ಅತ್ತಿಬೆಲೆ ಪಟಾಕಿ ಗೋದಾಮು ದುರಂತ; ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದ ಸರ್ಕಾರ

ಆನೇಕಲ್ ಪಟ್ಟಣದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಮಂದಿ ಸಾವಿಗೀಡಾದ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಒಪ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಆದೇಶಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಆನೇಕಲ್ ಪಟ್ಟಣದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಮಂದಿ ಸಾವಿಗೀಡಾದ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಒಪ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಆದೇಶಿಸಿದ್ದಾರೆ.

ಇದೀಗ ಪೊಲೀಸರ ವಶದಲ್ಲಿರುವ ಅಂಗಡಿ ಮಾಲೀಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮುಖ್ಯಮಂತ್ರಿ ಹೇಳಿದರು.
'ನಿಖರವಾಗಿ ಏನಾಯಿತು ಎಂದು ನಮಗೆ ತಿಳಿದಿಲ್ಲ. ಆದರೆ, (ಗೋದಾಮಿನಲ್ಲಿ) ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದು ತಿಳಿದುಬಂದಿದೆ. ಇತ್ತೀಚೆಗೆ ಪರವಾನಗಿಯನ್ನು ನವೀಕರಿಸಲಾಗಿದೆ. ಅಂಗಡಿಯಲ್ಲಿ ಯಾವುದೇ ಅಗ್ನಿಶಾಮಕ ಸಾಧನ ಕಂಡುಬಂದಿಲ್ಲ. ಇದು ಅಂಗಡಿ ಮಾಲೀಕನ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಹಾಗಾಗಿ ಘಟನೆಯ ತನಿಖೆಯನ್ನು ಸಿಐಡಿಗೆ ನೀಡುತ್ತಿದ್ದೇನೆ' ಎಂದು ಸಿದ್ದರಾಮಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮೃತರ ಪೈಕಿ ಇನ್ನೂ ಕೆಲವು ಶವಗಳ ಗುರುತು ಪತ್ತೆಯಾಗಿಲ್ಲ. 'ಘಟನೆಯಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಮೃತರೆಲ್ಲರೂ ತಮಿಳುನಾಡಿನವರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಅವರು ತಮ್ಮ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಇಲ್ಲಿ ಕೆಲಸ ಮಾಡುತ್ತಿದ್ದರು' ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಗಂಭೀರವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

'ಎರಡ್ಮೂರು ದಿನಗಳಲ್ಲಿ ನಾವು ತೆಗೆದುಕೊಳ್ಳಬೇಕಾದ ಕ್ರಮದ ಯೋಜನೆಯನ್ನು ರೂಪಿಸಲಿದ್ದೇವೆ... ನಾವು ಈಗಾಗಲೇ ಸತ್ತವರಿಗೆ 5 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದೇವೆ ಮತ್ತು ಆಸ್ಪತ್ರೆಯ ವೆಚ್ಚವನ್ನು ನೋಡಿಕೊಳ್ಳಲಾಗುವುದು' ಎಂದು ಶಿವಕುಮಾರ್ ಹೇಳಿದರು.
ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಗೋದಾಮಿನಲ್ಲಿದ್ದ ಕಾರ್ಮಿಕರು ಪಟಾಕಿಗಳನ್ನು ವಾಹನದಿಂದ ಇಳಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳು ಮಾಡಿದ ಹಾನಿ ಅಂದಾಜಿನ ಪ್ರಕಾರ, ಏಳು ದ್ವಿಚಕ್ರ ವಾಹನಗಳು, ಒಂದು ಕಂಟೈನರ್ ಲಾರಿ ಮತ್ತು ಇತರ ಮೂರು ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com