ಬೆಂಗಳೂರು: ಕರ್ನಾಟಕದಲ್ಲಿ ಸುಮಾರು 1,100 ರೂಪಾಯಿ ಇದ್ದ ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ನಿನ್ನೆ ಮಂಗಳವಾರ ಕೇಂದ್ರ ಸರ್ಕಾರ ಮೊದಲಿನಂತೆ ಸಬ್ಸಿಡಿ ಮೊತ್ತ ನೀಡಿ 900 ರೂಪಾಯಿಗೆ ಇಳಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಾವು I.N.D.I.A ನಾಯಕರ ಸಭೆಗೆ ಕರೆದಾಗ, ಬಿಜೆಪಿಯವರು ಕೂಡ ತರಾತುರಿಯಲ್ಲಿ ಎನ್ಡಿಎ ನಾಯಕರ ಸಮಾವೇಶವನ್ನು ಕರೆದರು. ಈಗ ನಮ್ಮ ಸರ್ಕಾರ 2,000 ರೂಪಾಯಿ ನೀಡುವ ಮೂಲಕ ಜನರನ್ನು ಸಬಲೀಕರಣಗೊಳಿಸಲು ಗೃಹ ಲಕ್ಷ್ಮಿಯನ್ನು ಘೋಷಿಸಲು ತಯಾರಿ ನಡೆಸುತ್ತಿರುವಾಗ ಅವರು ಎಲ್ಪಿಜಿ ಬೆಲೆಯನ್ನು 200 ರೂಪಾಯಿ ಕಡಿಮೆಗೊಳಿಸಿ ಕೌಂಟರ್ ನೀಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸುಮಾರು 500 ರಿಂದ 1,100 ರೂಪಾಯಿಗೆ ಅಸಹಜವಾಗಿ ಬೆಲೆ ಏರಿಕೆ ಮಾಡಿ ಕೇವಲ 200 ರೂಪಾಯಿಗೆ ಈಗ ಇಳಿಸುತ್ತಿದ್ದಾರೆ. ಇದು ಕೇವಲ ಗಿಮಿಕ್ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಟೀಕಿಸಿದರು. ಕಾಂಗ್ರೆಸ್ ಪಕ್ಷ ಸಾಮಾನ್ಯ ಜನರಿಗೆ ಪ್ರಯೋಜನಗಳನ್ನು ನೀಡಿದಾಗ ಅದನ್ನು ಉಚಿತ ನೀಡಿ ಜನರನ್ನು ಮೋಸ ಮಾಡುವುದು ಎಂದು ಟೀಕಿಸುವ ಬಿಜೆಪಿಯವರು ಅವರು ಏನಾದರೊಂದು ಯೋಜನೆ ತಂದಾಗ ಅದನ್ನು ಜನರ ಸಬಲೀಕರಣಕ್ಕೆ ಎಂದು ಕರೆಯುವುದು ಏಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕೆಲವೆಡೆ ನಮ್ಮ ಯೋಜನೆಗಳನ್ನು ಬಿಜೆಪಿಯವರು ನಕಲು ಮಾಡುತ್ತಿದ್ದಾರೆ ಎಂದ ಸಚಿವ ಈಶ್ವರ ಖಂಡ್ರೆ, ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಇಳಿಸುವಂತೆ ಮನವಿ ಮಾಡುತ್ತೇನೆ. ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಿದ ಬಿಜೆಪಿ ಈಗ ಎಲ್ಪಿಜಿ ಬೆಲೆ ಇಳಿಕೆ ಮಾಡಿದೆ ಎಂದರು.
Advertisement