ಬಿಪಿಎಲ್ ಕಾರ್ಡಿನಲ್ಲಿ ಇಲ್ಲ ಬ್ಯಾಂಕ್ ವಿವರ; 'ಅನ್ನ ಭಾಗ್ಯ' ಯೋಜನೆ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಸರ್ಕಾರಕ್ಕೆ ಕಗ್ಗಂಟು!

ನಾಳೆ ಜುಲೈ 1ರಿಂದ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲು ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡುವುದು ಹೇಗೆ ಎಂಬ ಸಮಸ್ಯೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಳೆ ಜುಲೈ 1ರಿಂದ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲು ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡುವುದು ಹೇಗೆ ಎಂಬ ಸಮಸ್ಯೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. 

ಆಗಿರುವ ಸಮಸ್ಯೆಯೇನು?: ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳ (BPL) ಕಾರ್ಡ್‌ಗಳು ಬ್ಯಾಂಕ್ ಮತ್ತು PAN ಕಾರ್ಡ್ ವಿವರಗಳನ್ನು ಹೊಂದಿಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ ಭರವಸೆ ನೀಡಿದ್ದ ಖಾತ್ರಿ ಯೋಜನೆಗೆ ಅಗತ್ಯ ಅಕ್ಕಿ ಖರೀದಿಸಲು ಸಾಧ್ಯವಾಗದ ಕಾಂಗ್ರೆಸ್ ಸರಕಾರ ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ಕೆಜಿ ಗೆ 34 ರೂಪಾಯಿಗಳಂತೆ ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡಲು ನಿರ್ಧರಿಸಿತು.

ಮೊನ್ನೆ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜುಲೈ 1ರಿಂದ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಬಿಪಿಎಲ್ ಕಾರ್ಡುದಾರರಿಗೆ ಪೂರೈಸಲು ಪ್ರತಿ ತಿಂಗಳು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಆದರೆ ನಾವು ಅಗತ್ಯವಿರುವ ಪ್ರಮಾಣದ ಅಕ್ಕಿ ಸಂಗ್ರಹಿಸುವವರೆಗೆ, ಪ್ರತಿ ಫಲಾನುಭವಿಗೆ ತಿಂಗಳಿಗೆ 170 ರೂಪಾಯಿಗಳನ್ನು ಪಾವತಿಸುತ್ತೇವೆ. ರಾಜ್ಯದಲ್ಲಿ 85 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಒಳಗೊಂಡಿರುವ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ತಿಂಗಳಿಗೆ 750ರಿಂದ 800 ಕೋಟಿ ರೂಪಾಯಿ ಬೇಕಾಗುತ್ತದೆ ಎಂದಿದ್ದಾರೆ. 

ಬಿಪಿಎಲ್ ಕಾರ್ಡಿನಲ್ಲಿ ಕಾರ್ಡುದಾರರ ಹೆಸರು, ಕುಟುಂಬದಲ್ಲಿರುವ ಫಲಾನುಭವಿಗಳ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ವಿಳಾಸ ಮತ್ತು ಇತರ ವಿವರಗಳಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಆದರೆ ಅದರಲ್ಲಿ ಬ್ಯಾಂಕ್ ಅಥವಾ ಪ್ಯಾನ್ ಕಾರ್ಡ್ ವಿವರಗಳಿಲ್ಲ. ನಮ್ಮಲ್ಲಿ ಅಂಕಿಅಂಶಗಳೂ ಇಲ್ಲ, ಇದರಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ.

ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವುದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ಗೃಹ ಜ್ಯೋತಿ ಅಥವಾ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯಂತೆ ರಾಜ್ಯ ಸರ್ಕಾರವು ಅನ್ನ ಭಾಗ್ಯಕ್ಕಾಗಿ ಯಾವುದೇ ಅರ್ಜಿ ಸಲ್ಲಿಸುವ ವಿಧಾನವನ್ನು ಪ್ರಾರಂಭಿಸಿಲ್ಲ ಅಥವಾ ಯಾವುದೇ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸುತ್ತಿಲ್ಲ. ಬಿಪಿಎಲ್ ಕಾರ್ಡ್‌ಗಳು ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಲಿಂಕ್ ಮಾಡುವುದು ದೊಡ್ಡ ಕೆಲಸವಾಗಿರುವುದರಿಂದ ಫಲಾನುಭವಿಗಳಿಗೆ ತಕ್ಷಣ ಹಣವನ್ನು ಕಳುಹಿಸಲು ಸಾಧ್ಯವಾಗದಿರಬಹುದು ಎಂದು ಹೇಳುತ್ತಾರೆ. 

ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ಶಿವ ಟ್ರೇಡರ್ಸ್ ಮಾಲೀಕ ಎಂ.ಸುರೇಶ್, ಯಾವುದೇ ಅಕ್ಕಿ ತಳಿ ಕೆಜಿಗೆ 34 ರೂಪಾಯಿಗೆ ಸಿಗುವುದಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ 50 ರಿಂದ 60 ರೂಪಾಯಿಗಳಿದ್ದು, ಸಗಟು ಮಾರುಕಟ್ಟೆಯಲ್ಲಿ 40 ರಿಂದ 50 ರೂಪಾಯಿಗಳಷ್ಟಿದೆ. ಭಾರತೀಯ ಆಹಾರ ನಿಗಮವು ರಾಜ್ಯ ಸರಕಾರಿ ಸಂಸ್ಥೆಗಳು ಅಕ್ಕಿಯನ್ನು ಸಗಟು ಖರೀದಿಸಲು ನಿಗದಿಪಡಿಸಿದ ಬೆಲೆ 34 ರೂಪಾಯಿ ಆದರೆ ಜನಸಾಮಾನ್ಯರಿಗೆ ಆ ಬೆಲೆಗೆ ಸಿಗುವುದಿಲ್ಲ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com