ಚಾಮರಾಜನಗರ: ಆಸ್ತಿ ವಿವಾದ; ದಲಿತ ಸಮುದಾಯದಿಂದ ಎರಡು ದಲಿತ ಕುಟುಂಬಗಳಿಗೆ ಬಹಿಷ್ಕಾರ
ಚಾಮರಾಜನಗರ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲೆಯ ದಲಿತ ಸಮುದಾಯವು ನಾಲ್ಕು ವರ್ಷಗಳ ಕಾಲ ತಮ್ಮದೇ ಸಮುದಾಯಕ್ಕೆ ಸೇರಿದ ಎರಡು ಕುಟುಂಬಗಳಿಗೆ ಬಹಿಷ್ಕಾರ ವಿಧಿಸಿದೆ.
ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಸದಸ್ಯರು ದಲಿತರ ಕಾಲೋನಿಯಲ್ಲಿರುವ ಮನೆಗಳಲ್ಲಿ ಊಟ ಮಾಡುವಂತಿಲ್ಲ ಮತ್ತು ಅಂಗಡಿಗಳಿಗೆ ತೆರಳುವಂತಿಲ್ಲ. ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗುವುದಿಲ್ಲ ಅಥವಾ ಭಾಗವಹಿಸಲು ಅನುಮತಿಸುವುದಿಲ್ಲ.
ಈ ಕುಟುಂಬಗಳ ಮಕ್ಕಳೂ ಕಾಲೋನಿಯ ಇತರ ಮಕ್ಕಳೊಂದಿಗೆ ಆಟವಾಡುವಂತಿಲ್ಲ ಎಂದು ಹೇಳಲಾಗಿದೆ.
ದಲಿತ ಸಮುದಾಯದ ಹಿರಿಯರಾದ ಯಜಮಾನ್ ಚನ್ನಂಜಯ್ಯ, ನಿವೃತ್ತ ಶಿಕ್ಷಕ ಮತ್ತು ನಗರ ಪಾಲಿಕೆಯಲ್ಲಿ ನೀರು ಸರಬರಾಜು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಹದೇವಯ್ಯ ಅವರು ಬಹಿಷ್ಕಾರದ ಆದೇಶವನ್ನು ನೀಡಿದ್ದಾರೆ. ಬಹಿಷ್ಕಾರದ ಆದೇಶವನ್ನು ಪಂಚಾಯಿತಿ ನಡೆಸುವ ಸಮಯದಲ್ಲಿ ನೀಡಲಾಗಿದೆ.
ಬಹಿಷ್ಕಾರಕ್ಕೊಳಗಾಗಿರುವ ರಾಮಸಮುದ್ರ ವಾರ್ಡ್ನ ಎರಡು ಕುಟುಂಬಗಳು, ತಮಗೆ ಮಾನಸಿಕ ಹಿಂಸೆ ಮತ್ತು ಅವಮಾನ ಮಾಡಲಾಗುತ್ತಿದೆ. ಯಾರೊಬ್ಬರೂ ತಮಗೆ ನ್ಯಾಯ ನೀಡುತ್ತಿಲ್ಲ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ತಮ್ಮ ಕುಟುಂಬದವರ ಮೇಲಿನ ಬಹಿಷ್ಕಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸಂತ್ರಸ್ತರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇದರೊಂದಿಗೆ ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ