ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ-ಮಗು ಸಾವು: ತನಿಖೆಗೆ ಲೋಕಾಯುಕ್ತ ಆದೇಶ

ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಮತ್ತು ಆಕೆಯ ಒಂಬತ್ತು ತಿಂಗಳ ಮಗು ಮೃತಪಟ್ಟ ಘಟನೆ ಕುರಿತು ಮಾಧ್ಯಮಗಳ ವರದಿಗಳನ್ನು ಆಧರಿಸಿ ರಾಜ್ಯ ಸರ್ಕಾರ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದೆ.
ವಿದ್ಯುತ್ ತಂತಿ ತಗುಲಿ ತಾಯಿ-ಮಗು ಸಾವು
ವಿದ್ಯುತ್ ತಂತಿ ತಗುಲಿ ತಾಯಿ-ಮಗು ಸಾವು

ಬೆಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಮತ್ತು ಆಕೆಯ ಒಂಬತ್ತು ತಿಂಗಳ ಮಗು ಮೃತಪಟ್ಟ ಘಟನೆ ಕುರಿತು ಮಾಧ್ಯಮಗಳ ವರದಿಗಳನ್ನು ಆಧರಿಸಿ ರಾಜ್ಯ ಸರ್ಕಾರ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದೆ.

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ತನಿಖೆ ನಡೆಸಿ ಮುಂದಿನ ವಿಚಾರಣೆಯ ದಿನಾಂಕವಾದ ಡಿಸೆಂಬರ್ 8ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ. 

ತಮಿಳುನಾಡಿನಲ್ಲಿ ದೀಪಾವಳಿ ಆಚರಿಸಿ ಬೆಂಗಳೂರಿಗೆ ಆಗಮಿಸಿದ್ದ ಸೌಂದರ್ಯ (23ವ) ಮತ್ತು ಅವರ ಪುತ್ರಿ ಸುವೀಕ್ಷಾ(9 ತಿಂಗಳ ಮಗು) ಮೊನ್ನೆ ನವೆಂಬರ್ 19 ರಂದು ವೈಫ್‌ಫೀಲ್ಡ್ ಮುಖ್ಯರಸ್ತೆಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದರು. 

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ನೋಟಿಸ್ ಜಾರಿ ಮಾಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಸೂಚಿಸಿದರು.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಉದ್ದೇಶ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಜನತೆಗೆ ನೀಡುವಂತೆ ಮಾಡುವುದು. ಆಡಳಿತ ಮತ್ತು ದುರಾಡಳಿತವನ್ನು ತಡೆಗಟ್ಟಲು ವಿದ್ಯುತ್ ಮಾರ್ಗದ ಸರಿಯಾದ ನಿರ್ವಹಣೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ವಹಿಸಿರುವ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯವು ಇಲ್ಲಿ ಎದ್ದು ಕಾಣುತ್ತದೆ. ನನ್ನ ಅಭಿಪ್ರಾಯದಲ್ಲಿ, ಸೆಕ್ಷನ್ 2(10) ಅಡಿಯಲ್ಲಿ 'ದುರಾಡಳಿತ' ಅರ್ಥದಲ್ಲಿ ಕೇಸು ದಾಖಲಿಸಬಹುದಾಗಿದೆ ಎಂದರು. 

ಬೆಸ್ಕಾಂನ ವೆಬ್‌ಸೈಟ್‌ ಪ್ರಕಾರ, 2015-16 ರಿಂದ 2021-22 ರವರೆಗೆ ಪ್ರತಿ ವರ್ಷ ಸರಾಸರಿ 200 ರಿಂದ 280 ಅಪಘಾತಗಳು ವರದಿಯಾಗಿವೆ ಎಂದು ತೋರಿಸುತ್ತದೆ. ಹೀಗಾಗಿ, ಪ್ರಾಥಮಿಕವಾಗಿ ಅಧಿಕಾರಿಗಳ ಕಡೆಯಿಂದ ನಿರ್ಲಕ್ಷ್ಯ ಕಂಡುಬಂದಿದೆ. ವಿದ್ಯುತ್ ಮಾರ್ಗದ ನಿರ್ವಹಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿದ್ದಾರೆ, ನನ್ನ ಅಭಿಪ್ರಾಯದಲ್ಲಿ, ಸಮಂಜಸವಾದ ಸ್ಥಿತಿಯಲ್ಲಿ ವಿದ್ಯುತ್ ಮಾರ್ಗಗಳನ್ನು ನಿರ್ವಹಿಸದಿರುವುದು ಗಂಭೀರ ಕರ್ತವ್ಯಲೋಪವಾಗುತ್ತದೆ.ಇಂತಹ ಲೋಪಗಳು ಜನರ ಜೀವನಕ್ಕೆ ಮಾರಕವೆಂದು ಸಾಬೀತುಪಡಿಸುತ್ತದೆ. ಬದುಕುವ ಹಕ್ಕು ಎಂದರೆ ಜೀವನದ ಗುಣಮಟ್ಟ. ಸರಿಯಾದ ವಿದ್ಯುತ್ ಮಾರ್ಗವಿಲ್ಲದೆ ಯಾರ ಜೀವನವೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಇಂದು ವಿಚಾರಣೆ ವೇಳೆ ಲೋಕಾಯುಕ್ತ ನ್ಯಾಯಮೂರ್ಚಿಗಳು ಕಟುವಾಗಿ ಘಟನೆಯನ್ನು ಟೀಕಿಸಿದರು. 

ಬೆಸ್ಕಾಂ ಸಾರ್ವಜನಿಕರಿಂದ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಜನರು ಒಂದಲ್ಲ ಒಂದು ರೂಪದಲ್ಲಿ ಶುಲ್ಕವನ್ನು ಪಾವತಿಸುತ್ತಾರೆ. ಅನೇಕ ಬಾರಿ ನಾವು ಕಂಬಗಳಿಗೆ ಜೋಡಿಸಲಾದ ಅತ್ಯಂತ ಹಳೆಯ ಮತ್ತು ಶಿಥಿಲವಾದ ವಿದ್ಯುತ್ ತಂತಿಗಳನ್ನು ನೋಡುತ್ತೇವೆ. ವಿದ್ಯುತ್‌ ಮಾರ್ಗಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ಹೊಣೆಗಾರರಾಗಿರುವ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ವಿಸ್ತೃತ ತನಿಖೆ ನಡೆಸಿ ಅಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ನಿರ್ಭೀತಿಯಿಂದ ಓಡಾಡಲು ಅನುಕೂಲವಾಗುವಂತೆ ಎಲ್ಲಾ ವಿದ್ಯುತ್ ಮಾರ್ಗಗಳನ್ನು ಸುಸ್ಥಿತಿಯಲ್ಲಿಡುವುದು ವಿದ್ಯುತ್ ಸರಬರಾಜು ಕಂಪನಿಗಳ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com