ವಿದ್ಯಾರ್ಥಿಗಳಿಗೆ 'ಚಪ್ಪಲಿ ಭಾಗ್ಯ' ಕರುಣಿಸಿದ ರಾಜ್ಯ ಸರ್ಕಾರ: ಪೋಷಕರ ಆಕ್ರೋಶ

ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಮತ್ತು ಶೂ-ಸಾಕ್ಸ್ ವಿತರಣೆ ಇದೆ. ಈ ಯೋಜನೆ ಇರುವಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಬದಲಾಗಿ 'ಚಪ್ಪಲಿ ಭಾಗ್ಯ' ಸಿಕ್ಕಿದ್ದು, ಇದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷ್ಮೇಶ್ವರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಚಪ್ಪಲಿ ಧರಿಸುತ್ತಿರುವುದು.
ಲಕ್ಷ್ಮೇಶ್ವರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಚಪ್ಪಲಿ ಧರಿಸುತ್ತಿರುವುದು.

ಗದಗ: ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಮತ್ತು ಶೂ-ಸಾಕ್ಸ್ ವಿತರಣೆ ಇದೆ. ಈ ಯೋಜನೆ ಇರುವಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಬದಲಾಗಿ 'ಚಪ್ಪಲಿ ಭಾಗ್ಯ' ಸಿಕ್ಕಿದ್ದು, ಇದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಕೆಲವು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಕಾರದಿಂದ ಪೂರೈಕೆಯಾಗುವ ಸಮವಸ್ತ್ರದಲ್ಲಿ ಶೂ, ಸಾಕ್ಸ್ ಬದಲಿಗೆ ಚಪ್ಪಲಿ ಸಿಕ್ಕಿದ್ದು, ಈ ಬಗ್ಗೆ ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ, ಆದರೆ, ಶಾಲೆಯ ಅಧಿಕಾರಿಗಳು ಮಾತ್ರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕೆಲವು ವಾರ್ಡ್‌ಗಳ ಪೋಷಕರು ತಮ್ಮ ಮಕ್ಕಳಿಗೆ ಶೂಗಳ ಬದಲಾಗಿ ಚಪ್ಪಲಿಯನ್ನು ಬಯಸುತ್ತಾರೆ. ಹೀಗಾಗಿ ಚಪ್ಪಲಿ ನೀಡಿದ್ದೇವೆಂದು ಹೇಳಿದ್ದಾರೆ.

ಗದಗ ಜಿಲ್ಲೆಯ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ ಸಿಕ್ಕಿವೆ. ಆದರೆ, ಲಕ್ಷ್ಮೇಶ್ವರ ತಾಲೂಕಿನ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂಗಳಿಗೆ ಬದಲಾಗಿ ಚಪ್ಪಲಿಗಳನ್ನು ವಿತರಣೆ ಮಾಡಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಕೆಲವು ವಿದ್ಯಾರ್ಥಿಗಳು ಬಯಸಿದ ಕಾರಣ ಚಪ್ಪಲಿಗಳನ್ನು ನೀಡಲಾಗಿದೆ ಎಂದು ಆಯಾ ಶಾಲೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ದಸರಾ ಹಬ್ಬದ ರಜೆಗೂ ಮೊದಲು ವಿದ್ಯಾರ್ಥಿಗಳಿಗೆ ಶೂ-ಸಾಕ್ಷ್, ಸಮವಸ್ತ್ರ ವಿತರಿಸಲು ಆದೇಶಿಸಿತ್ತು. ಎಲ್ಲ ಶಾಲೆಗಳಿಗೆ ಈ ಬಗ್ಗೆ ನೋಟಿಸ್ ನೀಡಿತ್ತು. ಈ ಕುರಿತು ಶಾಲಾ ಅಭಿವೃದ್ಧಿ ವ್ಯವಸ್ಥಾಪನಾ ಸಮಿತಿ (ಎಸ್‌ಡಿಎಂಸಿ) ಸದಸ್ಯರನ್ನು ಪರಿಶೀಲಿಸುವಂತೆ ತಿಳಿಸಿದೆ.

ಹೀಗಿದ್ದರೂ ಲಕ್ಷ್ಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ತಿಬಾನ, ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಂಚಲಾಪುರದಲ್ಲಿ ಈಗ ವಿದ್ಯಾರ್ಥಿಗಳಿಗೆ ಶೂಗಳ ಬದಲಾಗಿ ಚಪ್ಪಲಿ ನೀಡಲಾಗಿದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆಯೇ? ಸರ್ಕಾರ ಶೂ ನೀಡುವಂತೆ ಹೇಳಿದ್ದರೂ ಆದೇಶ ಧಿಕ್ಕರಿಸಿ ನಿಯಮ ಪಾಲಿಸದೇ ಚಪ್ಪಲಿ ನೀಡಲಾಗಿದೆಯೇ? ಎಂಬುದು ಬಹಿರಂಗೊಳ್ಳಬೇಕಿದೆ.

ನಾವು ಶೂಗಳು ಮತ್ತು ಸಾಕ್ಸ್‌ಗಳನ್ನು ಬಯಸಿದ್ದೆವು. ಆದರೆ ನಮಗೆ ಚಪ್ಪಲಿಗಳನ್ನು ನೀಡಲಾಗಿದೆ ಎಂದು ಕೆಲ ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಮಕ್ಕಳು ಬೇರೆ ಬೇರೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಚಿಕ್ಕವನಿಗೆ ಶೂ-ಸಾಕ್ಸ್‌ ಸಿಕ್ಕರೆ, ದೊಡ್ಡ ಮಗನಿಗೆ ಚಪ್ಪಲಿ ನೀಡಲಾಗಿದೆ. ಶಾಲೆಗಳ ಈ ನಡೆ ಇಬ್ಬರು ಮಕ್ಕಳ ಜಗಳಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಶೂ ಭಾಗ್ಯ ಘೋಷಿಸಿದರೂ ಸಹಿತ ವಿದ್ಯಾರ್ಥಿಗಳಿಗೆ ಚಪ್ಪಲಿ ಭಾಗ್ಯ ಕರುಣಿಸಿದ್ದು ಸರಿಯಲ್ಲ ಎಂದು ಕೃಷಿ ಕಾರ್ಮಿಕರು ಆಗಿರುವ ಇಬ್ಬರು ಮಕ್ಕಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು.

ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ನಿರ್ಮಲಾ ನರೇಗಲ್ ಅವರು ಮಾತನಾಡಿ, ಮಕ್ಕಳು ಶಾಲೆಗಳಲ್ಲಿ ಮಧ್ಯಾಹ್ನದ ಊಟ ಮಾಡುವಾಗ ಹಾಗೂ ಇತರೆ ಸಮಯಗಳಲ್ಲಿ ಶೂ ತೆಗೆಯುವುದು ಕಷ್ಟವಾಗುತ್ತದೆ. ಹೀಗಾಗಿ ಚಪ್ಪಲಿ ಕೊಡಿಸಲು ಕೆಲವು ಫೋಷಕರು ಮನವಿ ಮಾಡಿದ್ದರು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com