ಬೆಂಗಳೂರು: ಕೃಷಿ ಇಲಾಖೆಯಲ್ಲಿ ಮಂಜೂರಾದ 8,292 ಹುದ್ದೆಗಳ ಪೈಕಿ ಶೇ.5195 ಅಂದರೆ ಶೇ.58ರಷ್ಟು ಹುದ್ದೆಗಳು ಖಾಲಿ ಇದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಮಂಗಳವಾರ ಸೂಚನೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಇಲಾಖೆಯಲ್ಲಿ ಶೇ.58ರಷ್ಟು ಹುದ್ದೆಗಳು ಖಾಳಿ ಇದ್ದು, ಇದರಿಂದ ಸರ್ಕಾರದ ಯೋಜನೆಗಳ ವಿತರಣೆಯಲ್ಲಿ ವಿಳಂಬವಾಗುವಂತೆ ಮಾಡಲಿದೆ. ಹೀಗಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಈ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮುಂಗಾರು ಪೂರ್ವದಲ್ಲಿ ಬಿತ್ತನೆ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಗಾರು ಪೂರ್ವದಲ್ಲಿ ಕರ್ನಾಟಕದಲ್ಲಿ 108 ಮಿ.ಮೀ ಮಳೆಯಾಗಬೇಕಿತ್ತು. ಮುಂಗಾರು ಪೂರ್ವದಲ್ಲಿ 2.95 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 2.48 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ನಮ್ಮಲ್ಲಿ 7.85 ಲಕ್ಷ ಕ್ವಿಂಟಾಲ್ ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ, ಈ ಮುಂಗಾರು ಸಂದರ್ಭದಲ್ಲಿ 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದೇವೆ.
ಪ್ರಸ್ತುತ 25.47 ಲಕ್ಷ ಟನ್ ರಸಗೊಬ್ಬರಗಳ ಬೇಡಿಕೆಯೂ ಇದ್ದು, ಇಲಾಖೆ ಈಗಾಗಲೇ 7.30 ಲಕ್ಷ ಟನ್ ಪೂರೈಸಿದೆ. ಗೋದಾಮುಗಳಲ್ಲಿ 13.90 ಲಕ್ಷ ಟನ್ಗಳಿದ್ದರೆ, ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ 1.68 ಲಕ್ಷ ಟನ್ಗಳಷ್ಟು ಬಫರ್ ಸ್ಟಾಕ್ ಇದೆ. ಹಾಗಾಗಿ ಗೊಬ್ಬರದ ಕೊರತೆ ಇಲ್ಲ.ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳು ಹಾಜರಿರಬೇಕು, ಮಣ್ಣು ಪರೀಕ್ಷೆ ವರದಿಗಳನ್ನು ಸಕಾಲದಲ್ಲಿ ಸಲ್ಲಿಸಬೇಕು, ಬೆಳೆ ವಿಮೆಯನ್ನು ರೈತರಿಗೆ ತಡೆರಹಿತವಾಗಿಸಬೇಕು ಎಂದು ಸೂಚನೆ ನೀಡಿದರು.
Advertisement