ವಿಧಾನಮಂಡಲ ಅಧಿವೇಶನ: ಅಭಿವೃದ್ಧಿ ಪಥದಲ್ಲಿ ಮುಂಚೂಣಿಯ ರಾಜ್ಯವಾಗಿ ಕರ್ನಾಟಕ ದಾಪುಗಾಲು; ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಭಾಷಣ

ವಿಧಾನಮಂಡಲ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದ್ದು, ವಿಧಾನಮಂಡಲದಲ್ಲಿ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​​ ಅವರು ಭಾಷಣ ಮಾಡಿದರು.
ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುತ್ತಿರುವ ರಾಜ್ಯಪಾಲರು.
ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುತ್ತಿರುವ ರಾಜ್ಯಪಾಲರು.

ಬೆಂಗಳೂರು: ವಿಧಾನಮಂಡಲ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದ್ದು, ವಿಧಾನಮಂಡಲದಲ್ಲಿ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​​ ಅವರು ಭಾಷಣ ಮಾಡಿದರು.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್​ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಮಂಡಲಕ್ಕೆ ಆಗಮಿಸಿದ್ದು, ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ವಾಗತಿಸಿದರು.

15 ನೇ ವಿಧಾನಮಂಡಲ ಅಧಿವೇಶನಕ್ಕೆ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, ಸರ್ಕಾರವು ರೈತರು, ಕಾರ್ಮಿಕರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದ್ದು, ಅಭಿವೃದ್ಧಿ ಪಥದಲ್ಲಿ ಮುಂಚೂಣಿಯ ರಾಜ್ಯವಾಗಿ ದಾವುಗಾಲಿಡುತ್ತಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಮಾದರಿಯನ್ನು ನನ್ನ ಸರ್ಕಾರ ಅನುಸರಿಸುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ಕ್ರಮಿಸುವ ವಿಶ್ವಾಸ ನನಗಿದೆ. ರೈತ ಮತ್ತು ಅವನ ಕುಟುಂಬವನ್ನು ಸದೃಢಗೊಳಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿಯನ್ನು ನೇಕಾರರು, ಕೃಷಿ ಕಾರ್ಮಿಕರು, ಮುಂತಾದ ವಿವಿಧ ವರ್ಗಗಳಿಗೆ ವಿಸ್ತರಿಸಲಾಗಿದೆ. ಅದರಂತೆ 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೇರ ನಗದು ಮೂಲಕ ವರ್ಗಾಯಿಸಲಾಗಿದೆ. ರೈತಶಕ್ತಿ ಯೋಜನೆಯಡಿ ಕೃಷಿ ಯಾಂತ್ರೀಕರಣ ಪ್ರೋತ್ಸಾಹಿಸಲು ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ ಐದು ಎಕರೆಗೆ ಡೀಸೆಲ್‌ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ, 400 ಕೋಟಿ ರೂಪಾಯಿಗಳನ್ನು ಒದಗಿಸಿದ್ದು, 386.98 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.ಇದರಿಂದ 53.22 ಲಕ್ಷ ರೈತರುಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.

ಕೀಟ, ರೋಗ, ಕಳೆಬಾಧೆ ಮತ್ತು ಮಣ್ಣಿನ ಪೋಷಕಾಂಶದ ಸಮರ್ಪಕ ನಿರ್ವಹಣೆಗಾಗಿ ಕೃಷಿ ಸಂಜೀವಿನಿ ಯೋಜನೆಯಡಿ 160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ಲೋಕಾರ್ಪಣ ಮಾಡಿದ್ದು, 2022-23ನೇ ಸಾಲಿಗೆ 64 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯವನ್ನು ಅನುಷ್ಠಾನ ಮಾಡಲಾಗಿದೆ.

ಸರ್ಕಾರವು ಅಮೃತ ಮಹೋತ್ಸವದ ಅಂಗವಾಗಿ 750 ಅಮೃತ ರೈತ / ಮೀನುಗಾರರ / ನೇಕಾರರ ಉತ್ಪಾದಕರ ಸಂಸ್ಥೆಗಳನ್ನು ರಚಿಸಿರುವುದಾಗಿ ಘೋಷಿಸಿದ್ದು, ಇಲ್ಲಿಯವರೆಗೆ 364 ಸಂಸ್ಥೆಗಳನ್ನು ನೊಂದಾಯಿಸಲಾಗಿದೆ. 24.57 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ. ಪುಸಕ್ತ ಸಾಲಿನಿಂದ ರಾಯಚೂರು ಕೃಷಿ ವಿಶ್ವ ವಿದ್ಯಾನಿಲಯದ ಅಧೀನದಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನವಾಗಿ ಕೃಷಿ ಈ ಕಾಲೇಜನ್ನು ಪ್ರಾರಂಭಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ 50,335 ರೈತರ ತಾಕುಗಳಲ್ಲಿ ಸುಮಾರು 27,910 ಹೆಕ್ಟೇರ್ ಪ್ರದೇಶದಲ್ಲಿ ಇಲಾಖೆಯ ವತಿಯಿಂದ ತೋಟಗಾರಿಕಾ ಬೆಳೆಗಳನ್ನು ವಿಸ್ತರಿಸಲಾಗಿದೆ. 60 ಲಕ್ಷ ಸಂಖ್ಯೆ ತೋಟಗಾರಿಕ ಬೆಳೆಗಳ ಸಸಿ | ಕಸಿಗಳನ್ನು ರೈತಾಪಿ ವರ್ಗಕ್ಕೆ ವಿತರಿಸಲಾಗಿದೆ ಮತ್ತು ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು 484 ಸಂಖ್ಯೆಯ ಕೃಷಿ ಹೊಂಡ ಘಟಕಗಳನ್ನು ನಿರ್ಮಿಸಲಾಗಿದೆ ಎಂದರು.

ಗೋ ಸಂಪತ್ತಿನ ರಕ್ಷಣೆಗಾಗಿ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಅಶಕ್ತ ಅನಾರೋಗ್ಯ ಪೀಡಿತ ನಿರ್ಗತಿಕ, ರೈತರು ಸಾಕಲಾಗದ ಜಾನುವಾರುಗಳನ್ನು ಸಂರಕ್ಷಣೆ ಮಾಡಲು ರಾಜ್ಯ ಸರ್ಕಾರದಿಂದ 100 ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಗೋ ಶಾಲೆಗಳಲ್ಲಿರುವ ಜಾನುವಾರುಗಳನ್ನು ಸರ್ಕಾರಿ ಗೋ ಸಂರಕ್ಷಿಸಲು ಪುಣ್ಯ ಕೋಟಿ ಯೋಜನೆ ಪ್ರಾರಂಭಿಸಲಾಗಿದೆ.

ಚರ್ಮ ಗಂಟು ‌ರೋಗ ನಿಯಂತ್ರಣಕ್ಕೆ ಒಂದು ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ. ಪರಿಹಾರ ಧನವಾಗಿ 37 ಕೋಟಿ ಬಿಡುಗಡೆ ಮಾಡಲಾಗಿದೆ. ಮೀನುಗಾರರ ಆದಾಯ ಹೆಚ್ಚಿಸಲು 2758.70 ಲಕ್ಷ ಸಹಾಯಧನ ನೀಡುವ ಮೂಲಕ ಮತ್ಸ್ಯ ಸಂಪದ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ.

2022-23 ಸಾಲಿನಲ್ಲಿ 15,066 ಕೋಟಿ ಅಲ್ಪಾವಧಿಯ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಡಿಸೆಂಬರ್ ಅಂತ್ಯಕ್ಕೆ 20.19 ಲಕ್ಷ ರೈತರಿಗೆ ವಿತರಣೆ. 29,638 ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ 1215 ಕೋಟಿ ಸಾಲ ವಿತರಿಸಲಾಗಿದೆ‌. ಯಶಸ್ವಿನಿ ಯೋಜನೆಯಡಿ 32.60 ಲಕ್ಷ ಸದಸ್ಯರನ್ನು ನೊಂದಾಯಿಸಲಾಗಿದೆ. ಜನವರಿ ತಿಂಗಳಿನಿಂದ ಚಿಕಿತ್ಸಾ ಸೌಲಭ್ಯ ಪ್ರಾರಂಭಿಸಲಾಗಿದೆ.

ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ 6038.98 ಕೋಟಿ ರೂಪಾಯಿಗಳ ಬಂಡವಾಳದಲ್ಲಿ ಪ್ರಸ್ತುತ ವರ್ಷದಲ್ಲಿ 27.85 ಲಕ್ಷ ಕುಟುಂಬಗಳ, 50 ಲಕ್ಷ ಜನರಿಗೆ ಕೆಲಸ ಒದಗಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ 9556 ಹೆಚ್ಚುವರಿ ಶಾಲಾ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ 1923.5 ಕೋಟಿ ಅನುದಾನ ನೀಡಲಾಗಿದೆ. ಬೀದರ್, ಹಾವೇರಿ, ಚಾಮರಾಜನಗರ, ಕೊಡಗು, ಕೊಪ್ಪಳ, ಹಾಸನದಲ್ಲಿ 7 ವಿವಿ ಸ್ಥಾಪನೆ ಹಾಗೂ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೆ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 106314 ವಿದ್ಯಾರ್ಥಿನಿಯರಿಗೆ ಓಬವ್ವ ಆತ್ನ ರಕ್ಷಣಾ ಕಲೆ ಅಡಿಯಲ್ಲಿ ಆತ್ಮ ರಕ್ಷಣಾ ತರಬೇತಿ ನೀಡಲಾಗುತ್ತಿದೆ.

ಅಮೃತ ಅಂಗನವಾಡಿ ಯೋಜನೆಯಡಿ 750 ಅಂಗನವಾಡಿ ಕೇಂದ್ರ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂನಂತೆ 7.5 ಕೋಟಿ ನೆರವು ನೀಡಲಾಗುತ್ತಿದೆ. 4244 ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಕ್ಕೆ 268.98 ಕೋಟಿ ಅನುದಾನ ಮಂಜೂರಾತಿ ಮಾಡಲಾಗಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್ ಅನುಮೋದನೆ, 271 ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಲಾಗಿದೆ.

ಕೇಂದ್ರ ರೈಲ್ವೇ ಸಚಿವಾಲಯದೊಂದಿಗೆ 50:50 ವೆಚ್ಚದ ಹಂಚಿಕೆಯ ಆಧಾರದಲ್ಲಿ 9 ಹೊಸ ರೈಲು ಮಾರ್ಗಗಳ ಯೋಜನೆ ತೆಗೆದುಕೊಳ್ಳಲಾಗುತ್ತಿದೆ.  800 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗಿದೆ. 2022-23 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ 3000 ಕೋಟಿ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 600 ಕೋಟಿ ಆಯವ್ಯಯ ದಲ್ಲಿ ನಿಗದಿ ಮಾಡಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಇಲಾಖೆಯಲ್ಲಿ 16,811 ಹುದ್ದೆ ಭರ್ತಿ ಮಾಡಲಾಗಿದೆ. ಅಪರಾಧ ಪತ್ತೆಗೆ 8 ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ. 410 ಕೋಟಿ ಅನುದಾನದಲ್ಲಿ 4 ಹೊಸ ಬಂಧಿಖಾನೆ ನಿರ್ಮಾಣ ಮಾಡಲಾಗುತ್ತಿದೆ. ಅಗ್ನಿಶಮನ ಮತ್ತು ರಕ್ಷಣಾ ಕಾರ್ಯಾಚರಣೆಗೆ ದೇಶದಲ್ಲಿ ಅತಿ ಎತ್ತರದ 90 ಮೀಟರ್ ಏರಿಯಲ್ ಪ್ಲಾಟ್ ಫಾರ್ಮ್ ಲ್ಯಾಡರ್ ವಾಹನ 31 ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ.

ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯಗತಗೊಳಿಸಲು ಕ್ರಮ ಕೈಗೊಂಡಿದೆ. ರಾಜಸ್ವ ಸಂಗ್ರಹಣೆಯಲ್ಲಿ 2023 ರಲ್ಲಿ ಶೇ. 91 ರಷ್ಟು ಸಾಧಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2033 ಕ್ಕೆ ಶೇ. 21 ರಷ್ಟು ಹೆಚ್ಚಳವಾಗಿದೆ‌ ಎಂದು ಮಾಹಿತಿ ನೀಡಿದರು.

ವಿಧಾನಸಭೆ, ಪರಿಷತ್ ನಲ್ಲಿ ಕಲಾಪ ಆರಂಭ: ಅಗಲಿದ ಗಣ್ಯರಿಗೆ ಸಂತಾಪ

ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ, ಪೆರಿಟಿ ತಿಮ್ಮಪ್ಪ ಹೆಗಡೆ, ಶಿವಾನಂದ್ ಅಂಬಡಗಟ್ಟಿ, ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಡಾ. ಎಂಕೆ ಪಾಂಡುರಾಂಗ ಶೆಟ್ಟಿ, ವಾಣಿ ಜಯರಾಂ, ಬಿ.ಕೆ.ಎಸ್ ವರ್ಮಾ, ಹಿರಿಯ ಸಂಶೋಧಕ ಸಾಹಿತಿ ಡಾ.ಚಂದ್ರಶೇಖರ ಸಾರಾ ಅಬೂಬಕ್ಕರ್, ಚಂದ್ರಶೇಖರ ಕೆದ್ಲಾಯ, ಕೆವಿ ತಿರುಮಲೇಶ್ ಅವರಿಗೆ ಸಂತಾಪ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com