ಕೊಡಗಿನಲ್ಲಿ ಅಕ್ರಮ ಮರ ಕಡಿತ: ಎನ್ಜಿಟಿ ಆದೇಶ ನಿರ್ಲಕ್ಷ್ಯ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ!
ಕೊಡಗಿನಲ್ಲಿ ‘ಕಾನೂನುಬಾಹಿರವಾಗಿ’ ಮರಗಳನ್ನು ಕಡಿದ ತಪ್ಪಿತಸ್ಥ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ 17 ವರ್ಷಗಳಾದರೂ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ.
Published: 30th March 2023 01:45 PM | Last Updated: 30th March 2023 05:38 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೊಡಗಿನಲ್ಲಿ ‘ಕಾನೂನುಬಾಹಿರವಾಗಿ’ ಮರಗಳನ್ನು ಕಡಿದ ತಪ್ಪಿತಸ್ಥ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ 17 ವರ್ಷಗಳಾದರೂ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ.
ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಈ ವಿಷಯವನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಜಂಟಿ ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆದರೂ, ಅಧಿಕಾರಿಗಳ ವಿರುದ್ಧ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ.
ಕೊಡಗು ಮತ್ತು ಪಶ್ಚಿಮ ಘಟ್ಟಗಳ ಇತರ ಜಿಲ್ಲೆಗಳಲ್ಲಿ ಮರಗಳನ್ನು ಕಡಿಯುತ್ತಿರುವುದಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ 3388/2009 (MA 1379/2017)ಯೊಂದು ನವೆಂಬರ್ 3, 2006 ರಂದು ದಾಖಲಾಗಿತ್ತು. ಅರ್ಜಿ ಸಂಬಂಧ ಎನ್'ಡಿಟಿ ಡಿಸೆಂಬರ್ 13, 2022 ರಂದು ಆದೇಶಗಳನ್ನು ಹೊರಡಿಸಿತ್ತು. ಇದಕ್ಕೂ ಮುನ್ನ ಕರ್ನಾಟಕ ಹೈಕೋರ್ಟ್ನಲ್ಲಿಯೂ ಪ್ರಕರಣದ ವಿಚಾರಣೆ ನಡೆದಿತ್ತು.
ಇದನ್ನೂ ಓದಿ: ಕೊಡಗು: ಅರಣ್ಯದಲ್ಲಿನ ಬೆಂಕಿ ಅವಘಡಗಳಿಗೆ ಭೂ ಸಮಸ್ಯೆಯೇ ಕಾರಣ!
ಕೊಡಗು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಮತ್ತು ಕ್ಷೇತ್ರ ಅಧಿಕಾರಿಗಳು ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳ ಲಾಭವನ್ನು ಪಡೆದುಕೊಂಡಿದ್ದು, ಪರಿಸರ ಸೂಕ್ಷ್ಮ ಮತ್ತು ಜೀವವೈವಿಧ್ಯದಿಂದ ಸಮೃದ್ಧವಾಗಿರುವ ಅರಣ್ಯ ಪ್ರದೇಶಗಳಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡಿದ್ದಾರೆ. ಅಧಿಕಾರಿಗಳು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಅನುಸರಿಸುತ್ತಿಲ್ಲ ಎಂದು ಎನ್ಜಿಟಿ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಅರಣ್ಯ ನಾಶವಾಗದಂತೆ ಖಚಿತಪಡಿಸಿಕೊಳ್ಳಲು ವಿವರವಾದ ಪರಿಶೀಲನೆ ಮತ್ತು ಮಾರ್ಗಸೂಚಿಗಳನ್ನು ನೀಡುವಂತೆ ಸೂಚನೆ ನೀಡಿದೆ. ಎನ್ಜಿಟಿ ಆದೇಶವಿದ್ದರೂ ಕೂಡ ಸಮಿತಿ ಇನ್ನೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಮಿತಿಯ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದು, “ಸಮಿತಿಯು ಎರಡು ಬಾರಿ ಸಭೆ ನಡೆಸಿತ್ತು. ವರದಿ ವಿಳಂಬವಾಗಿದೆ ನಿಜ. ಅರಣ್ಯ ಇಲಾಖೆಗೆ ಸಂಬಂಧಿಸಿ ದಾಖಲಾಗಿರುವ ಮೊದಲ ಇದಾಗಿದ್ದು, ವರದಿ ಸಲ್ಲಿಕೆ ಬಗ್ಗೆ ನಾವು ಜಾಗರೂಕರಾಗಿದ್ದೇವೆ. ನಿರಪರಾಧಿಗಳನ್ನು ಶಿಕ್ಷಿಸಲು ನಾವು ಬಯಸುತ್ತಿಲ್ಲ. ಹೀಗಾಗಿ ವರದಿ ಸಲ್ಲಿಕೆಗೆ ವಿಳಂಬವಾಗುತ್ತಿದೆ. ಸಮಿತಿಗೆ ಕೇವಲ ಎನ್'ಜಿಟಿಗೆ ವರದಿ ಸಲ್ಲಿಕೆ ಮಾಡುವ ಅಧಿಕಾರವಷ್ಟೇ ಅಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ಇದೆ. ಈ ಪ್ರಕರಣ ಅತ್ಯಂತ ಸಂಕೀರ್ಣವಾಗಿದೆ. ಅರಣ್ಯ ಸಿಬ್ಬಂದಿ, ಶಾಸಕರುಮತ್ತು ನಿೃವತ್ತ ರಕ್ಷಣಾ ಸಿಬ್ಬಂದಿಗಳು ಒಳಗೊಂಡಿದ್ದಾರೆಂದಷ್ಟೇ ಅಲ್ಲ, ಈ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹವಾಮಾನ ಮತ್ತು ಮಾನವ ನಿರ್ಮಿತ ವಿಪತ್ತುಗಳನ್ನು ಈ ಪ್ರದೇಶ ಎದುರಿಸುತ್ತಿದೆ ಎಂದು ಹೇಳಿದ್ದಾರೆ.