ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರು ಆರೋಪಿಗಳ ಬಂಧನ

ಬೆಳಗಾವಿಯ ಗೋಕಾಕ ನಗರದಲ್ಲಿ ವಿವಾಹಿತ ಮಹಿಳೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೆಳಗಾವಿಯ ಗೋಕಾಕ ನಗರದಲ್ಲಿ ವಿವಾಹಿತ ಮಹಿಳೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಬಂಧಿತರನ್ನು ಗೋಕಾಕ ತಾಲೂಕಿನ ನಿವಾಸಿಗಳಾದ ರಮೇಶ ಉದ್ದಪ್ಪ ಖಿಲಾರಿ, ದುರ್ಗಪ್ಪ ಸೋಮ್ಲಿಂಗ್ ವಡ್ಡರ, ಯಲ್ಲಪ್ಪ ಸಿದ್ದಪ್ಪ ಗಿಸ್ನಿಂಗವ್ವಗೋಳ, ಕೃಷ್ಣ ಪ್ರಕಾಶ ಪೂಜೇರಿ, ರಾಮಸಿದ್ದ ಗುರುಸಿದ್ದಪ್ಪ ತಾಪ್ಸಿ ಎಂದು ಗುರುತಿಸಲಾಗಿದೆ.

ಮತ್ತೋರ್ವ ಆರೋಪಿ ಬಸವರಾಜ್ ವಸಂತ್ ಖಿಲಾರಿ ತಲೆಮರೆಸಿಕೊಂಡಿದ್ದು, ಈತನಿಗಾಗಿ ಹುಡುಕಾಟ ಮುಂದುವರೆದಿದೆ.

ಸೆಪ್ಟೆಂಬರ್‌ 5ನೇ ತಾರೀಖು (ಶಿಕ್ಷಕರ ದಿನಾಚರಣೆಯ ದಿನ) ಸಂತ್ರಸ್ತ ಮಹಿಳೆ ತಮ್ಮ ಹಳ್ಳಿಯಿಂದ ಗೋಕಾಕ ನಗರಕ್ಕೆ ಬಂದಿದ್ದರು. ಅವರೊಂದಿಗೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದರು. ಇಬ್ಬರೂ ಮಾರುಕಟ್ಟೆಗೆ ಹೋಗಲು ಬೆಳಿಗ್ಗೆಯೇ ನಗರಕ್ಕೆ ಬಂದಿದ್ದರು. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಬಸವರಾಜ ಖಿಲಾರಿ ಈ ಇಬ್ಬರ ಪರಿಚಯ ಹೊಂದಿದ್ದ. ತಮ್ಮ ಮನೆಗೆ ಬಂದು ಚಹಾ ಕುಡಿದು ಹೋಗಬೇಕು ಎಂದು ಪುಸಲಾಯಿಸಿ ಮಹಿಳೆ ಹಾಗೂ ಪುರುಷನನ್ನು ಕರೆದುಕೊಂಡು ಹೋದ. ಬಳಿಕ ನಗರದ ಹೃದಯಭಾಗದಲ್ಲಿರುವ ತನ್ನ ಮನೆಯಲ್ಲೇ ಇಬ್ಬರನ್ನೂ ಕೂಡಿಹಾಕಿದ.

ನಂತರ ಮನೆಗೆ ಬಂದ ಐವರು ಆರೋಪಿಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅವರಲ್ಲಿದ್ದ ರೂ.2,000 ಹಣ, ಚಿನ್ನಾಭರಣ ಕಸಿದುಕೊಂಡರು. ಎಟಿಎಂ ಬಳಸಿ ಹಣ ಡ್ರಾ ಮಾಡಿಸಿಕೊಂಡರು. ಕೊನೆಗೆ ಸಂತ್ರಸ್ತೆ ಹಾಗೂ ಅವರೊಂದಿಗೆ ಬಂದಿದ್ದ ಪುರುಷನನ್ನು ಜೊತೆಯಾಗಿ ನಿಲ್ಲಿಸಿ ‘ಖಾಸಗಿತನ’ದ ಫೋಟೊ ತೆಗೆದರು. ಅತ್ಯಾಚಾರ ಸಂಗತಿಯನ್ನು ಪೊಲೀಸರಿಗೆ ತಿಳಿಸಿದರೆ ಮರ್ಯಾದೆ ಹಾಳು ಮಾಡುವುದಾಗಿ ಬೆದರಿಸಿದ್ದಾರೆ.

ಸೆ.14ರಂದು ಮಹಿಳೆಯೊಬ್ಬರನ್ನು ಬೆದರಿಸಿ ಹಣ, ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರ ಹಿನ್ನೆಲೆ ಜಾಲಾಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಇವರು ಗೋಕಾಕ ಭಾಗದಲ್ಲಿ ಕುಖ್ಯಾತ ‘ಖಿಲಾರಿ ಗ್ಯಾಂಗ್‌’ ಹಾಗೂ ‘ಎಸ್‌.ಪಿ. ಸರ್ಕಾರ್‌ ಗ್ಯಾಂಗ್‌’ ಎಂಬ ಎರಡು ದರೋಡೆಕೋರರ ಗುಂಪಿನ ಸದಸ್ಯರೇ ಆಗಿದ್ದರು. ಪ್ರತಿಯೊಬ್ಬರ ಮೇಲೂ ಬೇರೆಬೇರೆ ಠಾಣೆಗಳಲ್ಲಿ 6 ರಿಂದ 8 ಪ್ರಕರಣಗಳು ದಾಖಲಾಗಿವೆ.

ಆರೋಪಿಗಳ ವಿಚಾರಣೆ ನಡೆಸಿದಾಗ ಈ ಗ್ಯಾಂಗಿನ ಐವರು ಸೇರಿಕೊಂಡು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ತಿಳಿದುಬಂದಿದೆ.

ಭಯದಿಂದ ಮಹಿಳೆ ದೂರು ನೀಡಿರಲಿಲ್ಲ. ಅವರಿಗೆ ಮನವರಿಕೆ ಮಾಡಿದ ಪೊಲೀಸರು ಅ.1ರಂದು ಸಾಮೂಹಿಕ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಮಹಿಳೆ ಆರೋಪಿಗಳನ್ನು ಗುರುತಿಸಿದ್ದಾರೆ.

ಈ ಪ್ರಕಣದ ಪ್ರಮುಖ ಆರೋಪಿ ರಮೇಶ ಉದ್ದಪ್ಪ ಖಿಲಾರಿಯನ್ನು ಬಂಧಿಸಲು ಭಾನುವಾರ ರಾತ್ರಿ 2ರ ಸುಮಾರಿಗೆ ಪೊಲೀಸರು ದಾಳಿ ಮಾಡಿದರು. ಇದನ್ನರಿತ ಆರೋಪಿ ಬೈಕಿನಲ್ಲಿ ಪರಾರಿಯಾಗುವಾಗ ಅಪಘಾತಕ್ಕೀಡಾಗಿ ಗಾಯಗೊಂಡ. ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಧಾರಿಸಿಕೊಂಡ ಬಳಿಕ ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com