ಅರಣ್ಯ ಭೂಮಿ ಒತ್ತುವರಿ: ರಾಜಕೀಯ ನಾಯಕರು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎನ್‌ಜಿಟಿ ಸಮಿತಿ ಮುಂದು!

ಕೊಡಗಿನಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಮಾಜಿ ಸ್ಪೀಕರ್, ಶಾಸಕ, ಎಂಎಲ್'ಸಿ, ಮಾಜಿ ಅರಣ್ಯಾಧಿಕಾರಿ ಹಾಗೂ ಕೊಡಗು ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಎನ್‌ಜಿಟಿ ಸಮಿತಿ ಮುದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊಡಗಿನಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಮಾಜಿ ಸ್ಪೀಕರ್, ಶಾಸಕ, ಎಂಎಲ್'ಸಿ, ಮಾಜಿ ಅರಣ್ಯಾಧಿಕಾರಿ ಹಾಗೂ ಕೊಡಗು ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಎನ್‌ಜಿಟಿ ಸಮಿತಿ ಮುದಾಗಿದೆ.

ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕ್ರಮ ಕೈಗೊಳ್ಳುವಂತೆ ಸಮಿತಿಯೊಂದನ್ನು ರಚನೆ ಮಾಡಿತ್ತು. ಪ್ರಕರಣ ಸಂಬಂಧ ವರದಿ ಸಲ್ಲಿಸಲು ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು.

ಇದರಂತೆ ಸೋಮವಾರ ಸಮಿತಿಯು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿತು. ಈ ವೇಳೆ ಅಕ್ರಮವಾಗಿ ಮರಗಳ ಕಡಿದಿರುವುದು, ಪರಿಸರ ಸೂಕ್ಷ್ಮ ವಲಯಗಳಲ್ಲಿ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣ, ಸುಪ್ರೀಂಕೋರ್ಟ್ ಆದೇಶಗಳನ್ನು ಅಧಿಕಾರಿಗಳು ಅನುಸರಿಸದಿರುವುದನ್ನು ಸಮಿತಿ ಗಮನಿಸಿತು.

ಸಭೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು ಎಂದು ಸಮಿತಿಯ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಕಡತವನ್ನು ಅಧ್ಯಯನ ಮಾಡಲು ಮತ್ತು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಪ್ರಕರಣದ ವಿವರಗಳನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಸಾಮಾನ್ಯ) ಕಳುಹಿಸಲಾಗಿದೆ. ಸಮಿತಿಯು ಕಾನೂನು ಅಧಿಕಾರವನ್ನು ಹೊಂದಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ಮೂಲಕ ಮಡಿಕೇರಿಯಿಂದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಅಕ್ರಮವಾಗಿ ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿತ್ತು. ನವೆಂಬರ್ 3, 2006 ರಂದು ಕೊಡಗು ಮತ್ತು ಪಶ್ಚಿಮದ ಇತರ ಜಿಲ್ಲೆಗಳಲ್ಲಿ ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ 3388/2009 (ಮೂಲ ಅರ್ಜಿ ಸಂಖ್ಯೆ 167/2016 ಮತ್ತು MA 1379/2017) ಮೇಲೆ ಎನ್'ಜಿಟಿ ಡಿಸೆಂಬರ್ 13, 2022 ರಂದು ಆದೇಶ ಹೊರಡಿಸಿತ್ತು. ಪ್ರಕರಣವನ್ನು ಈ ಹಿಂದೆ ಕರ್ನಾಟಕ ಹೈಕೋರ್ಟ್ ಕೂಡ ವಿಚಾರಣೆ ನಡೆಸಿತ್ತು.

ಪ್ರಕರಣ ಸಂಬಂಧ ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ, ಶಾಸಕ ಅಪ್ಪಚ್ಚು ರಂಜನ್, ಮಾಜಿ ಎಂಎಲ್ ಸಿ ಎಸ್ ಜಿ ಮೇದಪ್ಪ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ ಎ ಸುದರ್ಶನ್ ಮತ್ತು ಮಾಜಿ ಡಿಸಿ ಬಲದೇವ್ ಕೃಷ್ಣ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ಈಗಾಗಲೇ ಸಾಕಷ್ಟು ತಡವಾಗಿದೆ. ವನ್ಯಜೀವಿ ಕಾನೂನಿನ ಅನ್ವಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಕರಣದ ಅರ್ಜಿದಾರರಾದ ಕಾವೇರಿ ಸೇನೆ ಅಧ್ಯಕ್ಷ ಕೆ.ಎ.ರವಿ ಚೆಂಗಪ್ಪ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com