ಬೆಳಗಾವಿ: ಪುತ್ರನ ಕೊರಳಲ್ಲಿ ಹುಲಿ ಪೆಂಡೆಂಟ್ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಯದಲ್ಲಿ ಯಾರೋ ಉಡುಗೊರೆಯಾಗಿ ನೀಡಿದ್ದರು ಎಂದು ಹಾಕಿಕೊಂಡಿದ್ದ. ಮೃಣಾಲ್ ಹಾಕಿದ್ದ ಪೆಂಡೆಂಟ್ ಪ್ಲಾಸ್ಟಿಕ್ದ್ದು. ಒರಿಜಿನಲ್ ಪೆಂಡೆಂಟ್ ಅಲ್ಲ ಎಂದು ಹೇಳಿದ್ದಾರೆ.
ನಾವು ಸಸ್ಯಾಹಾರಿ. ಹುಲಿ, ಜಿಂಕೆ, ಕೋಳಿ, ಇನ್ಯಾವುದೇ ಬಲಿಯನ್ನು ಇಷ್ಟಪಡುವುದಿಲ್ಲ. ಸದ್ಯ ನಮ್ಮ ಸಂಬಂಧಿಕರು ಬಂದಿದ್ದಾರೆ ಅವರನ್ನು ಬೀಳ್ಕೊಟ್ಟು ಬರ್ತಿನಿ. ನಂತರ ಅಧಿಕಾರಿಗಳು ಕೇಳುವ ಎಲ್ಲದಕ್ಕೂ ಉತ್ತರ ಕೊಡುತ್ತೇನೆಂದು ತಿಳಿಸಿದರು.
ಈ ನಡುವೆ ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಅರಣ್ಯಾಧಿಕಾರಿಗಳು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಡಿಸಿಎಫ್ ಶಂಕರ್ ಕಲ್ಲೋಳಕರ್ ನೇತೃತ್ವದಲ್ಲಿ ಮೂರು ಜನ ಎಸಿಎಫ್, ಆರ್ಎಫ್ಒ ಮೂರು ಜನ, ಹದಿನೈದು ಜನ ಸಿಬ್ಬಂದಿ, ಓರ್ವ ವೆಟನರಿ ವೈದ್ಯ ಸೇರಿದಂತೆ 24 ಜನರ ತಂಡ ಪರಿಶೀಲನೆ ನಡೆಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಶಂಕರ್ ಕಲ್ಲೋಳಕರ್ ಅವರು, ಪೆಂಡೆಂಟ್ ವಶಕ್ಕೆ ಪಡೆದು ಎಫ್ಎಸ್ಎಲ್ಗೆ ಕಳುಹಿಸುತ್ತೇವೆ. ಬೆಂಗಳೂರು ಇಲ್ಲವೇ ಹೈದರಾಬಾದ್ ಗೆ ಕಳುಹಿಸುತ್ತೇವೆ. ಒರಿಜಿನಲ್ ಅಥವಾ ನಕಲಿನಾ ಎಂದು ತಿಳಿದ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ. ಪೆಂಡೆಂಟ್ ಸೈಜ್ ಎಷ್ಟಿದೆ ಎನ್ನುವುದನ್ನು ನೋಡಿದ್ದೇವೆ. ಮೃಣಾಲ್ ಅವರ ಕಡೆಯಿಂದ ಹೇಳಿಕೆಯನ್ನ ಪಡೆಯುತ್ತೇವೆ. ಕಾನೂನಿನಡಿಯಲ್ಲಿ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದ್ದಾರೆ.
Advertisement