ಕಾರವಾರ: ಪಂಪ್ ರಿಪೇರಿಗೆಂದು ಬಾವಿಗೆ ಇಳಿದಿದ್ದ ವ್ಯಕ್ತಿಯೋರ್ವನನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದಲ್ಲಿ ನಡೆದಿದೆ.
ಮೃತರನ್ನು ಶಿರಸಿಯ ದೇವನಿಲಯದ ನಿವಾಸಿ 48 ವರ್ಷದ ಗೋವಿಂದ ಸೋಮಯ್ಯ ಪೂಜಾರಿ, 38 ವರ್ಷದ ಸುರೇಶ್ ನಾಯರ್ ಮತ್ತು 23 ವರ್ಷದ ಗಣೇಶ್ ರಾಮದಾಸ್ ಶೇಟ್ ಎಂದು ಗುರುತಿಸಲಾಗಿದೆ. ಬಾವಿಯಲ್ಲಿ ಬಿದ್ದಿದ್ದ ಪಂಪ್ ಸೆಟ್ ತೆಗೆಯಲು ಹೋಗಿ ಈ ದುರ್ಘಟನೆ ನಡೆದಿದೆ.
ಗೋವಿಂದ ಸೋಮಯ್ಯ ಪೂಜಾರಿ ಪಂಪ್ ಸರಿಪಡಿಸುವಾಗ ಆಮ್ಲಜನಕ ಕೊರತೆಯಿಂದಾಗಿ ಬಾವಿಯೊಳಗೆ ಬಿದ್ದಿರುತ್ತಾರೆ. ಅವರನ್ನು ರಕ್ಷಿಸಲು ಮುಂದಾದ ಗಣೇಶ ರಾಮದಾಸ್ ಶೇಟ್ ಹಾಗೂ ಭರತನಹಳ್ಳಿಯ ಸುರೇಶ ನಾಯರ್ ಬಾವಿಯೊಳಗೆ ಇಳಿದಿದ್ದು, ಮೂವರೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಯಲ್ಲಾಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement