ರಸ್ತೆಯಲ್ಲಿ ಅಡ್ಡಾ-ದಿಡ್ಡಿ ಪಾರ್ಕಿಂಗ್: ಬಿಬಿಎಂಪಿ ಕಸದ ಲಾರಿಗೆ ನವವಿವಾಹಿತ ಬಲಿ
ಬೆಂಗಳೂರು: ರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿ ಅಡ್ಡಾ-ದಿಡ್ಡಿ ಪಾರ್ಕಿಂಗ್ ಮಾಡಿದ್ದ ಕಾರಣ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ನಿಂತಿದ್ದ ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿಯಾಗಿದ್ದು, ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ತಡರಾತ್ರಿ 12 ಗಂಟೆ ಸುಮಾರಿಗೆ ಜಯನಗರ ಮೆಟ್ರೋ ನಿಲ್ದಾಣದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಯಶವಂತ್ (26) ಮೃತ ದುರ್ದೈವಿ. ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಲಾರಿ ಪಾರ್ಕಿಂಗ್ ಮಾಡಲಾಗಿತ್ತು.
ಈ ವೇಳೆ ಬನಶಂಕರಿ ಮಾರ್ಗದಿಂದ ಸೌತ್ ಎಂಡ್ ಸರ್ಕಲ್ ಕಡೆ ಹೊರಟಿದ್ದ ಮೃತ ಯುವಕ, ಜಯನಗರ ಮೆಟ್ರೋ ನಿಲ್ದಾಣದ ಸ್ಥಳದಲ್ಲಿ ವೇಗವಾಗಿ ಬಂದಿದ್ದು ನಿಯಂತ್ರಣ ಸಿಗದೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ಯುವಕ ಲಾರಿ ಹಿಂಬದಿಯಡಿ ಸಿಲುಕಿಕೊಂಡಿದ್ದಾನೆ.
ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಜಯನಗರ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಸುಮಾರು 3-4 ಗಂಟೆಗಳ ಕಾಲ ಶವ ಹೊರತೆಗೆಯಲು ಪೊಲೀಸರಿಂದ ಹರಸಾಹಸಪಟ್ಟಿದ್ದಾರೆ.
ಮೃತ ಯುವಕ ಯಲಚೇನಹಳ್ಳಿ ನಿವಾಸಿಯಾಗಿದ್ದು ಇತ್ತೀಚೆಗಷ್ಟೇ ಮದುವೆಯಾಗಿದ್ದ. ಸತತ ಪ್ರಯತ್ನದ ಬಳಿಕ ಬೆಳಗ್ಗಿನ ಜಾವ ಮೂರು ಗಂಟೆಗೆ ಪೊಲೀಸರು ಮೃತದೇಹ ಹೊರತೆಗೆದರು. ಮೃತದೇಹ ಹೊರತೆಗೆಯುತ್ತಲೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.