ಮಂಡ್ಯ: ಅಪಘಾತದಲ್ಲಿ ಮಹಿಳೆ ಕೈ ಕಟ್, ಚಾಲಕನ ತಪ್ಪಿಲ್ಲ ಎಂದ KSRTC

ಕೆಎಸ್ ಆರ್ ಟಿಸಿ ಬಸ್ ಹತ್ತುವಾಗ ಮಹಿಳೆಯೊಬ್ಬರ ಕೈ ಕಟ್ ಆಗಿದ್ದು ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರಿ ಸಾರಿಗೆ ನಿಗಮ KSRTC ಚಾಲಕನ ತಪ್ಪಿಲ್ಲ ಎಂದು ಹೇಳಿದೆ.
ಬಸ್ ಅಪಘಾತದಲ್ಲಿ ಮಹಿಳೆ ಕೈ ಕಟ್
ಬಸ್ ಅಪಘಾತದಲ್ಲಿ ಮಹಿಳೆ ಕೈ ಕಟ್

ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ ಹತ್ತುವಾಗ ಮಹಿಳೆಯೊಬ್ಬರ ಕೈ ಕಟ್ ಆಗಿದ್ದು ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರಿ ಸಾರಿಗೆ ನಿಗಮ KSRTC ಚಾಲಕನ ತಪ್ಪಿಲ್ಲ ಎಂದು ಹೇಳಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ ಇತ್ತ ಕೆಲ ಅಹಿತಕರ ಘಟನೆಗಳೂ ಕೂಡ ವರದಿಯಾಗುತ್ತಿವೆ. ಇದಕ್ಕೆ ನೂತನ ಸೇರ್ಪಡೆಯಾಗಿ ಸೀಟ್ ಹಿಡಿಯುವ ಧಾವಂತದಲ್ಲಿ ಮಹಿಳೆಯೊಬ್ಬರು ಬಸ್ ಹತ್ತಲು ಹೋಗಿ ಅಪಘಾತದಲ್ಲಿ ತಮ್ಮ ಕೈ ಕಳೆದುಕೊಂಡಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರಿ ಸಾರಿಗೆ ನಿಗಮ ಕೆಎಸ್ ಆರ್ ಟಿಸಿ ಮಹಿಳೆಗೆ ಬಸ್ ಹತ್ತುವಾಗ ಕೈ ಕಟ್ ಆಗಿಲ್ಲ.. ಬದಲಿಗೆ ಲಾರಿ ಅಪಘಾತದಲ್ಲಿ ಆಕೆಗೆ ಗಾಯಗಳಾಗಿವೆ ಎಂದು ಹೇಳಿದೆ.

ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಬಸ್‌ನಲ್ಲಿ ಕಿಟಕಿ ಮೂಲಕ ಹತ್ತೋವಾಗ ಅವಘಡ ಸಂಭವಿಸಿ ಮಹಿಳೆಯೊಬ್ಬರು ಕೈ ಕಳೆದುಕೊಂಡಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಗಾಯಾಳು ಮಹಿಳೆಯ ಪರದಾಟದ ವೀಡಿಯೋ ಮನಕಲುವಂತಿದೆ. ಈ ನಡುವೆ, ಈ ಘಟನೆ ಬಗ್ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಬಸ್‌ನಲ್ಲಿ ಕಿಟಕಿ ಮೂಲಕ ಹತ್ತುತ್ತಿದ್ದ ಮಹಿಳೆಗೆ ಗಾಯವಾಗಿದೆ ಎಂಬುದು ಸುಳ್ಳು ಸುದ್ದಿ ಎಂದಿರುವ KSRTC ಇದು ಅಪಘಾತದಿಂದಾದ ಘಟನೆ ಎಂದು ಸ್ಪಷ್ಟಪಡಿಸಿದೆ. 

ಈ ಕುರಿತು ನಿಗಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, 
ದಿನಾಂಕ 18/06/2023 ರಂದು ಕ.ರಾ.ರ.ಸಾ.ನಿಗಮ, ಚಾಮರಾಜನಗರ ವಿಭಾಗದ ನಂಜನಗೂಡು ಘಟಕದ ವಾಹನ ಸಂಖ್ಯೆ KA-10-F-151 ಅನುಸೂಚಿ ಸಂಖ್ಯೆ 34 ರಲ್ಲಿ ನಂಜನಗೂಡಿನಿಂದ ಟಿ.ನರಸೀಪುರ ಕ ಕಾರ್ಯಚರಣೆ ಮಾಡುತ್ತಿರುವಾಗ, ಮಧ್ಯಾಹ್ನ ಸಮಯ ಸುಮಾರು 1.45 ರಲ್ಲಿ ಬಸವರಾಜಪುರದ ಹತ್ತಿರ ಎದುರು ದಿಕ್ಕಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಲಾರಿ ಸಂಖ್ಯೆ TN-77-Q-8735 ಯ ಚಾಲಕನು ಸಂಸ್ಥೆಯ ವಾಹನದ ಬಲ ಹಿಂಬದಿಯ ಕಿಟಕಿಯ ಬಳಿ ಢಿಕ್ಕಿ ಮಾಡಿ ಅಪಘಾತವಾಗಿರುತ್ತದೆ. ಈ ಅಪಘಾತದಲ್ಲಿ ಕಿಟಕಿಗಳ ಬಳಿ ಇರುವ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿರುತ್ತದೆ. ಶ್ರೀಮತಿ ಶಾಂತ ಕುಮಾರಿ, W/O ಲೇ. ಬಸವರಾಜು, 33 ವರ್ಷ, ಮಾಗುಡಿಲು, ಹೆಚ್.ಡಿ.ಕೋಟೆ ತಾಲೂಕು ಇವರಿಗೆ ಬಲಗೈ ತುಂಡಾಗಿದೆ ಹಾಗೂ ಶ್ರೀಮತಿ ರಾಜಮ್ಮ, W/O ನಾಗರಾಜ ನಾಯಕ, 50 ವರ್ಷ, ಹುಲ್ಲಹಳ್ಳಿ, ನಂಜನಗೂಡು ತಾಲೂಕು ಇವರಿಗೆ ಬಲಗೈ, ತೀವ್ರ ಪೆಟ್ಟಾಗಿರುತ್ತದೆ. ಸಂಸ್ಥೆಯ ಅಧಿಕಾರಿಗಳು ಸ್ಥಳಪರಿಶೀಲನ ನಡಿಸಿದ್ದು, ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿರುತ್ತದೆ.

ಲಾರಿ ಚಾಲಕನ ವಿರುದ್ಧ ಬಿಳಿಗರ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿರುತ್ತದೆ. ಈ ಅಪಘಾತದಲ್ಲಿ ಸಂಸ್ಥೆಯ ಚಾಲಕರ ತಪ್ಪಿರುವುದಿಲ್ಲ. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನಿಗಮವು ಭರಿಸುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವ ಹಾಗೆ ಕಿಟಕಿಯ ಮೂಲಕ ಬಸ್ಸನ್ನು ಹತ್ತುವಾಗ ನಡೆದಿರುವ ಘಟನೆ ಇದಾಗಿರುವುದಿಲ್ಲ ಎಂಬುದನ್ನು ತಮ್ಮಗಳ ಆದ ಗಮನಕ್ಕೆ ತರಲಾಗಿದೆ ಎಂದು KSRTC ಸ್ಪಷ್ಟನೆ ನೀಡಿದೆ.

ಏನಿದು ಘಟನೆ..?
ಜೂನ್ 18ರಂದು ಕೆಎಸ್ಸಾರ್ಟಿಸಿ ಚಾಮರಾಜನಗರ ವಿಭಾಗದ ಬಸ್ಸು ನಂಜನಗೂಡಿನಿಂದ ಟಿ.ನರಸೀಪುರಕ್ಕೆ ಕಾರ್ಯಚರಣೆ ಮಾಡುತ್ತಿರುವಾಗ, ಮಧ್ಯಾಹ್ನ1.45ರ ಸುಮಾರಿಗೆ ಬಸವರಾಜಪುರ ಬಳಿ, ಲಾರಿಯೊಂದು ಡಿಕ್ಕಿಯಾಗಿದೆ. ಆ ವೇಳೆ, ಬಸ್ಸಿನ ಕಿಟಕಿಯ ಬಳಿ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ. ಈ ಪೈಕಿ ಹೆಚ್.ಡಿ.ಕೋಟೆ ಮೂಲದ ಶಾಂತ ಕುಮಾರಿ ಎಂಬವರ ಬಲಗೈ ತುಂಡಾಗಿದೆ ಹಾಗೂ ಹುಲ್ಲಹಳ್ಳಿಯವರೆನ್ನಲಾದ  ರಾಜಮ್ಮ ಎಂಬವರ ಬಲಗೈಗೆ ತೀವ್ರ ಪೆಟ್ಟಾಗಿದೆ. 

ಈ ಕುರಿತಂತೆ ಮಾಹಿತಿ ಸಿಗುತ್ತಿದ್ದಂತೆಯೇ, ನಿಗಮದ ಅಧಿಕಾರಿಗಳು ಸ್ಥಳ ಧಾವಿಸಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಗಾಯಾಳುಗಳು ಚೇತರಿಸಿಕೊಂಡಿದ್ದು, ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನಿಗಮವು ಭರಿಸುತ್ತಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com