ಉಡುಪಿ: ಬೆಂಕಿ ಹತ್ತಿ 10 ಮೀನುಗಾರಿಕೆ ದೋಣಿಗಳು ಬೆಂಕಿಗೆ ಆಹುತಿ, 9 ಕೋಟಿ ರೂ. ಅಂದಾಜು ನಷ್ಟ
ಉಡುಪಿ: ಕೃಷ್ಣನ ನಾಡು ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಿನ್ನೆ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಂಗರು ಹಾಕಲಾಗಿದ್ದ ಎಂಟು ದೊಡ್ಡ ಮತ್ತು ಎರಡು ಸಣ್ಣ ಮೀನುಗಾರಿಕೆ ನಡೆಸುವ ದೋಣಿಗಳು ಸುಟ್ಟು ಭಸ್ಮವಾಗಿವೆ.
ಅಷ್ಟೇ ಅಲ್ಲದೆ ಡಿಂಗಿ ದೋಣಿ, ಒಂದು ಸೈಕಲ್, ಎರಡು ಬೈಕ್ ಗಳು ಮತ್ತು ಎರಡು ಸೆಟ್ ಮೀನುಗಾರಿಕೆ ಬಲೆಗಳು ಬೆಂಕಿಯಲ್ಲಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಶ್ರೀಗುರು, ಮೂಕಾಂಬಿಕಾ, ಪ್ರಿಯದರ್ಶಿನಿ, ಯಕ್ಷೇಶ್ವರಿ, ಶ್ರೀ ಮಂಜುನಾಥ, ಸೀ ಕ್ವೀನ್ ಮತ್ತು ಮಧುಶ್ರೀ ಎಂಬ ಮೀನುಗಾರಿಕೆ ನಡೆಸುವ ದೋಣಿಗಳು ಬೆಂಕಿಗೆ ಆಹುತಿಯಾದವು. ಜಲರಾಣಿ ಎಂಬ ಒಂದು ಹಡಗು ಭಾಗಶಃ ಸುಟ್ಟುಹೋಗಿದೆ.
ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಪ್ರಾಥಮಿಕ ವರದಿಗಳ ಪ್ರಕಾರ ಒಂದು ದೋಣಿಯಿಂದ ಪ್ರಾರಂಭವಾದ ಬೆಂಕಿ ಶೀಘ್ರದಲ್ಲೇ ಹತ್ತಿರದಲ್ಲಿ ಲಂಗರು ಹಾಕಲಾಗಿದ್ದ ಇತರ ದೋಣಿಗಳಿಗೆ ಹರಡಿತು. ಈ ಪ್ರದೇಶದಲ್ಲಿ ಸುಮಾರು 40 ಮೀನುಗಾರಿಕಾ ದೋಣಿಗಳು ಲಂಗರು ಹಾಕಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್ ವೈದ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಮಾರು 9 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ