ಹಂಪಿಯ ತುಂಗಭದ್ರೆಯಲ್ಲಿ ಅಮೆರಿಕಾ ಪುರಾತತ್ವಶಾಸ್ತ್ರಜ್ಞನ ಅಸ್ಥಿ ವಿಸರ್ಜನೆ

ಅಂತರರಾಷ್ಟ್ರೀಯ ಪುರಾತತ್ವಜ್ಞ ಸಂಶೋಧಕ ಜಾನ್ ಮೆರ್ವಿನ್ ಫ್ರಿಟ್ಸ್ ಅವರ ಅಸ್ಥಿಯನ್ನು ಅವರ ಕೊನೆಯ ಆಸೆಯಂತೆ ಹಂಪಿಯ ತುಂಗಾಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ.
ಚಿತಾಭಸ್ಮವನ್ನು ಹಂಪಿಯ ತುಂಗಭದ್ರಾದಲ್ಲಿ ವಿಸರ್ಜನೆ ಮಾಡುತ್ತಿರುವುದು.
ಚಿತಾಭಸ್ಮವನ್ನು ಹಂಪಿಯ ತುಂಗಭದ್ರಾದಲ್ಲಿ ವಿಸರ್ಜನೆ ಮಾಡುತ್ತಿರುವುದು.

ಹಂಪಿ: ಅಂತರರಾಷ್ಟ್ರೀಯ ಪುರಾತತ್ವಜ್ಞ ಸಂಶೋಧಕ ಜಾನ್ ಮೆರ್ವಿನ್ ಫ್ರಿಟ್ಸ್ ಅವರ ಅಸ್ಥಿಯನ್ನು ಅವರ ಕೊನೆಯ ಆಸೆಯಂತೆ ಹಂಪಿಯ ತುಂಗಾಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ.

ಅಮೆರಿಕಾದವರಾದ 87 ವರ್ಷದ ಫ್ರಿಟ್ಸ್‌ ಅವರು ವಿದೇಶದಲ್ಲಿ ಮರಣ ಹೊಂದಿದ್ದರೂ, ಅವರ ಕೊನೆಯ ಇಚ್ಛೆಯಂತೆ ಅಸ್ಥಿ ವಿಸರ್ಜನೆ ಹಾಗೂ ಅಂತಿಮ ಧಾರ್ಮಿಕ ವಿಧಿವಿಧಾನಗಳನ್ನು ಹಂಪಿಯಲ್ಲಿ ನಡೆಸಲಾಗಿದೆ.

ಫ್ರಿಟ್ಜ್ ಅವರು‌ 1981ರಿಂದ ನಿರಂತರವಾಗಿ ಹಂಪಿಗೆ ಭೇಟಿ ನೀಡುತ್ತಿದ್ದರು. ಹಂಪಿ ಬಗ್ಗೆ ಆಳವಾದ ಸಂಶೋಧನೆ ನಡೆಸಿ, ಅನೇಕ ಪುಸ್ತಕಗಳನ್ನು ಬರೆದಿದ್ದರು. ಇದರಲ್ಲಿ ಮೊನೊಗ್ರಾಫ್ ಸರಣಿ ಪ್ರಮುಖವಾದದ್ದಾಗಿದೆ.

ಹಂಪಿ ಜೊತೆಗೂ ವಿಶೇಷ ಸಂಬಂಧ ಹೊಂದಿದ್ದ ಹಿನ್ನಲೆ ತಮ್ಮ ಕಾಲದ ನಂತರ ತಮ್ಮ ಅಸ್ಥಿಯನ್ನು ಹಂಪಿಯಲ್ಲೇ ವಿಸರ್ಜಿಸಬೇಕೆಂದು ಹೇಳಿದ್ದರು. ಅದರಂತೆ ಜಾನ್ ಅವರ ಮೊಮ್ಮಗ ಸೇರಿದಂತೆ ಅವರ ಕುಟುಂಬ ಸದಸ್ಯರು ಎಲ್ಲಾ ರೀತಿಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ವಿರೂಪಾಕ್ಷ ದೇವಸ್ಥಾನದ ಅರ್ಚಕರು ಮಾತನಾಡಿ, ಜಾನ್ ಅವರು ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುತ್ತಿದ್ದರು, ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ಹಂಪಿಯಲ್ಲಿರುವ ಸ್ಮಾರಕಗಳ ಬಗ್ಗೆ ಹೊಸ ಸಿದ್ಧಾಂತಗಳನ್ನು ಹೇಳುತ್ತಿದ್ದರು.

ಜಾನ್ ಅವರ ಕುಟುಂಬ ಸದಸ್ಯರು ನಮ್ಮ ಬಳಿಗೆ ಬಂದು ಅವರ ಚಿತಾಭಸ್ಮವನ್ನು ವಿಸರ್ಜನೆ ಮಾಡಬೇಕು. ಅದು ಅವರ ಕೊನೆಯ ಆಸೆಯಾಗಿತ್ತು ಎಂದು ಹೇಳಿದರು. ಇದರಂತೆ ಜಾನ್ ಅವರ ಅಂತ್ಯಕ್ರಿಯೆಯನ್ನು ಲಂಡನ್‌ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಸಲಾಯಿತು. ನಂತರ ಅಸ್ತಿಯನ್ನು ಇಲ್ಲಿಗೆ ತಂದು ಹಂಪಿಯ ಪುರಂದರ ಮಂಟಪದ ಬಳಿ ಆಚರಣೆಗಳನ್ನು ನಡೆಸಲಾಯಿತು ಎಂದು ಹೇಳಿದ್ದಾರೆ.

ಹಂಪಿ ಸಮೀಪದ ಆನೆಗುಂದಿಯಲ್ಲಿ ನೆಲೆಸಿರುವ ವಿಜಯನಗರ ಸಾಮ್ರಾಜ್ಯದ ವಂಶದವರಾದ ಕೃಷ್ಣದೇವರಾಯ ಅವರು ಜಾನ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

“ಜಾನ್ ಮತ್ತು ಅವರ ಸ್ನೇಹಿತರು ಹಂಪಿಗೆ ಭೇಟಿ ನೀಡಿದಾಗಲೆಲ್ಲ ನನ್ನ ತಂದೆಯನ್ನು ಭೇಟಿಯಾಗುತ್ತಿದ್ದರು” ಎಂದು ಹೇಳಿದ್ದಾರೆ.

ಹಂಪಿಯ ಸೌಂದರ್ಯವನ್ನು ಕಾಪಾಡಲು ಬಯಸಿದ್ದರು ಜಾನ್...
“ಜಾನ್ ಫ್ರಿಟ್ಜ್ ಅವರು 1980 ರ ದಶಕದ ಉತ್ತರಾರ್ಧದಲ್ಲಿ ಕಮಲ್ ಮಹಲ್ ಬಳಿ ಟೆಂಟ್ ಹಾಕುತ್ತಿದ್ದರು. ಹಂಪಿಯ ಸೌಂದರ್ಯವನ್ನು ಕಾಪಾಡುವ ಬಗ್ಗೆ ನನ್ನ ತಂದೆಯೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದರು. ಅವರ ಸಾವು ದೊಡ್ಡ ನಷ್ಟವಾಗಿದೆ ಎಂದು ಕೃಷ್ಣದೇವರಾಯ ತಿಳಿಸಿದ್ದಾರೆ.

2019 ರಲ್ಲಿ ಜಾನ್ ಅವರು ನನ್ನನ್ನು ಭೇಟಿ ಮಾಡಿದ್ದರು. ಹಂಪಿ ಕುರಿತು ಅವರು ಬರೆದಿರುವ ಕೃತಿಗಳನ್ನು ಒಂದು ಸೂರಿನಡಿ ತರುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೆವು. ಈ ಕುರಿತು ಸರ್ಕಾರಕ್ಕೂ ಮಾಹಿತಿ ನೀಡಿದ್ದೇನೆ. ಜಾನ್ ಅವರು ಬರೆದಿರುವ ಕೃತಿಗಳ ಪ್ರತಿಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಅವರ ಕೃತಿಗಳು ಬ್ರಿಟೀಷ್ ಗ್ರಂಥಾಲಯದಲ್ಲಿದೆ. ಈ ಕೃತಿಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com