ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ಈ ವಿಷಯದ ಮೇಲೆ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಮಂಗಳವಾರ ದಾಖಲಿಸಿಕೊಂಡಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠವು, ವೈದ್ಯರು, ತಂತ್ರಜ್ಞರು ಮತ್ತು ವಿವಿಧ ಸಿಬ್ಬಂದಿ ಸೇರಿದಂತೆ 16,500 ವೈದ್ಯಕೀಯ ಸಿಬ್ಬಂದಿ ಕೊರತೆ ಕುರಿತು ಅಕ್ಟೋಬರ್ 16 ರಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ವರದಿಯನ್ನು ಉಲ್ಲೇಖಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ 16,500 ವೈದ್ಯಕೀಯ ಸಿಬ್ಬಂದಿ ಕೊರತೆ!
ನಂತರ, ಈ ಸುದ್ದಿ ವರದಿಯ ಆಧಾರದ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನೋಂದಾಯಿಸಲು ಮತ್ತು ಅದನ್ನು ನ್ಯಾಯಾಲಯದ ಮುಂದೆ ಇಡುವಂತೆ ಹೈಕೋರ್ಟ್ನ ರಿಜಿಸ್ಟ್ರಾರ್ಗೆ ಸೂಚಿಸಲಾಯಿತು.
ರಾಜ್ಯದಲ್ಲಿ ಗ್ರಾಮೀಣ ಭಾಗದ 454 ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆಯಿದೆ. ಇದಲ್ಲದೆ, ರಾಜ್ಯದಲ್ಲಿ 723 ಎಂಬಿಬಿಎಸ್ ವೈದ್ಯರು, 7,492 ದಾದಿಯರು, 1,517 ಲ್ಯಾಬ್ ತಂತ್ರಜ್ಞರು, 1,517 ಫಾರ್ಮಸಿ ಸಿಬ್ಬಂದಿ, 1,752 ಸಹಾಯಕ ಸಿಬ್ಬಂದಿ ಮತ್ತು 3,253 ಗ್ರೂಪ್ ಡಿ ನೌಕರರು ಸೇರಿ ಹಲವು ಸಿಬ್ಬಂದಿ ಕೊರತೆಯಿದೆ ಎಂದು ವರದಿ ಪ್ರಕಟವಾಗಿರುವುದನ್ನು ಹೈಕೋರ್ಟ್ ಪೀಠ ಗಮನಿಸಿತು.
ಇದರಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿದ್ದು, ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಮುಂದಾಯಿತು. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ವಕೀಲ ಶ್ರೀಧರ್ ಪ್ರಭು ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಲಾಗಿದೆ.
Advertisement