ಬೆಂಗಳೂರು: ಅರಣ್ಯ ಇಲಾಖೆ ಸಿಬ್ಬಂದಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಬೇಸಿಗೆ ಕಾಲದ ತಾಪಮಾನ ದಿನೇ ದಿನೇ ಹೆಚ್ವಾಗುತ್ತಿದ್ದು ಹಲವು ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ನಂದಿಸಲು ಅರಣ್ಯ ಕಾವಲುಗಾರರು ಮತ್ತು ಇನ್ನಿತರ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಅರಣ್ಯ ಇಲಾಖೆ ಸಿದ್ದಗೊಂಡಿದೆ. ಸಿಎಂ ಬಿಎಸ್ ಬೊಮ್ಮಾಯಿ ಅವರೆ, ಯವರೆ, ನಿಮಗೆ ಸಾಮಾನ್ಯ ಜ್ಞಾನವೂ ಇಲ್ಲವೆ? ಎಂದು ಟೀಕಿಸಿದೆ.
ಬೇಸಿಗೆಯ ಕಾಲದಲ್ಲಿ ವರ್ಗಾವಣೆ ಮಾಡುವುದರಿಂದ ಅನಾನುಕೂಲಗಳೇ ಹೆಚ್ಚು. ಈಗಾಗಲೇ ಕಾಡ್ಗಿಚ್ಚು ನಂದಿಸಲು ಹೋದ ಕಾವಲುಗಾರ ಬೆಂಕಿಗೆ ಆಹುತಿಯಾಗಿದ್ದಾರೆ. ಒಬ್ಬ ಅಧಿಕಾರಿ ತೀವ್ರವಾಗಿ ಗಾಯಗೊಂಡಿದ್ದಾರೆ. ಎಷ್ಟೋ ಕಡೆ ಕಾವಲುಗಾರರಿಗೆ ವೇತನ ಕೂಡ ಪಾವತಿಯಾಗಿಲ್ಲ. ನಿತ್ಯವೂ ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಉಪವಲಯದ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು, ಕಾವಲುಗಾರರನ್ನು ವರ್ಗಾವಣೆ ಮಾಡಿದರೆ ಸೇವೆಗೆ ಹಾಜರಾಗುವ ಹೊಸ ಸಿಬ್ಬಂದಿ ಅರಣ್ಯ ಪ್ರದೇಶ ಅರಿತುಕೊಳ್ಳಲು ಪರದಾಡಬೇಕಾಗುತ್ತದೆ. ಅರಣ್ಯ ಸಂಪತ್ತು ಉಳಿಸಿಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿ ಇದೆ ಎಂದು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ.
ಆಯಾ ಅರಣ್ಯ ಪ್ರದೇಶದ ಸೂಕ್ಷ್ಮತೆಯ ಅನುಭವವಿಲ್ಲದವರಿಗೆ ಕಾಡ್ಗಿಚ್ಚು ನಂದಿಸಲು, ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೇಗೆ ಸಾಧ್ಯ? ಬೇಸಿಗೆ ಕಾಲ ಮುಗಿದ ಮೇಲೆ ವರ್ಗಾವಣೆ ಮಾಡಬಹುದಲ್ಲವೆ? ಇಂತಹ ಶತಮೂರ್ಖ ಸಲಹೆ ನೀಡಿದವರು ಯಾರು? ಕಾಡ್ಗಿಚ್ಚು ನಂದಿಸಲು ಈವರೆಗೂ ಆಧುನಿಕ ತಂತ್ರಜ್ಞಾನ ಏಕೆ ಅಳವಡಿಸಲು ಸಾಧ್ಯವಾಗಿಲ್ಲ? ಇಂದಿಗೂ ಕತ್ತಿ, ಕೋಲು, ಸೊಪ್ಪುಗಳ ಹಳೆ ಪದ್ದತಿಯನ್ನೇ ಏಕೆ ಅನುಸರಿಸುತ್ತಿದೆ ಇಲಾಖೆ? ಸಿಬ್ಬಂದಿಗೆ ಅಗತ್ಯವಾದ ಶೂ, ಜಾಕೆಟ್, ಬೆಂಕಿ ರಕ್ಷಕ ಕವಚಗಳನ್ನು ಕೊಡಲಾದರದಷ್ಟು ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.
Advertisement