ಎಲ್ಲಾ ರಾಜಕೀಯ ಅಪಪ್ರಚಾರ ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದೆ: ಸಚಿವ ರಾಮಲಿಂಗಾರೆಡ್ಡಿ

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡುವ ಮೊದಲು, ಪ್ರತಿಪಕ್ಷಗಳ ನಾಯಕರು ಮತ್ತು ಇತರರು ಯೋಜನೆ ಯಶಸ್ವಿಯಾಗುವುದಿಲ್ಲ, ನೌಕರರಿಗೆ ವೇತನ ನೀಡಲು ಹೆಣಗಾಡುತ್ತಿರುವ ಸಾರಿಗೆ ನಿಗಮಗಳು ಮುಳುಗಲಿವೆ ಎಂದೆಲ್ಲಾ ಟೀಕೆ ಮಾಡಲಾಗುತ್ತಿತ್ತು...
ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡುವ ಮೊದಲು, ಪ್ರತಿಪಕ್ಷಗಳ ನಾಯಕರು ಮತ್ತು ಇತರರು ಯೋಜನೆ ಯಶಸ್ವಿಯಾಗುವುದಿಲ್ಲ, ನೌಕರರಿಗೆ ವೇತನ ನೀಡಲು ಹೆಣಗಾಡುತ್ತಿರುವ ಸಾರಿಗೆ ನಿಗಮಗಳು ಮುಳುಗಲಿವೆ ಎಂದೆಲ್ಲಾ ಟೀಕೆ ಮಾಡಲಾಗುತ್ತಿತ್ತು. ಆದರೆ, ಎಲ್ಲಾ ಅಪಪ್ರಚಾರ ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದೆ ಎಂದು ಸಚಿವ ರಾಮಲಿಂಗಾರೆಡ್ಡಿಯವರು ಮಂಗಳವಾರ ಹೇಳಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) 62ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿರುವ ಸಚಿವರು, ಜೂನ್ 11 ರಿಂದ ಸುಮಾರು 30 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಯೋಜನೆಗೂ ಮುನ್ನ ಸರ್ಕಾರಿ ಬಸ್ ಗಳಲ್ಲಿ ದಿನಕ್ಕೆ ಸರಾಸರಿ ಒಟ್ಟು 84 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಸಂಖ್ಯೆ ಇದೀಗ ಹೆಚ್ಚಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯಾದ ‘ಶಕ್ತಿ ಯೋಜನೆ’ಯು ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ. ಆದರೆ ಉಚಿತ ಪ್ರಯಾಣ ಕೊಟ್ಟಿರುವುದು ಕೆಲವರಿಗೆ ತಡೆಯಲಿಕ್ಕಾಗುತ್ತಿಲ್ಲ. ಪ್ರತಿದಿನ ನಾಲ್ಕೂ ನಿಗಮದಲ್ಲಿ ಒಂದು ಲಕ್ಷದ ಐವತ್ತಾರು ಸಾವಿರ ಟ್ರಿಪ್ ನೀಡಲಾಗುತ್ತಿದೆ. ಯಾವುದಾದರೊಂದು ಸಣ್ಣ ಘಟನೆ ಆಗಿಬಿಟ್ಟರೆ ಅದನ್ನೇ ದೊಡ್ಡದು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಲಾಗುತ್ತಿದೆ. ಆದರೆ, ಎಲ್ಲಾ ರಾಜಕೀಯ ಅಪಪ್ರಚಾರ ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದೆ. ಇದಕ್ಕೆ ಸಿಬ್ಬಂದಿಯ ಪ್ರಯತ್ನ ಕೂಡ ಕಾರಣ’ ಎಂದು ತಿಳಿಸಿದರು.

ಸಮಾರಂಭದಲ್ಲಿ ಅಪಘಾತ ಪರಿಹಾರ ನಿಧಿ ಯೋಜನೆಯಡಿ 20 ನೂತನ ಬೊಲೆರೋ ವಾಹನಗಳ ಸೇರ್ಪಡೆ, ‘ಶಕ್ತಿ’ ಯೋಜನೆಯ ಕುರಿತ ವಿಶೇಷ ಆಂತರಿಕ ನಿಯತಕಾಲಿಕ ‘ಸಾರಿಗೆ ಸಂಪದ’ ಬಿಡುಗಡೆ, ಸಾರಿಗೆ ಮಿತ್ರ ಹೆಚ್. ಆರ್.‌ ಎಂ. ಎಸ್‌ ಯೋಜನೆ ಹಾಗೂ ಸಾರಿಗೆ ವಿದ್ಯಾ ಚೇತನ ಯೋಜನೆಗೆ ಚಾಲನೆ, ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್, ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ.ಜಿ, ಆಡಳಿತ ಮಂಡಳಿ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com