ಕೆಜಿಎಫ್ (ಕೋಲಾರ): ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಗೆ ಕೋಲಾರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಕೆಜಿಎಫ್ ಶಾಸಕಿ ರೂಪಕಲಾ ಚಾಲನೆ ನೀಡಿದ್ದು, ಈ ವೇಳೆ ರಾಬರ್ಟಸನ್ಪೇಟೆಯ ಕುವೆಂಪು ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಬಸ್ ಚಲಾಯಿಸಿ ನೆರೆದಿದ್ದವರ ಗಮನ ಸೆಳೆದರು.
ಶಕ್ತಿ ಯೋಜನೆಗೆ ಶಾಸಕಿ ರೂಪಕಲಾ ಚಾಲನೆ ನೀಡುತ್ತಿದ್ದಂತೆ, ಅಲ್ಲಿದ್ದ ಕಾರ್ಯಕರ್ತರು ಬಸ್ ಚಲಾಯಿಸುವಂತೆ ಕೇಳಿಕೊಂಡಿದ್ದಾರೆ. ಕೊನೆಗೆ ಎಲ್ಲರ ಒತ್ತಾಯಕ್ಕೆ ಮಣಿದ ಶಾಸಕಿ ಬಸ್ ಚಲಾಯಿಸಲು ಮುಂದಾದರು.
ಎರಡು ಬಾರಿ ಗೇರ್ ಸರಿಯಾಗಿ ಬೀಳದ ಕಾರಣ ಬಸ್ಸು ಹಿಮ್ಮುಖವಾಗಿ ಚಲಿಸಿತು. ಸ್ವಲ್ಪದರಲ್ಲಿಯೇ ಹಿಂಭಾಗದಲ್ಲಿದ್ದ ಖಾಸಗಿ ಬಸ್ಗೆ ಡಿಕ್ಕಿಯಾಗುವುದು ತಪ್ಪಿತು. ಈ ಸಂದರ್ಭದಲ್ಲಿ ಶಾಸಕಿಗೆ ಬಸ್ಸಿನ ಚಾಲಕ ಮಾರ್ಗದರ್ಶನ ಮಾಡಿದರು.
ನಂತರ ಶಾಸಕಿ ಬಸ್ನಲ್ಲಿ ಕುಳಿತು ಸ್ವಲ್ಪ ದೂರ ಪ್ರಯಾಣ ಮಾಡಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಕೂಗಿದರು.
Advertisement