ಬೆಂಗಳೂರು: ಬಹುನಿರೀಕ್ಷಿತ ಬೈಯಪ್ಪನಹಳ್ಳಿ- ಕೆಆರ್ ಪುರ ಮೆಟ್ರೋ ಮಾರ್ಗವನ್ನು ಕೂಡಲೇ ಉದ್ಘಾಟಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಆಯೋಜಿಸಿದ 'ಸ್ವಚ್ಛತಾ ಹೀ ಸೇವಾ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋವನ್ನು ಬಳಸುತ್ತಾರೆ, ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗ ಉದ್ಘಾಟನೆಯಾದರೆ ಈ ಸಂಖ್ಯೆಯಲ್ಲಿ ಸುಮಾರು ಶೇ. 50-60 ರಷ್ಟು ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ ಎಂದರು.
ಪ್ರಾಯೋಗಿಕ ಪರೀಕ್ಷೆ ಸೇರಿದಂತೆ ಸಿಎಂಆರ್ ಎಸ್ ನಿಂದ ಎಲ್ಲಾ ಒಪ್ಪಿಗೆ ದೂರೆತಿದ್ದರೂ ರಾಜ್ಯ ಸರ್ಕಾರ ಉದ್ಘಾಟನೆಗೆ ಇನ್ನೂ ವಿಳಂಬ ಮಾಡುತ್ತಿದೆ. ರಾಹುಲ್ ಗಾಂಧಿ ಅಥವಾ ಇತರ ಕಾಂಗ್ರೆಸ್ ನಾಯಕರು ಬಂದು ಉದ್ಘಾಟನೆ ಮಾಡಲಿ ಎಂಬ ಕಾರಣದಿಂದ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ಎಂದು ಅವರು ಆರೋಪಿಸಿದರು.
ಎಲ್ಲಾ ಸಿದ್ದಗೊಂಡಿದ್ದರೂ ಮೆಟ್ರೋ ರೈಲು ಸಂಚಾರ ಆರಂಭವಾಗದಿರುವುದರಿಂದ ಜನರು ನಿರಾಸೆಗೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರವು ರಾಜಕೀಯ ಕಾರಣಕ್ಕಾಗಿ ಅದನ್ನು ಮುಕ್ತಗೊಳಿಸುತ್ತಿಲ್ಲ. ಕೂಡಲೇ ಈ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ಬೆಂಗಳೂರು ಜನರು ತೊಂದರೆ ಅನುಭವಿಸಲು ಬಿಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
Advertisement