ಇಡೀ ದೇಶದಲ್ಲಿ ಜಾತಿ ಗಣತಿ ಜಾರಿ ಮಾಡಲು ಕಾಂಗ್ರೆಸ್ ಬದ್ಧವಾಗಿದೆ- ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇಡೀ ದೇಶದಲ್ಲಿ ಜಾತಿ ಗಣತಿ ಜಾರಿ ಮಾಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಸಮಾಜ ಸೇವಕ ದಿವಂಗತ ಲಿಂಗಪ್ಪ ಅವರಿಗೆ ಮರಣೋತ್ತರ ಕನಕಶ್ರೀ ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ, ಪ್ರತಿಯೊಂದು ಜಾತಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯುವುದಕ್ಕೆ ಮತ್ತು ಸಂವಿಧಾನದ ಆಶಯಗಳನ್ನು ಕಾರ್ಯಕ್ರಮಗಳ ಮೂಲಕ ಎಲ್ಲಾ ಸಮುದಾಯಗಳಿಗೂ ತಲುಪಿಸುವುದಕ್ಕಾಗಿ ನಾನೇ ಮೊದಲು ಜಾತಿಗಣತಿ ಆರಂಭಿಸಿದ್ದು. ಅಂಬೇಡ್ಕರ್ ಅವರು ಹೇಳಿದ್ದ ಎಚ್ಚರಿಕೆ ಮಾತುಗಳನ್ನು ಮರೆಯಬಾರದು. ಜಾತಿ ಗಣತಿಗೆ ಕಾಂಗ್ರೆಸ್ ಬದ್ದವಾಗಿದೆ ಎಂದರು.
ಕನಕದಾಸರು ಆಕಸ್ಮಿಕವಾಗಿ ಕುರುಬರಾಗಿ ಹುಟ್ಟಿದ ವಿಶ್ವಶ್ರೇಷ್ಠ ಮಾನವೀಯ ಚೈತನ್ಯರಾಗಿದ್ದರು. ದಾಸಪಂಥಕ್ಕೆ ಪ್ರವೇಶಿಸುವ ಮೊದಲು ಕನಕರು ಪಾಳೇಗಾರರಾಗಿದ್ದರು. ಆದಿಕೇಶವನ ಭಕ್ತರಾಗಿ ದಾಸರಾಗಿ, ದಾಸಶ್ರೇಷ್ಠರೂ ಆದರು. ಹಾಗಾಗಿ ಕನಕದಾಸರ ಕೀರ್ತನೆಗಳಲ್ಲಿ ಅತ್ಯುನ್ನತ ಮಾನವೀಯ ಮೌಲ್ಯಗಳಿವೆ. ನಾನು ಕುರುಬನಾಗಿ ಜನಿಸಿದ್ದೇನೆ. ನೀವುಗಳೂ ಕುರುಬ ಸಮುದಾಯದಲ್ಲಿ ಜನಿಸಿರಬಹುದು. ಹಾಗಂದ ಮಾತ್ರಕ್ಕೆ ಕುರುಬರಾಗೇ ಸಾಯಬೇಕಾ? ಅಪ್ಪಟ ಮನುಷ್ಯರಾಗಿ ಸಾಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕನಕದಾಸರನ್ನು ಶೂದ್ರ ಜಾತಿಯವ ಎನ್ನುವ ಕಾರಣಕ್ಕೆ ಕೃಷ್ಣನ ದರ್ಶನಕ್ಕೆ ಬಿಡಲಿಲ್ಲ. ಕುವೆಂಪು ಅವರು ಹೇಳಿದಂತೆ ನಾವೆಲ್ಲಾ ವಿಶ್ವ ಮಾನವರಾಗಲು ಸಾಧ್ಯವಾಗದಿದ್ದರೂ ವಿಶ್ವ ಮಾನವರಾಗುವ ಮಾರ್ಗದಲ್ಲಿ ಸಾಗಬೇಕು. ಆ ಮೂಲಕ ನಾವೆಲ್ಲಾ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಕನಕದಾಸರು ಒಂದು ಜಾತಿಗೆ ಸೇರಿದವರಲ್ಲ. ಕುರುಬ ಜಾತಿಯವರನ್ನು ಮೆಚ್ಚಿಸಲು ಕನಕ ಜಯಂತಿ ಮಾಡುತ್ತಿಲ್ಲ. ಕನಕದಾಸರು ವಿಶ್ವ ಮಾನವರಾಗಿದ್ದರು. ಅವರ ತತ್ವಾದರ್ಶಗಳನ್ನು ಪಾಲಿಸಿ ವಿಶ್ವ ಮಾನವರಾಗೋಣ ಎಂದು ಅವರು ಪ್ರತಿಪಾದಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ