ಯಾದಗಿರಿ: ಹಾಡಹಗಲೇ ಇಬ್ಬರು ಗ್ರಾಮ ಪಂಚಾಯತ್ ಮಹಿಳಾ ಸದಸ್ಯರನ್ನು ಅಪಹರಿಸಿದ ಘಟನೆ ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದಿದೆ.
ನಾಗನೂರು ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯೆಯರಾದ ನೀಲಗಂಗಮ್ಮ ಹೊಸಳ್ಳಿ ಮತ್ತು ಬೀಬಿ ಫಾತಿಮಾ ಸೋಪಿಸಾಬ್ ದಫೇದಾರ ಅಪಹರಣಕ್ಕೊಳಗಾದವರಾಗಿದ್ದಾರೆ, ಇಬ್ಬರೂ ಖಾನಾಪುರ ಗ್ರಾಮದವರು ಎನ್ನಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಯ್ಕೆ ವೇಳೆ ಘಟನೆ ನಡೆದಿದೆ. ಗುರುವಾರ (ಜೂನ್ 22) ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿದ್ದು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ವರ್ಗಗಳ ಮೀಸಲಾತಿ ನಿಗದಿಪಡಿಸಲಾಗಿದೆ. ಮೀಸಲಾತಿ ನಿಗದಿಯಾದ ಜಿ.ಪಂ.ಗಳಲ್ಲಿ ನಾಗನೂರು ಗ್ರಾಮ ಪಂಚಾಯಿತಿಯೂ ಒಂದು.
ನಾಗನೂರು ಗ್ರಾಮ ಪಂಚಾಯಿತಿಯಲ್ಲಿ 10 ಮಹಿಳೆಯರು, ಒಂಬತ್ತು ಪುರುಷರು ಸೇರಿ 19 ಸದಸ್ಯರ ಬಲವಿದ್ದು, ಬಹುತೇಕ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸಭೆಯಲ್ಲಿ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಸಭೆ ಬಳಿಕ ಇಬ್ಬರನ್ನೂ ಡಿಸಿ ಕಚೇರಿಯ ಆವರಣದಿಂದಲೇ ಅಪಹರಣ ಮಾಡಲಾಗಿದೆ. ಈ ಸಂಬಂಧ ಇಬ್ಬರೂ ಮಹಿಳೆಯರ ಪತಿಯರು ಯಾದಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ್ ಅವರು, ನಾಪತ್ತೆಯಾಗಿರುವವರ ಪತ್ತೆಗೆ ಯಾದಗಿರಿಯ ಸಿಪಿಐ ನೇತೃತ್ವದ ಪೊಲೀಸ್ ಸಿಬ್ಬಂದಿಯ ತಂಡವನ್ನು ರಚಿಸಲಾಗಿದೆ. ಸ್ವಇಚ್ಛೆಯಿಂದಲೇ ಅವರೊಂದಿಗೆ ಹೋಗಿದ್ದಾರೆಯೇ ಅಥವಾ ಬಲವಂತದಿಂದ ಕರೆದೊಯ್ಯಲಾಗಿದೆಯೇ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಅಪಹರಣಗೊಂಡಿರುವ ಮಹಿಳೆಯರ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದಾರೆ.
Advertisement