ಬೆಂಗಳೂರು: ಪೊಲೀಸರ ಕಸ್ಟಡಿಯಲ್ಲಿದ್ದ 23 ವರ್ಷದ ಆರೋಪಿ ಲಾಕಪ್ ಡೆತ್; ಪ್ರಕರಣ ಸಿಐಡಿ ತನಿಖೆಗೆ!
ಬೆಂಗಳೂರು: ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದು,ಇದೊಂದು ಲಾಕಪ್ ಡೆತ್ ಕುಟುಂಬಿಕರು ಆರೋಪಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿದ್ದ ವಿನೋದ್ ಕಾಟನ್ ಪೇಟೆಯ ನಿವಾಸಿಯೇ ಆಗಿದ್ದು, ಪ್ರಕರಣವೊಂದರ ಸಂಬಂಧ ಬುಧವಾರ ಆತನನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಗುರುವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗಿತ್ತು. ಆದರೆ, ಗುರುವಾರ ಬೆಳಗ್ಗೆ 3.45ಕ್ಕೆ ಠಾಣೆ ಎಸ್ಎಚ್ಒ ಆರೋಪಿ ವಿನೋದ್ನನ್ನು ಗಮನಿಸಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಕಾಟನ್ಪೇಟೆ ಪೊಲೀಸರು ಜಾಮೀನು ರಹಿತ ವಾರೆಂಟ್ ಹಿನ್ನೆಲೆ ಆರೋಪಿ ವಿನೋದ್ನನ್ನು ಕರೆತಂದಿದ್ದರು, ನಿನ್ನೆ ಸಂಜೆ ಠಾಣೆಗೆ ಕರೆತಂದಿದ್ದರು. ವಿನೋದ್ ಮುಂಜಾನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನು. ಮುಂಜಾನೆ 3 ಗಂಟೆ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಪರಿಶೀಲನೆ ನಡೆಸಿದ್ದ ವೈದ್ಯರು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.
ಪೊಲೀಸರು ಕಸ್ಟೋಡಿಯಲ್ ಡೆತ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ. ಪ್ರಕರಣ ಸಂಬಂಧ ಕಮಿಷನರ್ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ) ಪ್ರಕಾರ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಲಾಗುವುದು, ಪ್ರಕರಣವನ್ನು ಕರ್ನಾಟಕ ರಾಜ್ಯ ಪೊಲೀಸ್ನ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
2017ರ ಏಪ್ರಿಲ್ 21ರಂದು ವಿನೋದ್ ವಿರುದ್ಧ ಕಾಟನ್ಪೇಟೆ ಪೊಲೀಸರು ಡಕಾಯಿತಿಗೆ ಯತ್ನಿಸಿದ ಪ್ರಕರಣ ದಾಖಲಿಸಿದ್ದರು. ಮೈಸೂರು ರಸ್ತೆಯ ಪಶುವೈದ್ಯಕೀಯ ಆಸ್ಪತ್ರೆಯ ಕಾಂಪೌಂಡ್ ಬಳಿ ದಾರಿಹೋಕರನ್ನು ದರೋಡೆ ಮಾಡಲು ಯೋಜಿಸುತ್ತಿದ್ದಾಗ ನಾಲ್ವರನ್ನು ಬಂಧಿಸಿದ್ದರು ಎಂದು ವರದಿಯಾಗಿದೆ. ವಿನೋದ್ ವಿರುದ್ಧ ನ್ಯಾಯಾಲಯವು ಮೂರು ಎನ್ಬಿಡಬ್ಲ್ಯೂಗಳನ್ನು ಹೊರಡಿಸಿದ ನಂತರ ಪೊಲೀಸರು ವಿನೋದ್ಗಾಗಿ ಹುಡುಕುತ್ತಿದ್ದರು.
ವಿನೊದ್ನನ್ನು ಠಾಣೆಗೆ ಕರೆತರುವಾಗ ಮದ್ಯದ ಅಮಲಿನಲ್ಲಿದ್ದ. ಸಂಜೆ 7 ಗಂಟೆ ಸುಮಾರಿಗೆ ಅವರನ್ನು ಸೆಲ್ಗೆ ಹಾಕಲಾಯಿತು. ಕಾರ್ಯವಿಧಾನದ ಪ್ರಕಾರ, ಎಸ್ಎಚ್ಒ ಪ್ರತಿ ಎರಡು ಗಂಟೆಗಳಿಗೊಮ್ಮೆ ಆರೋಪಿಯನ್ನು ಸೆಲ್ಗಳಲ್ಲಿ ಪರಿಶೀಲಿಸಬೇಕು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ