ಬೆಂಗಳೂರು : 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದ ರಾಜ್ಯಾದ್ಯಂತ ಸರ್ಕಾರಿ ಸೇವೆಗಳಿಗೆ ಬಹಳ ತೊಂದರೆಯಾಗುತ್ತಿದೆ. ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸೌಲಭ್ಯ ದೊರೆಯುತ್ತಿಲ್ಲ.
ಮಧ್ಯಂತರ ಪರಿಹಾರ ಇಲ್ಲದೇ ಮುಷ್ಕರ ವಾಪಸ್ ಇಲ್ಲ ಎಂದು ಸಿಎಂಗೆ ಸರ್ಕಾರಿ ನೌಕರರ ಸಂಘ ತೀರ್ಮಾನ ತಿಳಿಸಿದ್ದು, ಅಧ್ಯಕ್ಷ ಷಡಕ್ಷರಿ ಸಿಎಂ ಭೇಟಿಯಾಗಿ ನಿನ್ನೆ ತಮ್ಮ ನಿರ್ಣಯ ತಿಳಿಸಿದ್ದಾರೆ.ನಿನ್ನೆ ಸಾಯಂಕಾಲ ಮುಖ್ಯಮಂತ್ರಿಗಳ ಜೊತೆ ನಡೆಸಿದ ಮೊದಲ ಸುತ್ತಿನ ಸಭೆ ವಿಫಲವಾಗಿದೆ.
ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ ಪಡೆದಿಲ್ಲ, ಮುಷ್ಕರ ಕರೆಕೊಟ್ಟಂತೆ ಮುಂದುವರೆಯಲಿದೆ. ಸಿಎಂ ಮೂರು ಗಂಟೆಗಳಲ್ಲಿ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ, ಸರ್ಕಾರ ಮತ್ತೊಂದು ಸುತ್ತಿನ ಸಭೆಯನ್ನು ಕರೆದಿದೆ. ಸಭೆಯ ನಂತರ ನಮ್ಮ ತೀರ್ಮಾನ ಹೇಳುತ್ತೇವೆ, ಸರ್ಕಾರಿ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸುವ ವಿಶ್ವಾಸ ಇದೆ ಎಂದು ಇಂದು ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸಿಎಂ ಭೇಟಿ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರ್ಕಾರ ನಮ್ಮ ವಿರುದ್ಧ ಕ್ರಮ ಕೈಗೊಂಡರೆ ನಮಗೆ ಯಾವುದೇ ಭಯವಿಲ್ಲ, ಜೈಲಿಗೆ ಹೋಗಲೂ ಸಿದ್ಧವಿದ್ದೇವೆ ಎಂದು ನಿನ್ನೆಯೇ ನಾನು ಹೇಳಿದ್ದೆ. ನಾವು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಇನ್ನೊಂದು ಸುತ್ತಿನ ಸಭೆ ನಡೆಸಿ ಇನ್ನು ಎರಡು ಮೂರು ಗಂಟೆಗಳಲ್ಲಿ ಸರ್ಕಾರದ ನಿರ್ಣಯದ ಬಗ್ಗೆ ಸ್ಪಷ್ಟ ನಿಲುವು ಗೊತ್ತಾಗಬಹುದು ಎಂದರು.
ಮಧ್ಯಂತರ ವರದಿ ತರಿಸಿ ಸರ್ಕಾರ ಈ ತಕ್ಷಣವೇ ಜಾರಿಗೆ ಮಾಡಬಹುದು, ಅದಕ್ಕೆ ಸಮಯ ಬೇಕಾಗಿಲ್ಲ. ನೌಕರರಿಗೋಸ್ಕರ ಜೈಲಿಗೆ ಹೋಗಲೂ ಸಿದ್ಧನಿದ್ದೇನೆ, ನನ್ನ ವಿರುದ್ಧ ಯಾವುದೇ ಕೇಸುಗಳಿಲ್ಲ, ಹಿಂದೆ ನಾಲ್ಕೈದು ಕೇಸುಗಳಲ್ಲಿ ಲೋಕಾಯುಕ್ತ ವಿಚಾರಣೆ ನಡೆಸಿ ನನಗೆ ಕ್ಲೀನ್ ಚಿಟ್ ಕೂಡ ಸಿಕ್ಕಿದೆ ಎಂದರು.
ಹಣಕಾಸು ಇಲಾಖೆ ಅಧಿಕಾರ ಜೊತೆ ಸಿಎಂ ಸಭೆ: ಸದ್ಯ ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೇಸ್ ಕೋರ್ಸ್ ಬಳಿಯ ಸರ್ಕಾರಿ ನಿವಾಸದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅದರಲ್ಲಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರು ಸಹ ಭಾಗವಹಿಸುತ್ತಿದ್ದಾರೆ. ಅಧಿಕಾರಿಗಳ ಸಭೆ ಬಳಿಕ ಅಂತಿಮ ನಿರ್ಧಾರ ತಿಳಿಸಲಿದ್ದಾರೆ.
ಈ ಮಧ್ಯೆ, ರಾಜ್ಯ ಸರ್ಕಾರದಿಂದ ಸರ್ಕಾರಿ ಸಿಬ್ಬಂದಿಗೆ ಸುತ್ತೋಲೆ ಕಳಿಸಲಾಗಿದ್ದು ಅನಧಿಕೃತವಾಗಿ ಕೆಲಸಕ್ಕೆ ಗೈರು ಹಾಜರಾದರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಶಕ್ತಿ ಕೇಂದ್ರದ ಬಳಿ ನೌಕರರ ಪ್ರತಿಭಟನೆ: 7 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಚಿವಾಲಯ, ವಿಧಾನ ಸಭೆ, ವಿಧಾನ ಪರಿಷತ್ ಸಿಬ್ಬಂದಿಯಿಂದ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆದಿದೆ. ಸರ್ಕಾರ ಪ್ರತಿಭಟನೆ ಮಾಡಲು ಅವಕಾಶ ನೀಡಬಾರದು, ತಕ್ಷಣವೇ ನಮ್ಮ ಬೇಡಿಕೆ ಈಡೇರಿಸಬೇಕು. ನಾವು ಯಾವುದೇ ಬ್ಲಾಕ್ ಮೇಲ್ ಮಾಡುತ್ತಿಲ್ಲ, ಪ್ರತಿಭಟನೆ ನಮ್ಮ ಹಕ್ಕು. ನಾವು ಕೊರೊನಾ ಸಮಯದಲ್ಲಿ ಕೆಲಸ ಮಾಡಿದ್ದೇವೆ, ಪ್ರವಾಹದ ಸಂದರ್ಭದಲ್ಲಿ ದೇಣಿಗೆ ನೀಡಿದ್ದೇವೆ. ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆ ನೀಡಿದ್ದೇವೆ ಎಂದು ಹೇಳಿದರು.
Advertisement