ಈದ್ಗಾ ಬಳಿ ಮದ್ಯದಂಗಡಿ: ಪರವಾನಗಿ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು: ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುವ 'ಈದ್ಗಾ'ದಿಂದ 100 ಮೀಟರ್ಗಿಂತ ಕಡಿಮೆ ದೂರದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ಗೆ ನೀಡಲಾದ ಪರವಾನಗಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದ ಮದ್ಯದಂಗಡಿಯು ಧಾರ್ಮಿಕ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಮದ್ಯದಂಗಡಿ ಇರಬಾರದು ಎಂಬ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಪಿಐಎಲ್ನಲ್ಲಿ ಹೇಳಲಾಗಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು ಅರ್ಜಿಯು ಸಮಗ್ರ ಮಾಹಿತಿಯನ್ನು ಒದಗಿಸಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಇಂತಹ ಅರ್ಧ-ಬೇಯಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
'ಅರ್ಜಿಯಲ್ಲಿ ಪರವಾನಗಿ ಪಡೆದ ಆವರಣವು ಧಾರ್ಮಿಕ ಸ್ಥಳವಾದ 'ಈದ್ಗಾ'ದಿಂದ 100 ಮೀಟರ್ಗಿಂತಲೂ ಕಡಿಮೆ ದೂರದಲ್ಲಿದೆ ಎನ್ನುವುದಕ್ಕೆ ಇಲಾಖೆ ಅಥವಾ ಸಂಸ್ಥೆಯಿಂದ ನಡೆಸಿದ ಅಧಿಕೃತ ಸಮೀಕ್ಷೆಯ ಯಾವುದೇ ದಾಖಲೆಯನ್ನು ಸಂಪೂರ್ಣವಾಗಿ ಸಲ್ಲಿಸಿಲ್ಲ' ಎಂದು ಪೀಠ ಹೇಳಿದೆ.
ಪಿಐಎಲ್ ಸಲ್ಲಿಸಿರುವ ಯಾವುದೇ ಅರ್ಜಿದಾರರು ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸದಿರುವುದನ್ನು ಕಂಡು ನ್ಯಾಯಾಲಯವು ಆಶ್ಚರ್ಯಚಕಿತವಾಯಿತು.
'ಪಿಐಎಲ್ ಅನ್ನು ಪ್ರತಿನಿಧಿಸುವ ಯಾರೊಬ್ಬರೂ ಸಹ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಿಲ್ಲ. ಹೀಗಾಗಿ, ಅರ್ಜಿಯಲ್ಲೇ ಕುಂದುಕೊರತೆಗಳಿರುವುದು ಕಂಡುಬಂದಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, 'ಈ ಅಂಗಡಿ ಸ್ಥಳಾಂತರದ ಸಮಸ್ಯೆಯನ್ನು ಕೆಲವು ಸಕ್ಷಮ ಪ್ರಾಧಿಕಾರದ ಮಟ್ಟದಲ್ಲಿ ಬಗೆಹರಿಯಬೇಕಿದೆ ಮತ್ತು ಸಕ್ಷಮ ಪ್ರಾಧಿಕಾರವು ಇದಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಬೇಕಿದೆ" ಎಂದು ಹೇಳಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ