ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ನಡುವೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶನಿವಾರ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (K-RIDE) ಪೂರ್ಣಾವಧಿಯ ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ನೇಮಕ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ ಎಂದು ಟೀಕಿಸಿದರು.
'ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸುವ ಗಂಭೀರತೆ ಮತ್ತು ಉದ್ದೇಶದ ಕೊರತೆಯು ಎದ್ದು ಕಾಣಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಕೆ-ರೈಡ್ನಲ್ಲಿ ಪೂರ್ಣ ಸಮಯದ ಎಂಡಿ ನೇಮಕ ಪ್ರಕ್ರಿಯೆಯನ್ನು ವೇಗಗೊಳಿಸಲು ವಿಫಲವಾಗಿದೆ' ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
'ಬೆಂಗಳೂರು ಉಪನಗರ ರೈಲು ಯೋಜನೆಗೆ ಸಂಬಂಧಿಸಿದ ಕೆ-ರೈಡ್ ಪೂರ್ಣಾವಧಿಯ ಎಂಡಿಯನ್ನು ಹೊಂದಿಲ್ಲ. ನೇಮಕ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದರೂ, ರೈಲ್ವೆ ಸಚಿವರ ಮಧ್ಯಸ್ಥಿಕೆಯಲ್ಲಿ ಮೂಲಭೂತ ಅರ್ಹತಾ ಮಾನದಂಡಗಳನ್ನು ಅನುಸರಿಸಲು ವಿಫಲವಾಗಿದೆ ಎಂಬುದು ಬಹಿರಂಗವಾಯಿತು'. ಸರ್ಕಾರವು ಇದನ್ನು ಆದ್ಯತೆಯನ್ನಾಗಿ ಪರಿಗಣಿಸಬೇಕು ಮತ್ತು ರೈಲ್ವೆ ಮಂಡಳಿಯು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮರು-ಜಾಹೀರಾತು ನೀಡಬೇಕು ಎಂದು ಹೇಳಿದ್ದಾರೆ.
'ಇದು ಬೆಂಗಳೂರು ಅರ್ಬನ್ ಮೊಬಿಲಿಟಿಯನ್ನು ಸುಧಾರಿಸುವ ಬದ್ಧತೆಯ ಗಂಭೀರ ಕೊರತೆಯನ್ನು ತೋರಿಸುತ್ತದೆ'. ಬೆಂಗಳೂರು ಉಪನಗರ ರೈಲು ಯೋಜನೆ ನಿರ್ಣಾಯಕವಾಗಿದೆ ಮತ್ತು ನಗರದಲ್ಲಿ ಸಂಚಾರದ ಸವಾಲುಗಳನ್ನು ಸರಾಗಗೊಳಿಸಬಹುದು ಮತ್ತು ಸೂಕ್ತವಾದ ಪೂರ್ಣ ಸಮಯದ ಅಧಿಕಾರಿಯೊಂದಿಗೆ ಮಾತ್ರ ಇದನ್ನು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
'ಈ ಸಮಯದಲ್ಲಿ, ಬೆಂಗಳೂರಿನ ಪ್ರಮುಖ ಸಾರ್ವಜನಿಕ ಮೊಬಿಲಿಟಿ ಮೂಲಸೌಕರ್ಯ ಯೋಜನೆಗಳಾದ ಬಿಎಂಆರ್ಸಿಎಲ್ ಮತ್ತು K-RIDE ಎರಡೂ ಪೂರ್ಣ ಸಮಯದ ಎಂಡಿಗಳನ್ನು ಹೊಂದಿಲ್ಲ. ಆದರೆ, ಸರ್ಕಾರವು 190 ಕಿಮೀ ಸುರಂಗ ಮಾರ್ಗವನ್ನು ನಿರ್ಮಿಸಲು ಯೋಜಿಸುತ್ತಿದೆ' ಎಂದು ತೇಜಸ್ವಿ ದೂರಿದ್ದಾರೆ.
ಈಮಧ್ಯೆ, ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು 190 ಕಿಮೀ ಉದ್ದದ ಸುರಂಗ ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಿದೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, 45 ದಿನಗಳಲ್ಲಿ ಸುರಂಗ ಮಾರ್ಗಕ್ಕೆ ಸಾರ್ವಜನಿಕ ಟೆಂಡರ್ಗಳನ್ನು ಸರ್ಕಾರ ಆಹ್ವಾನಿಸಲಿದೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದರು.
Advertisement