ 12 ರಂದು ಎಲೆಕ್ಟ್ರಾನ್​ಸಿಟಿ ಬಳಿಯ ಅಪಾರ್ಟ್​ಮೆಂಟ್​ ಒಂದರ ನಿವಾಸಿಗಳಾದ ದಂಪತಿ ತಮ್ಮ ಮಗನನ್ನು ಶಾಲೆಗೆ ಬಿಡಲು ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ತಮ್ಮ ಮಗಳು ಕಾಣೆಯಾಗಿರುತ್ತಾಳೆ. ಹೀಗಾಗಿ ಕೆಲ ಸಮಯ ಹುಡುಕಿದ ಬಳಿಕ ಟೆರೇಸ್​ ಮೇಲೆ ಸಿಗುತ್ತಾಳೆ. ಆಗ ಬಾಲಕಿಯನ್ನು ಎಲ್ಲಿ ಹೋಗಿದ್ದೆ ಎಂದು ಪ್ರಶ್ನೆ ಮಾಡಿದಾಗ, ನನ್ನನ್ನು ಫುಡ್​ ಡೆಲಿವರಿ ಏಜೆಂಟ್​ ಅಪಾರ್ಟ್​ಮೆಂಟ್​ನ ಟೆರೇಸ್‌ಗೆ ಎಳೆದುಕೊಂಡು ಹೋಗಿದ್ದ ಎಂದು ಆರೋಪಿಸುತ್ತಾಳೆ. ಇದರಿಂದ ಕೋಪಗೊಂಡ ಅಪಾರ್ಟ್​ಮೆಂಟ್ ನಿವಾಸಿಗಳು ಸೆಕ್ಯೂರಿಟಿ ಗಾರ್ಡ್​ಗಳಿಂದ ಫುಡ್​ ಡೆಲಿವರಿ ಏಜೆಂಟ್​ಗೆ ಥಳಿಸಿ ರೂಮ್​ನಲ್ಲಿ ಕೂಡಿ ಹಾಕಿದ್ದಾರೆ. ಹೀಗಾಗಿ ಕೆಲವು ಡೆಲಿವರಿ ಏಜೆಂಟ್‌ಗಳು ಅಪಾರ್ಟ್​ಮೆಂಟ್​ ಮುಂದೆ ಪ್ರತಿಭಟನೆಗೆ ಮುಂದಾಗಿರುತ್ತಾರೆ.

ನಂತರ ಸ್ಥಳಕ್ಕೆ ಪೊಲೀಸರು ಬಂದು ಅಪಾರ್ಟ್​ಮೆಂಟ್​ನ 7ನೇ ಮಹಡಿಯಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಾಲಕಿ ಒಬ್ಬಳೆ ಟೆರೇಸ್​ ಮೇಲೆ ಆಟವಾಡುತ್ತಿರುವುದು ಕಂಡು ಬಂದಿದೆ. ಇದರಿಂದ ನಿಜ ಏನು ಎನ್ನುವುದು ತಿಳಿದಿದ್ದು, ಏಜೆಂಟ್​ ಏನು ಮಾಡಿಲ್ಲ ಎಂಬುದು ತಿಳಿದು ಬಂದಿದೆ. ಓದುವ ಸಮಯವನ್ನು ಆಟ ಆಡಿದ್ದಕ್ಕೆ ತಂದೆ-ತಾಯಿ ಹೊಡೆಯುತ್ತಾರೆ ಎಂಬ ಭಯದಿಂದ ಬಾಲಕಿ ಫುಡ್​ ಡೆಲಿವರಿ ಬಾಯ್​ ವಿರುದ್ಧ ಸುಳ್ಳು ಆರೋಪ ಮಾಡಿರುತ್ತಾಳೆ. ಇದನ್ನು ಆಕೆ ಕೂಡ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com