ಮೈಸೂರು: ಬೃಹತ್ ಉದ್ಯೋಗ ಮೇಳ ಆಯೋಜಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜೀವ್ ಮುಂದು!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆ.ಆರ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾರ್ಚ್ 10 ರಿಂದ ನಗರದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆ.ಆರ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾರ್ಚ್ 10 ರಿಂದ ನಗರದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದಾರೆ.

ಕುವೆಂಪುನಗರದ ಪ್ರಮತಿ ಹಿಲ್ ವ್ಯೆ ಅಕಾಡೆಮಿ ಶಾಲೆಯಲ್ಲಿ ಉದ್ಯೋಗ ಮೇಳ ನಡೆಯಲಿದ್ದು, 50ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿವೆ.

5000 ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಈ ಬೃಹತ್ ಉದ್ಯೋಗ ಮೇಳದ ಸದುಪಯೋಗಪಡಿಸಿಕೊಳ್ಳಬೇಕೆಂದು ಉದ್ಯೋಗ ಮೇಳದ ಆಯೋಜಕರೂ ಆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಮನವಿ ಮಾಡಿಕೊಂಡಿದ್ದಾರೆ.

ಮೇಳದಲ್ಲಿ ಪಾಲ್ಗೊಳ್ಳುವ ಪದವೀಧರರು ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಮಾರ್ಚ್ 4ರಂದು ಬೆಳಗ್ಗೆ 9.30ರಿಂದ ಉದ್ಯೋಗ ಪೂರ್ವ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.

ಮಾರ್ಚ್ 10 ರಂದು ಬೆಳಗ್ಗೆ 9.30ಕ್ಕೆ ಪ್ರಾರಂಭವಾಗುವ ಉದ್ಯೋಗ ಮೇಳದಲ್ಲಿ 10ನೇ ತರಗತಿ, ದ್ವಿತೀಯ ಪಿಯುಸಿ, ಐಟಿಐ, ಜೆಒಸಿ, ಡಿಪ್ಲೊಮಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಅಭ್ಯರ್ಥಿಗಳಿಗೆ ಉದ್ಯೋಗ ಪೂರ್ವ ಸಂದರ್ಶನ ಇರುವುದಿಲ್ಲ ಎಂದು ವಿವರಿಸಿದರು.

ಮಾರ್ಚ್ 11ರಂದು ಬೆಳಗ್ಗೆ 9.30ರಿಂದ ನಡೆಯುವ ಉದ್ಯೋಗ ಮೇಳದಲ್ಲಿ ಉದ್ಯೋಗ ಪೂರ್ವ ಸಂದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಪದವೀಧರರು, ಪಿ.ಜಿ. ಮತ್ತು ಇಂಜಿನಿಯರಿಂಗ್ ಪದವೀಧರ ಅಭ್ಯರ್ಥಿಗಳು ಸಾಮಾನ್ಯ ಜ್ಞಾನ, ಮೌಖಿಕ ಸಾಮರ್ಥ್ಯ ಹಾಗೂ 30 ನಿಮಿಷಗಳ ಕಾಲ ವಿಶ್ಲೇಷಣಾತ್ಮಕ ಕೌಶಲಗಳ ಬಗ್ಗೆ ಉತ್ತರಿಸಬೇಕಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹೆಲ್ಪ್‌ಲೈನ್ ಸಂಖ್ಯೆ 9513373737 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಬಳಿಕ ಚುನಾವಣೆ ಕುರಿತು ಮಾತನಾಡಿ, ಕಳೆದ 3 ಬಾರಿಯಿಂದಲೂ ಟಿಕೆಟ್ ಕೇಳುತ್ತಿದ್ದೇನೆ. ಈ ಬಾರಿಯೂ ಕೂಡ ಕೆ.ಆರ್ ಕ್ಷೇತ್ರದ ಬಿಜೆಪಿ ಟಿಕೆಟ್ ಕೇಳಿದ್ದು, ನನಗೆ ಟಿಕೆಟ್ ನೀಡಿ ಎಂದು ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೇನೆ‌ ಎಂದರು.

ಈಗಾಗಲೇ ಕೆಲವು ಬ್ರಾಹ್ಮಣ ಮುಖಂಡರು ಮಾಜಿ ಸಚಿವ ರಾಮದಾಸ್‌ಗೆ ಟಿಕೆಟ್ ನೀಡಬೇಡಿ ಎಂದಿದ್ದಾರೆ. ಅದು ಅವರ ಅಭಿಪ್ರಾಯವಾಗಿದೆ. ನಾನು ನನ್ನ ಇತಿಮಿತಿಯೊಳಗೆ ಸಮುದಾಯಕ್ಕೆ‌ ಕೆಲಸ ಮಾಡಿ ಕೊಟ್ಟಿದ್ದೇನೆ. ಅಗತ್ಯ ಬಿದ್ದಲ್ಲಿ ಸಮುದಾಯದ ಮುಖಂಡರ ಬೆಂಬಲ ಕೋರುತ್ತೇನೆ. ನಮ್ಮ ನಾಯಕರು ಯಡಿಯೂರಪ್ಪ, ಅಂದು ಪಕ್ಷ 3 ಕವಲಾಗಿ ಒಡೆದಿತ್ತು. ಹಾಗಾಗಿ ಯಡಿಯೂರಪ್ಪರನ್ನ ಬೆಂಬಲಿಸಿ ಕೆ‌ಜೆಪಿಯಿಂದ ಸ್ಪರ್ಧಿಸಿದ್ದೆ. ಅದಾದ ಮೇಲೆ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದರು, ಸಿಎಂ ಕೂಡ ಆಗಿದ್ದರು, ಇದೀಗ ಚುನಾವಣೆಗೆ ಬೇರೆ ಪಕ್ಷದಿಂದ ಸ್ಪರ್ಧೆ ಮಾಡುವ ಚರ್ಚೆಯಿಲ್ಲ. ನಾನು ಸ್ಪರ್ಧೆ ಮಾಡಲು ಬಿಜೆಪಿಯಿಂದಲೇ ಟಿಕೆಟ್ ಕೇಳುತ್ತಿದ್ದು, ಟಿಕೆಟ್ ಕೊಡುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com