ರಾಮನಗರ: ರಾಮದೇವರ ಬೆಟ್ಟದಿಂದ ಜಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ!
ಬೆಂಗಳೂರು: ಡೀಮ್ಡ್ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಪದವಿ ವಿದ್ಯಾರ್ಥಿ (20) ಬುಧವಾರ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮನೋವಿಜ್ಞಾನದಲ್ಲಿ ಬಿಎಸ್ಸಿ ಓದುತ್ತಿದ್ದ ವಿದ್ಯಾರ್ಥಿಯು ಮರದ ಮೇಲೆ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ.
ಘಟನೆಯನ್ನು ಕಂಡ ರಾಮದೇವರ ಬೆಟ್ಟದ ವಾಚರ್ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಮರದಿಂದ ಬೀಳುವ ಮುನ್ನ ಇಬ್ಬರು ಸ್ಥಳೀಯರು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿನಿಯ ತಂದೆ ಟಿಎನ್ಐಇ ಜೊತೆಗೆ ಮಾತನಾಡಿ, ತಮ್ಮ ಮಗಳಿಗೆ ಆತಂಕದ ಸಮಸ್ಯೆಗಳಿವೆ ಮತ್ತು ಕಳೆದ ವಾರದಿಂದ ಆಕೆ ತೀವ್ರ ಒತ್ತಡದಲ್ಲಿದ್ದಳು ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯು ಆರ್ಆರ್ ನಗರದ ನಿವಾಸಿ. ಬುಧವಾರ ಮಧ್ಯಾಹ್ನ ರಾಮದೇವರ ಬೆಟ್ಟಕ್ಕೆ ಸ್ಕೂಟರ್ನಲ್ಲಿ ಒಬ್ಬಳೇ ಹೋಗಿದ್ದಾಳೆ. ಸಂಜೆ 5 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
'ಸಂತ್ರಸ್ತೆ ಸ್ಕೂಟರ್ ಅನ್ನು ದೂರದಲ್ಲಿ ನಿಲ್ಲಿಸಿದ್ದರು. ಕಾಲೇಜು ಐಡಿ ಮತ್ತು ಇತರ ದಾಖಲೆಗಳನ್ನು ಹೊಂದಿದ್ದ ತನ್ನ ಕಾಲೇಜು ಬ್ಯಾಗ್ ಅನ್ನು ಕೂಡ ಅಲ್ಲೇ ಬಿಟ್ಟಿದ್ದರು. ಸಂಜೆ ವಿದ್ಯಾರ್ಥಿನಿಯ ತಂದೆಯು ಸ್ಥಳಕ್ಕೆ ಬಂದರು. ಆಕೆಯನ್ನು ಮೊದಲು ರಾಮನಗರದ ಸರ್ಕಾರಿ ಆಸ್ಪತ್ರೆಗೆ ಮತ್ತು ಅಲ್ಲಿಂದ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಇದಕ್ಕೆ ಕಾರಣವೇನು ಎಂಬುದು ನಮಗೆ ತಿಳಿದಿಲ್ಲ’ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆಕೆಯ ತಲೆಬುರುಡೆಯ ಮೂಳೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ ಎಂದು ವಿದ್ಯಾರ್ಥಿನಿಯ ತಂದೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
'ನನ್ನ ಮಗಳು ಮಾತನಾಡಬಲ್ಲಳು. ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿ ಇರುತ್ತಾಳೆ. ಸುಮಾರು ಐದು ತಿಂಗಳ ಹಿಂದೆ ಶೋಲೆ ಚಿತ್ರದ ಶೂಟಿಂಗ್ ಸ್ಪಾಟ್ ನೋಡಲು ರಾಮದೇವರ ಬೆಟ್ಟಕ್ಕೆ ಹೋಗಿದ್ದೆವು. ಆಕೆ ನಮ್ಮ ಕರೆಗಳಿಗೆ ಉತ್ತರಿಸದಿದ್ದಾಗ, ಆಕೆಯ ಫೋನ್ ರಾಮನಗರದಲ್ಲಿ ಪತ್ತೆಯಾಯಿತು. ನಾನು ಅಲ್ಲಿಗೆ ಹೋದಾಗ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನು ನೋಡಿದೆ. ಬುಧವಾರ ಬೆಳಗ್ಗೆ ಪ್ರಾಜೆಕ್ಟ್ಗಾಗಿ ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದ ಆಕೆ ಅಲ್ಲಿಂದ ರಾಮದೇವರ ಬೆಟ್ಟಕ್ಕೆ ಹೋಗಿದ್ದಳು’ ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ