ಬೆಂಗಳೂರು: ಐಎಂಎ ಪೊಂಜಿ ಹಗರಣದಂತೆ ಆಲೂರು ಬಿಡಿಎ ಹಂತ-2 ವಸತಿ ಯೋಜನೆಯ ಕೆಲವು ನಿವಾಸಿಗಳಿಗೂ ವಂಚನೆಯಾಗಿದ್ದು, 5 ರಿಂದ 6 ಕೋಟಿ ರೂಪಾಯಿಗಳವರೆಗೆ ಹಣ ಕಳೆದುಕೊಂಡಿದ್ದಾರೆ.
ಈ ಘಟನೆ ನಿವಾಸಿಗಳ ನಡುವೆ ದ್ವೇಷಕ್ಕೂ ಕಾರಣವಾಗಿದೆ. ಏಕೆಂದರೆ ಅವರಲ್ಲಿ ಕೆಲವರು ತಮ್ಮ ನೆರೆಹೊರೆಯವರ ಸಲಹೆಯಂತೆ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಇಲ್ಲಿನ ನಿವಾಸಿ ಕಿರಣ್ ಕುಮಾರ್ ಮಿಸ್ರೋ ಮತ್ತು ಅವರ ಕುಟುಂಬದ ಹಲವರು ಹೂಡಿಕೆ ಮಾಡಿ ಬೀದಿಗೆ ಬಿದ್ದಿದ್ದು, ಇದೀಗ ಅವರು ಸಿಸಿಬಿಗೆ ದೂರು ನೀಡಿದ್ದಾರೆ. ಸೋಮವಾರ ರಾಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಿದ್ದಾರೆ.
ಹಗರಣದ ಕಿಂಗ್ಪಿನ್ಗಳಾದ ಜೋಜಿಪಾಲ್ ಮತ್ತು ಅಶೋಕ್ ವಿಟಲ್ವಾಡಿ - 2019 ರಲ್ಲಿ ಸ್ಥಾಪಿಸಲಾದ ಸ್ಯಾನ್ಜೋಸ್ ವೆಲ್ತ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಜನರನ್ನು ವಂಚಿಸಿದ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಲಾಗಿತ್ತು. ನಂತರ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.
ಬಂಡವಾಳ ಹೂಡಲು ಪ್ರೋತ್ಸಾಹಿಸಿದ ಬಿಡಿಎ ಕಾಂಪ್ಲೆಕ್ಸ್ನಲ್ಲಿ ವಾಸವಾಗಿರುವವರ ಅನೇಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧ್ವಂಸಗೊಂಡಿರುವ ಹಲವು ನಿವಾಸಿಗಳು ಒತ್ತಾಯಿಸಿದ್ದಾರೆ. ಕಂಪನಿಯು ಠೇವಣಿ ಮಾಡಿದ ದಿನಾಂಕದಿಂದ ಪ್ರತಿ 35 ದಿನಗಳಿಗೊಮ್ಮೆ ಶೇ.10 ರಂತೆ ಬಡ್ಡಿದರ ಪಾವತಿಸುವುದಾಗಿ ಭರವಸೆ ನೀಡಿತ್ತು. 3 ಬಿಹೆಚ್ ಕೆ ಮತ್ತು 2 ಬಿಹೆಚ್ ಕೆ ನಿವಾಸಿಗಳಿಗೆ ಕೆಲವು ತಿಂಗಳು ಪಾವತಿ ಮಾಡಿದ ನಂತರ ಸ್ಥಗಿತಗೊಳಿಸಲಾಯಿತು ಎಂದು ನಿವಾಸಿಯೊಬ್ಬರು ಹೇಳಿದರು.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮಿಶ್ರೋ, 2021 ಮಾರ್ಚ್ 28 ರಿಂದ 2022 ರ ಜನವರಿ 18 ರವರೆಗೆ ತಮ್ಮ ಕುಟುಂಬದ ಎಂಟು ಸದಸ್ಯರು ಸುಮಾರು 55 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿರುವುದಾಗಿ ತಿಳಿಸಿದರು. ಅವರ ದೂರಿನಲ್ಲಿ ವಸಂತಕುಮಾರ್ ಮತ್ತು ನಾಗ ಜ್ಯೋತಿ, ಆಕೆಯ ಸೋದರ ಮಾವ ರಾಘವೇಂದ್ರ ಹೆಬ್ಬಾಳ್ ಮತ್ತು ಅವರ ಹಳೆಯ ಗೆಳೆಯರಾದ ವಿಟಲವಾಡಿ ಮತ್ತು ಜೋಜಿಪಾಲ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಲಾದ ನಾಲ್ವರು ಕೂಡಾ ಹಣ ಕಳೆದುಕೊಂಡಿರುವುದಾಗಿ ಕೆಲವರು ಹೇಳಿದ್ದಾರೆ. ಅವರು ಉತ್ತಮ ಆದಾಯ ಗಳಿಸುತ್ತಿದ್ದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರಿಂದ ನಾವು ಕೂಡಾ ಹೂಡಿಕೆ ಮಾಡಿದ್ದೇವು ಎಂದು ಸಂತ್ರಸ್ತರೊಬ್ಬರು ಹೇಳುತ್ತಾರೆ. ವಸಂತ್ ಕುಮಾರ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದು, ಮಿಸ್ರೋ ಅವರೊಂದಿಗೆ ವೈಯಕ್ತಿಕ ದ್ವೇಷವಿದ್ದು, ತನ್ನ ವರ್ಚಸ್ಸು ಕುಂದಿಸಲು ಅವರು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.
Advertisement