ಸಲಿಂಗ ವಿವಾಹ 'ಭಾರತೀಯ ಸಂಸ್ಕೃತಿ'ಗೆ ವಿರುದ್ಧವಾಗಿದ್ದು, ಕಾನೂನುಬದ್ಧಗೊಳಿಸಬಾರದು: ಮಠಾಧೀಶರು

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಮುಂದಾಗಿರುವ ಸುಪ್ರೀಂಕೋರ್ಟ್‌ನ ಕ್ರಮವನ್ನು ಮಂಗಳೂರಿನ ವಿವಿಧ ಮಠಾಧೀಶರು ಖಂಡಿಸಿದ್ದು, ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಮುಂದಾಗಿರುವ ಸುಪ್ರೀಂಕೋರ್ಟ್‌ನ ಕ್ರಮವನ್ನು ಮಂಗಳೂರಿನ ವಿವಿಧ ಮಠಾಧೀಶರು ಖಂಡಿಸಿದ್ದು, ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಆವರಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗಳು, ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದರೆ, ಮಠಾಧೀಶರು ಇದರ ವಿರುದ್ಧ ಪ್ರತಿಭಟಿಸಲಿದ್ದಾರೆಂದು ಎಚ್ಚರಿಸಿದ್ದಾರೆ.

“ಭಾರತದಲ್ಲಿ ವಿವಾಹವೆಂಬುದು ಪವಿತ್ರ ಬಂಧವಾಗಿದೆ. ಇದು ಕುಟುಂಬಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಭಾರತದಲ್ಲಿ ಪುರುಷ ಮತ್ತು ಮಹಿಳೆಯ ನಡುವಿನ ವಿವಾಹಗಳನ್ನು ಮಾತ್ರ ಒಪ್ಪಿಕೊಳ್ಳಲಾಗುತ್ತದೆ. ಮದುವೆಯು ಮಕ್ಕಳನ್ನು ಹೊಂದುವುದು ಮತ್ತು ಕುಟುಂಬ ವಂಶಾವಳಿಯನ್ನು ಮುಂದುವರೆಸುವುದಾಗಿದೆ. ಇದು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬುತ್ತದೆ ಮತ್ತು ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುತ್ತದೆ, ಆದರೆ ಸಲಿಂಗ ವಿವಾಹಗಳಲ್ಲಿ, ಅಂತಹ ಮೌಲ್ಯಗಳು, ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಸಲಿಂಗ ವಿವಾಹದಿಂದ ದತ್ತು, ವಿಚ್ಛೇದನ ಮತ್ತು ಉತ್ತರಾಧಿಕಾರಿ ನಿಯಮಗಳು ಬದಲಾಗುತ್ತವೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ್ದೇ ಆದರೆ, ಮುಂದಿನ ದಿನಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರೆಂದು ಕರೆದುಕೊಂಡು ಮೀಸಲಾತಿಗೆ ಒತ್ತಾಯಿಸುತ್ತಾರೆ.

ಇದು ನಮ್ಮ ಸಮಾಜದಲ್ಲಿ ಅಂತ್ಯವಿಲ್ಲದ ಸಮಸ್ಯೆಗಳನ್ನು ಮತ್ತಷ್ಟು ಸೃಷ್ಟಿಸುತ್ತದೆ. ಈ ಗುಂಪುಗಳು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಮ್ಮ ಬೇರುಗಳಲ್ಲಿ ಹೇರುವ ಮೂಲಕ ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿವೆ. ಸಲಿಂಗ ವಿವಾಹವು ಭಾರತೀಯ ಸಂಸ್ಕೃತಿಗೆ ಅಪಾಯವಾಗಿದೆ ಮತ್ತು ಅದನ್ನು ಕಾನೂನುಬದ್ಧಗೊಳಿಸಬಾರದು. ಅದನ್ನು ಕಾನೂನುಬದ್ಧಗೊಳಿಸಿದ್ದೇ ಆದರೆ, ನಾವು ಅದನ್ನು ನ್ಯಾಯಾಲಯ ಮೆಟ್ಟಿಲೇರುತ್ತೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com