'ಅನ್ನ ಭಾಗ್ಯ'ಕ್ಕೆ ಕೇಂದ್ರದಿಂದ ಸಿಗದ ಸ್ಪಂದನೆ: ಪರ್ಯಾಯ ಮಾರ್ಗಕ್ಕೆ ರಾಜ್ಯ ಸರ್ಕಾರ ಮುಂದು, ಏನದು?

ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ ಭಾರೀ ಸದ್ದು ಮಾಡುತ್ತಿದೆ. ಸಾರ್ವಜನಿಕರಿಗೆ 10 ಕೆ ಜಿ ಅಕ್ಕಿ ವಿತರಿಸುವುದಾಗಿ ಅಧಿಕಾರಕ್ಕೆ ಬರುವ ಮೊದಲು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಈಗ ಅಧಿಕಾರಕ್ಕೆ ಬಂದ ಮೇಲೆ 10 ಕೆಜಿ ವಿತರಿಸಲು ಎಲ್ಲಿಂದ ತರುವುದು ಎನ್ನುವುದೇ ಸಮಸ್ಯೆಯಾಗಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ಕೆ ಹೆಚ್ ಮುನಿಯಪ್ಪ
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ಕೆ ಹೆಚ್ ಮುನಿಯಪ್ಪ

ಬೆಂಗಳೂರು: ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ ಭಾರೀ ಸದ್ದು ಮಾಡುತ್ತಿದೆ. ಸಾರ್ವಜನಿಕರಿಗೆ 10 ಕೆ ಜಿ ಅಕ್ಕಿ ವಿತರಿಸುವುದಾಗಿ ಅಧಿಕಾರಕ್ಕೆ ಬರುವ ಮೊದಲು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಈಗ ಅಧಿಕಾರಕ್ಕೆ ಬಂದ ಮೇಲೆ 10 ಕೆಜಿ ವಿತರಿಸಲು ಎಲ್ಲಿಂದ ತರುವುದು ಎನ್ನುವುದೇ ಸಮಸ್ಯೆಯಾಗಿದೆ.

ಕೇಂದ್ರ ಸರ್ಕಾರದ ಮೇಲೆ ನಿರೀಕ್ಷೆಯಿಂದ ನಿನ್ನೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಜ್ಯ ಆಹಾರ, ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.  

ಕರ್ನಾಟಕಕ್ಕೆ ಭಾರತೀಯ ಆಹಾರ ನಿಗಮ (FCI) ಮೂಲಕ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮುನಿಯಪ್ಪ ಅವರು 2.28 ಲಕ್ಷ ಮೆಟ್ರಿಕ್ ಟನ್‌ಗಳನ್ನು ಸಂಗ್ರಹಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ. 

ಭಾರತ ದೇಶದಲ್ಲಿ ಅಕ್ಕಿ ಬೆಳೆಯುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಕ್ಕಿ ಸಂಗ್ರಹಿಸಲು ನಮ್ಮಲ್ಲಿ ಹಲವು ಮಾರ್ಗಗಳಿವೆ. ನಾವು ಒಂದು ವಾರದಲ್ಲಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ನಿನ್ನೆ ದೆಹಲಿಯಲ್ಲಿ ಮಾತನಾಡಿದ ಸಚಿವ ಮುನಿಯಪ್ಪ ಹೇಳಿದರು.

ರಾಜ್ಯವು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲಿದೆ ಎಂಬ ಮಾತುಗಳನ್ನು ನಿರಾಕರಿಸಿದ್ದಾರೆ. ಏಕೆಂದರೆ ಅದು ದುಬಾರಿ ಮತ್ತು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಕೇಂದ್ರೀಯ ಸಂಸ್ಥೆಗಳಿಂದ ಟೆಂಡರ್ ಕರೆದು ವರ್ತಕರಿಂದ ಅಕ್ಕಿ ಖರೀದಿಸಿ ಸರ್ಕಾರಕ್ಕೆ ರವಾನಿಸುವುದು ಸೂಕ್ತವೆಂದು ಹೇಳುತ್ತಾರೆ. 

ಕರ್ನಾಟಕದಲ್ಲಿ ಅಕ್ಕಿ ದಾಸ್ತಾನು ಹೊಂದಿರುವ ಕೆಲವು ವ್ಯಾಪಾರಿಗಳು ಸಹ ಸರಬರಾಜು ಮಾಡಲು ಉತ್ಸುಕರಾಗಿದ್ದಾರೆ ಎಂದು ಮೂಲಗಳು TNIE ಗೆ ತಿಳಿಸಿವೆ. ಎಲ್ಲವೂ ಸರಿಯಾಗಿ ನಡೆದರೆ, ಆಗಸ್ಟ್ 1 ರೊಳಗೆ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF), ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFD) ಮತ್ತು ಕೇಂದ್ರೀಯ ಭಂಡಾರ್ ನ್ನು ರಾಜ್ಯ ಸರ್ಕಾರ ಈಗಾಗಲೇ ಸಂಪರ್ಕಿಸಿದೆ. 

ನಿನ್ನೆ ಕೇಂದ್ರ ಸಚಿವರ ಜೊತೆ ಅರ್ಧ ಗಂಟೆ ಚರ್ಚೆಯ ನಂತರ, ಗೋಯಲ್ ರಾಜ್ಯಕ್ಕೆ ಅಕ್ಕಿಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದರು. ಇಡೀ ದೇಶಕ್ಕೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ 135 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದೆ. ಎಫ್ ಸಿಐಯಲ್ಲಿ 262  ಲಕ್ಷ ಟನ್ ಗಿಂತ ಹೆಚ್ಚು ದುಪ್ಪಟ್ಟು ಸಂಗ್ರಹ ಇರುವುದರಿಂದ ಇದು ಏಕೆ ಸಾಧ್ಯವಿಲ್ಲ ಎಂದು ನಾನು ಕೇಳಿದೆ. ಕೇಂದ್ರ ಸರ್ಕಾರ 400 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಅಗತ್ಯವಿದೆ ಎಂದು ಅವರು ಸಮರ್ಥಿಸಿಕೊಂಡರು. ಕೇಂದ್ರ ಸಚಿವರ ಸಮರ್ಥನೆ ಸರಿಯಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com